ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಫೆಬ್ರವರಿ 21, 2018

ತಪ್ಪದೇ ಓದಿ: ಈ ಹತ್ತು ಕೆಟ್ಟ ಅಭ್ಯಾಸಗಳೇ ಆರೋಗ್ಯಕ್ಕೆ ಮಾರಕ

ಬೋಲ್ಡ್ ಸ್ಕೈ . ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/RFYbWv

ನಮ್ಮೆಲ್ಲರಲ್ಲಿಯೂ ಕೆಲವು ಕೆಟ್ಟ ಅಭ್ಯಾಸಗಳಿವೆ. ನಮಗೆ ಇದು ಕೆಟ್ಟದ್ದು ಎಂದು ಗೊತ್ತಿದ್ದರೂ ಉಪೇಕ್ಷಿಸಿ ಮುಂದುವರೆಸುತ್ತೇವೆ. ಕೆಲವು ಅಭ್ಯಾಸಗಳು ನಮಗೆ ಅರಿವಿಲ್ಲದೇ ಜರುಗುತ್ತಿರುತ್ತವೆ. ಕಾರಣವೇನೇ ಇರಲಿ, ಈ ಅಭ್ಯಾಸಗಳು ಅಪಾಯಕಾರಿಯಾಗಿದ್ದು ನಿಧಾನವಾಗಿ ನಮ್ಮನ್ನು ಸಾವಿನತ್ತ ದೂಡುತ್ತಿವೆ.

ಈ ಅಪಾಯವನ್ನು ಮುಂಗಂಡ ಹಿರಿಯರು, ಆಪ್ತರು ಈ ಬಗ್ಗೆ ನಿಮಗೆ ಹಿತವಚನವನ್ನು ನೀಡಿ ಈ ಅಭ್ಯಾಸ ಮುಂದುವರೆಸದೇ ಇರಲು ಸಲಹೆ ನೀಡುತ್ತಾರೆ. ಅದರಲ್ಲೂ ಈ ಅಭ್ಯಾಸವಿರಿಸಿಕೊಂಡಿದ್ದವರು ಇದರಿಂದಾಗಿ ಬಳಿಕ ತಮಗೆ ಎದುರಾದ ತೊಂದರೆಯನ್ನು ಉದಾಹರಿಸಿ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂತಹ ಹತ್ತು ಪ್ರಮುಖವಾದ, ಆರೋಗ್ಯಕ್ಕೆ ಮಾರಕವಾದ ಹತ್ತು ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ:


#1 ಬ್ಲಾಕ್ ಹೆಡ್ ಗಳನ್ನು ಚಿವುಟುವುದು
ಬ್ಲಾಕ್ ಹೆಡ್‌ಗಳನ್ನು ಚಿವುಟುವುದು
ನಾವೆಲ್ಲರೂ ನಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಬ್ಲಾಕ್ ಹೆಡ್ ಎಂಬ ಕಪ್ಪುಚುಕ್ಕೆಯನ್ನು ಚಿವುಟಿ ಹೊರಹಾಕಲು ಯತ್ನಿಸಿಯೇ ಇರುತ್ತೇವೆ. ಕೆಲವೊಮ್ಮೆ ನಮ್ಮ ತಾಯಿ, ಪತ್ನಿ ಅಥವಾ ಸಹೋದರಿ ಈ ಕೆಲಸವನ್ನು ಮಾಡಿರಲೂಬಹುದು. ಆದರೆ ಕಪ್ಪುತಲೆಗಳ ತುದಿಯನ್ನು ಚಿವುಟಿ ತೆಗೆಯುವುದು ನಿಮ್ಮ ಮುಖದ ಚರ್ಮಕ್ಕೆ ನೀವು ಮಾಡಬಹುದಾದ ಗರಿಷ್ಟ ಹಾನಿಯಾಗಿದೆ. ಏಕೆ? ಏಕೆಂದರೆ ವಾಸ್ತವವಾಗಿ ಈ ಕಪ್ಪುತಲೆಗಳು ಒಂದು ನೀಳವಾದ ಹಿಟ್ಟಿನ ಕಡ್ಡಿಯಂತಿದ್ದು ತುದಿಯ ಭಾಗ ಮಾತ್ರ ಗೋಚರಿಸುತ್ತದೆ ಹಾಗೂ ಇದರ ಬುಡ ಚರ್ಮದಾಳದಲ್ಲಿರುತ್ತದೆ. ಈ ತುದಿಯನ್ನು ಚಿವುಟಿದರೆ ಹಿಟ್ಟಿನ ಕಡ್ಡಿಯ ತುದಿಯನ್ನು ಕೊಂಚವೇ ಮುರಿದಂತಾಗುತ್ತದೆ ಅಷ್ಟೇ ಹೊರತು ಇಡಿಯ ಕಡ್ಡಿ ಹಾಗೇ ಇರುತ್ತದೆ. ಆದರೆ ತುದಿಯನ್ನು ಮುರಿದಾಗ ಇದರ ಬುಡದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಚರ್ಮದ ಹೊರಭಾಗಕ್ಕೆ ತಲುಪಲು ಸುಲಭವಗುತ್ತದೆ ಹಾಗೂ ಈ ಮೂಲಕ ಸೋಂಕು ಹಾಗೂ ಉರಿಯೂತಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಕೀವುಭರಿತ ಗುಳ್ಳೆ, ಮೊಡವೆ ಮೊದಲಾದವು ಎದುರಾಗುತ್ತವೆ ಹಾಗೂ ಈ ಸೋಂಕು ಕೆಲದಿನಗಳ ಬಳಿಕ ನಿರ್ಗಮಿಸಿದರೂ ಈ ಭಾಗದಲ್ಲಿ ಕಪ್ಪು ಕಲೆಯೊಂದು ಶಾಶ್ವತವಾಗಿ ಉಳಿದುಬಿಡುತ್ತದೆ. ಆದ್ದರಿಂದ ಕಪ್ಪುತಲೆಯಾದರೆ ಸರ್ವಥಾ ಚಿವುಟಕೂಡದು.


#2 ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು:
ಮೂಗಿನ ಪಕ್ಕದ ಪುಟ್ಟ ಮೊಡವೆಗಳನ್ನು ಚಿವುಟುವುದು
ನಮ್ಮ ಮೂಗಿನ ಮೇಲ್ಭಾಗ, ಅಂದರೆ ಕಣ್ಣೀರು ಹನಿಯುವ ಭಾಗದಿಂದ ತುಟಿಗಳ ಅಂಚುಗಳವರೆಗೆ ಒಂದು ಗೆರೆ ಎಳೆದರೆ ಕಂಡುಬರುವ ಒಂದು ತ್ರಿಕೋಣ ನಮ್ಮ ಮುಖದ "ಅತ್ಯಂತ ಅಪಾಯಕಾರಿಯಾದ ಭಾಗ" ಎಂದು ವೈದ್ಯವಿಜ್ಞಾನ ತಿಳಿಸುತ್ತದೆ. ಏಕೆಂದರೆ ಈ ಭಾಗದಲ್ಲಿ ಅತಿ ಸೂಕ್ಷ್ಮವಾದ ನರತಂತುಗಳಿದ್ದು ಇವು ತಲೆಬುರುಡೆ ಹಾಗೂ ಮೆದುಳಿನೊಂದಿಗೆ ಸಂಪರ್ಕ ಪಡೆದಿವೆ. ಈ ನರಗಳಲ್ಲಿ ರಕ್ತವನ್ನು ಹಿಮ್ಮೆಟ್ಟಿಸುವುದನ್ನು ತಡೆಯಲು ಯಾವುದೇ ಕವಾಟದ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಭಾಗದಲ್ಲಿರುವ ಪುಟ್ಟ ಮೊಡವೆಗಳನ್ನು ಚಿವುಟಿ ಒಳಗಿನ ಬಿಳಿಭಾಗವನ್ನು ಒಸರುವಂತೆ ಮಾಡಿದಾಗ ಚರ್ಮದ ಈ ಸೂಕ್ಷ್ಮಭಾಗವನ್ನು ನೀವೇ ತೆರೆದು meningitis ಅಥವಾ ಒಂದು ಬಗೆಯ ಮೆದುಳಿಗೆ ಸಂಬಂಧಿಸಿದ ತೊಂದರೆಯನ್ನು ಆಹ್ವಾನಿಸುತ್ತಿದ್ದೀರಿ. ಇದರಿಂದ ಮೆದುಳಿಗೂ ಸೋಂಕು ಉಂಟಾಗಬಹುದು. ಏಕೆಂದರೆ ಮೊಡವೆಗಳಲ್ಲಿನ ಬ್ಯಾಕ್ಟೀರಿಯಾಗಳು ಸೂಕ್ಷ್ಮ ನರತಂತುಗಳಿಂದ ಹಿಮ್ಮೆಟ್ಟಿದ ರಕ್ತದ ಮೂಲಕ ಮೆದುಳನ್ನು ತಲುಪಬಹುದು!

#3 ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು
ಕಿವಿಯ ಮೇಣವನ್ನು ತೆಗೆಯಲು ಹತ್ತಿಸುತ್ತಿದ ಕಡ್ಡಿಯನ್ನು ಬಳಸುವುದು
ನಮ್ಮ ಕಿವಿಯ ಕೊಳವೆಯ ಒಳಭಾಗದಲ್ಲಿ ಅತಿ ಸೂಕ್ಷ್ಮ ಹಾಗೂ ನವಿರಾದ ರೋಮಗಳಿದ್ದು ಇದರ ಬುಡದಿಂದ ಕಿವಿಯ ಮೇಣ ಉತ್ಪತ್ತಿಯಾಗುತ್ತದೆ. ಈ ಮೇಣ ನಾವಂದುಕೊಂಡಂತೆ ಅನಗತ್ಯವಾದುದಲ್ಲ. ಬದಲಿಗೆ ಈ ಮೇಣ ಅಂಟು ಅಂಟಾಗಿದ್ದು ಸೂಕ್ಷ್ಮವಾದ ತಮಟೆಯನ್ನು ಧೂಳು, ಪರಕೀಯ ಕಣ ಹಾಗೂ ತೆವಳುತ್ತಾ  ಕಿವಿಯೊಳಗೆ ಬರುವ ಅತಿ ಚಿಕ್ಕ ಕ್ರಿಮಿಗಳಿಂದ ರಕ್ಷಣೆ ಒದಗಿಸಲೆಂದೇ ಸ್ರವಿಸುವ ದ್ರವವಾಗಿದೆ. ಆದ್ದರಿಂದ ತೆಳುವಾಗಿ ನಿಮ್ಮ ಕಿವಿಯೊಳಗೆ ಮೇಣವಿದ್ದಷ್ಟೂ ಆರೋಗ್ಯಕರ. ಆದರೆ ಈ ಮೇಣ ಇದೆ ಎಂದ ಮಾತ್ರಕ್ಕೇ ನೀವು ಹತ್ತಿಸುತ್ತಿದ ಕಡ್ಡಿಯನ್ನು ಬಳಸಿ ಇದನ್ನು ಒರೆಸಿ ತೆಗೆಯಬೇಕಾಗಿಲ್ಲ. ಅಲ್ಲದೇ ಮೇಣವನ್ನು ತೆಗೆಯುವ ಭರದಲ್ಲಿ ಮೇಣವನ್ನು ಗುಡಿಸಿದಂತೆ ಒಟ್ಟುಗೂಡಿಸಿ ಇನ್ನಷ್ಟು ಒಳಭಾಗಕ್ಕೆ ತಳ್ಳಬಹುದು. ಇದು ತಮಟೆಗೆ ಹಾನಿ ಎಸಗಬಹುದು ಹಾಗೂ ಕಿವಿ ಕೇಳಿಸುವುದು ಕೊಂಚ ಕಡಿಮೆಯಾಗಬಹುದು. ಆದ್ದರಿಂದ ಮೇಣ ಹೆಚ್ಚಾಗಿದ್ದರೆ ನೀವೇ ತೆಗೆಯುವ ಬದಲು ಕಿವಿ ಮೂಗು ಗಂಟಲು ತಜ್ಞರ ಬಳಿಗೆ ಹೋದರೆ ಅವರು ಸುರಕ್ಷಿತವಾಗಿ ತಮ್ಮಲ್ಲಿರುವ ವೈಜ್ಞಾನಿಕ ಉಪಕರಣಗಳನ್ನು ಬಳಸಿ ತೆಗೆಯುತ್ತಾರೆ.


#4 ಸಿಗರೇಟ್ ಸೇವನೆ
ಸಿಗರೇಟ್ ಸೇವನೆ
ಸಿಗರೇಟು ಸೇದುವುದು ಆರೋಗ್ಯಕ್ಕೆ ಮಾರಕ ಎಂದು ಇತರರಿಗಿಂತಲೂ ಸಿಗರೇಟು ಸೇದುವವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದರೂ ಇವರ ಮನಃಸ್ಥಿತಿ ’ಅಪಾಯ ಬಂದಾಗ ನೋಡಿಕೊಂಡರಾಯ್ತು’ ಎಂಬ ಸ್ಥಿತಿಗೆ ತಲುಪಿರುವ ಕಾರಣ ಯಾರ ಹಿತವಚನವನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಸಿಗರೇಟಿನಲ್ಲಿರುವ ತಂಬಾಕಿನ ಹೊಗೆಯಲ್ಲಿ, ನಿಟೋಟಿನ್, ಬ್ಯೂಟೇನ್, ಪೈಂಟ್, ಆರ್ಸೆನಿಕ್ ಸಹಿತ ಸುಮಾರು ಎಪ್ಪತ್ತರಷ್ಟು ಅಪಾಯಕರ ರಾಸಾಯನಿಕಗಳಿವೆ. ಇವು ಧೂಮಪಾನಿಯ ಶ್ವಾಸಕೋಶದೊಳಗಿನ ಸೂಕ್ಷ್ಮ ನಳಿಕೆಗಳ ಕ್ಷಮತೆ ಕುಂದಿಸಿ ಉಸಿರಾಟದ ಕ್ಷಮತೆಯನ್ನೂ ಕಡಿಮೆ ಮಾಡುತ್ತವೆ ಹಾಗೂ ಕ್ಯಾನ್ಸರ್ ಉಂಟಾಗಲು ಈ ಜೀವಕೋಶಗಳು ಬೀಜದಂತೆ ಕಾರ್ಯನಿರ್ವಹಿಸುತ್ತವೆ. ಧೂಮಪಾನಿ ಬಿಟ್ಟ ಹೊಗೆ ಇತರರಿಗೂ ಮಾರಕವಾಗಿದ್ದು ಇದನ್ನು ಧೂಮಪಾನಿಗಳಲ್ಲದವರು ಪ್ರತಿಯೊಬ್ಬರೂ ವಿರೋಧಿಸುವ ಅಗತ್ಯವಿದೆ.


#5 ಹಸಿವಿಲ್ಲದಿದ್ದಾಗ ಊಟ ಮಾಡುವುದು
ಹಸಿವಿಲ್ಲದಿದ್ದಾಗ ಊಟ ಮಾಡುವುದು
ನಮ್ಮ ದೇಹಕ್ಕೆ ಊಟ ಬೇಕು ಎಂದು ಮೆದುಳಿಗೆ ಹೊಟ್ಟೆ ನೀಡುವ ಸೂಚನೆಯೇ ಹಸಿವು. ಅಂದರೆ ಈಗ ಹೊಟ್ಟೆ ಖಾಲಿಯಾಗಿದೆ, ಆಹಾರ ಒದಗಿಸಲು ಸೂಕ್ತ ಸಮಯ ಎಂದು ಹೇಳುತ್ತಿದೆ. ಆದರೆ ಇದಕ್ಕೆ ಬದಲಾಗಿ ನೈಸರ್ಗಿಕ ಸಮಯವನ್ನು ಧಿಕ್ಕರಿಸಿ ಹಸಿವಿಲ್ಲದಿರುವ ಇತರ ಸಮಯದಲ್ಲಿ ಆಹಾರ ಸೇವಿಸಿದರೆ, ಆ ಸಮಯದಲ್ಲಿ ಹೊಟ್ಟೆಯಲ್ಲಿ ಇನ್ನೂ ಆಹಾರವಿದ್ದು ಜೀರ್ಣಕ್ರಿಯೆಯ ನಡುವೆ ಇರುತ್ತದೆ. ಈ ಹೆಚ್ಚುವರಿ ಆಹಾರ ಅನಗತ್ಯವಾಗಿದ್ದು ಈಗಾಗಲೇ ಹೊಟ್ಟೆಯಲ್ಲಿರುವ ಜೀರ್ಣಗೊಂಡ ಆಹಾರದೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ಮೇಲೆ ಕೆಳಗೆ ಮಾಡುವುದಲ್ಲದೇ ಅನಗತ್ಯವಾದ ಕ್ಯಾಲೋಗಿಗಳಿಂದ ದೇಹದ ತೂಕ ಹೆಚ್ಚಲೂ ಕಾರಣವಾಗುತ್ತದೆ.

#6 ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು
ನಡೆಯುತ್ತಿರುವಾಗ ಮೆಸೇಜ್ ಕಳಿಸುವುದು
ನೀವು ನಡೆಯುತ್ತಿದ್ದಾಗ ಥಟ್ಟನೇ ನಿಮ್ಮ ಮೊಬೈಲಿನಲ್ಲಿ ಯಾವುದೋ ಸಂದೇಶ ಬಂದಿರುವುದು ತಿಳಿದಾಗ ಏನು ಮಾಡುತ್ತೀರಿ? ಎಲ್ಲರಿಗೂ ಇದು ಯಾವ ಸಂದೇಶ ಎಂಬ ಕುತೂಹಲ ಮೂಡಿಯೇ ಮೂಡುತ್ತದೆ. ಪರಿಣಾಮವಾಗಿ ನಾವೆಲ್ಲರೂ ಸಂದೇಶವನ್ನು ತಕ್ಷಣ ಓದಲು ತವಕಿಸುತ್ತೇವೆ ಹಾಗೂ ಒಂದು ವೇಳೆ ಇದು ಪ್ರೀತಿಪಾತ್ರರ ಅಥವಾ ಇನ್ನಾವುದೋ ಅತಿ ಅಗತ್ಯದ ಸಂದೇಶವಾಗಿದ್ದರೆ ಇದಕ್ಕೆ ಆ ಕ್ಷಣವೇ ಪ್ರತಿಕ್ರಿಯಿಸಲೂ ಮುಂದಾಗುತ್ತೇವೆ. ಆಗೇನಾಗುತ್ತದೆ ಗೊತ್ತೇ? ನಿಮ್ಮ ಮೆದುಳಿಗೆ ಸೆರೋಟೋನಿನ್ ಭರದಲ್ಲಿ ನುಗ್ಗುತ್ತದೆ ಹಾಗೂ ಸಂದೇಶದ ಮೂಲಕ ನಿಮ್ಮ ಮನ ಪ್ರಫುಲ್ಲವಾಗಿರುವುದನ್ನು ನಿಮ್ಮ ವದನದ ನಗು ತಿಳಿಸುತ್ತದೆ. ನೆನಪಿಡಿ, ಈ ಸಮಯದಲ್ಲಿ ನೀವು ನಡೆಯುತ್ತಿದ್ದೀರಿ. ಆಗ ಆಗಬಾರದ ಅನಾಹುತ ಆಗಿ ಹೋಗುತ್ತದೆ. ನಡೆಯುವ ದಾರಿಯಲ್ಲಿ ತೆರೆದಿದ್ದ ಮ್ಯಾನ್ ಹೋಲ್ ಅಥವಾ ಚರಂಡಿಯಲ್ಲಿ ನೀವು ಬಿದ್ದ ಬಳಿಕವೇ ನಿಮಗೆ ಏನಾಯಿತೆಂದು ತಿಳಿದಿರುತ್ತದೆ. ಮುಂದಿನ ಕ್ಷಣಗಳಲ್ಲಿ ನೀವು ಎದುರಿಸಬೇಕಾದ ಮುಜುಗರ, ವ್ಯರ್ಥವಾಗುವ ಅಮೂಲ್ಯ ಸಮಯ, ಮೊಬೈಲು ಬಿದ್ದು ಆಗುವ ನಷ್ಟ ಅಥವಾ ಬೇರಾವುದೋ ವಿವರಿಸಲಾಗದ ಅನಾಹುತವೂ ಸಂಭವಿಸಬಹುದು. ಕೆಲವೊಮ್ಮೆ ನಿಮ್ಮ ಮಾರ್ಗ ನೇರವಾಗಿ ಮುಂದಿನ ಮುಖ್ಯ ರಸ್ತೆಗೆ ತೆರೆದುಕೊಂಡಿದ್ದು ಸಂದೇಶ ಓದುವ ಭರದಲ್ಲಿ ನೇರವಾಗಿ ರಸ್ತೆಗೆ ಕಾಲಿಟ್ಟ ತಕ್ಷಣ ಅತ್ತ ಬದಿಯಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆದು ಪ್ರಾಣಾಪಾಯವೂ ಎದುರಾಗಬಹುದು. ಇವೆಲ್ಲಾ ಏಕಾಯಿತು ಎಂದರೆ ಸಂದೇಶ ಬಂದ ಸಮಯದವರೆಗೂ ನಿಮ್ಮ ಮೆದುಳು ನಿಮ್ಮ ನಡಿಗೆಯನ್ನು ನಿಯಂತ್ರಿಸುತ್ತಿತ್ತು. ಸಂದೇಶ ಬಂದ ತಕ್ಷಣ ನಿಮ್ಮ ಗಮನ ಮಾಹಿತಿಯತ್ತ ಕೇಂದ್ರೀಕೃತಗೊಂಡು ನಡಿಗೆಯ ಕೆಲಸವನ್ನು ಮೆದುಳುಬಳ್ಳಿ ವಹಿಸಿಕೊಂಡಿತು. ಹಾಗಾಗಿ ನಡಿಗೆ ಮುಂದುವರೆಯಿತು. ಆದರೆ ಎದುರಿಗೆ ಬರುವ ಇತರ ಅಪಾಯಗಳನ್ನು ಗ್ರಹಿಸಿ ಆ ಪ್ರಕಾರ ಸೂಚನೆಗಳನ್ನು ನೀಡಲು ನಿಮ್ಮ ಮೆದುಳುಬಳ್ಳಿ ಸಮರ್ಥವಾಗಿಲ್ಲದಿರುವ ಕಾರಣ ಅನಾಹುತ ಸಂಭವಿಸಿದೆ. ಆದ್ದರಿಂದ ನಡೆಯುವ ವೇಳೆ ನಿಮ್ಮ ಮೆದುಳನ್ನು ಪೂರ್ಣವಾಗಿ ಮುಂದಿನ ಚಟುವಟಿಕೆಗಳ ಮೇಲೆ ಇರಿಸಬೇಕು. ಆ ಸಮಯದಲ್ಲಿ ಸಂದೇಶ ಬಂದರೆ ಪೂರ್ಣವಾಗಿ ನಡಿಗೆಯನ್ನು ನಿಲ್ಲಿಸಿ, ಪಕ್ಕದಲ್ಲಿ ನಿಂತು ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಮೊಬೈಲು ಮತ್ತೆ ಜೇಬಿನಲ್ಲಿರಿಸಿಯೇ ಮುಂದುವರೆಯಬೇಕು.


#7 ಕುತ್ತಿಗೆಯ ನೆಟಿಕೆ ತೆಗೆಯುವುದು
ಕುತ್ತಿಗೆಯ ನೆಟಿಕೆ ತೆಗೆಯುವುದು
ಕುತ್ತಿಗೆಯ ನೆಟಿಕೆ ತೆಗೆಯುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಕೆಲವು ಮಸಾಜ್ ಮಾಡುವವರೂ ನೆಟಿಕೆ ತೆಗೆಯುತ್ತಾರೆ. ಆದರೆ ಈ ಅಭ್ಯಾಸ ಮುಂದೊಂದು ದಿನ ಕುತ್ತಿಗೆಯ ನೋವು ಹಾಗೂ ಹೃದಯಾಘಾತದಿಂದ ಸಾವಿಗೂ ಕಾರಣವಾಗಬಹುದು.

#8 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು
 ಸಂತೋಷವಿಲ್ಲದ ವಿವಾಹಬಂಧನದಲ್ಲಿ ಇನ್ನೂ ಮುಂದುವರೆಯುತ್ತಿರುವುದು
ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸದಾ ಜಗಳವಾಡುತ್ತಿರುವ ಪತಿ ಪತ್ನಿಯರಿಗೆ ಹೃದಯ ಸ್ತಂಭನ ಹಾಗೂ ಇತರ ಹೃದಯ ಸಂಬಂಧಿತ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಒಂದು ವೇಳೆ ನಿಮ್ಮ ವಿವಾಹ ಜೀವನದಲ್ಲಿ ಸಂತೋಷ ಕಂಡುಕೊಳ್ಳಲಾಗದಿದ್ದರೆ ಮೊದಲಿಗೆ ಇದಕ್ಕೆ ಕಾರಣವೇನೆಂದು ಅರಿತು ಇದನ್ನು ಸರಿಪಡಿಸಿಕೊಂಡು ಇಬ್ಬರೂ ಪರಸ್ಪರ ಬದಲಾವಣೆಗಳನ್ನು ಹೊಂದುವ ಮೂಲಕ ಮತ್ತೆ ಸಂಸಾರದ ಬಂಡಿಯನ್ನು ಸರಿದೂಗಿಸಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸಂಬಂಧದಿಂದ ಹೊರಬೀಳುವುದೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಒಂದು ವೇಳೆ ಮಕ್ಕಳಾಗಿದ್ದರೆ ಹಿರಿಯರ/ನ್ಯಾಯಾಲಯದ ಸಲಹೆಯಂತೆ ಮಕ್ಕಳ ಸುಪರ್ದಿಯನ್ನು ಪಡೆದುಕೊಳ್ಳಬೇಕು.


#9 ಬೆಳಗ್ಗಿನ ಉಪಾಹಾರ ಮಾಡದೇ ಇರುವುದು
ಬೆಳಗ್ಗಿನ ಉಪಾಹಾರ ಮಾಡದೇ ಇರುವುದು
ನಂಬಲೇಬೇಕಾದ ಸತ್ಯ ಎಂದರೆ ಬೆಳಗ್ಗಿನ ಉಪಾಹಾರ ಮಾಡದೇ ಇರುವುದು ಅಥವಾ ಉಪಾಹಾರ ಸೇವನೆಯನ್ನು ತಡವಾಗಿಸುವುದು ಎರಡೂ ಆರೋಗ್ಯದ ದೃಷ್ಟಿಯಿಂದ ನೀವು ಮಾಡುತ್ತಿರುವ ಅತಿ ಕೆಟ್ಟ ಅಭ್ಯಾಸವಾಗಿದೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪಾಠಕ್ಕೆ ಇನ್ನೂ ಐದೇ ನಿಮಿಷ ಇರುವಾಗ ಎದ್ದು ತಡಬಡಿಸಿ ಉಪಾಹಾರ ಸೇವಿಸದೇ ಓಡಿ ಹೋಗುತ್ತಾರೆ. ವಾಸ್ತವವಾಗಿ ಇಂಗ್ಲಿಷ್ಟಿನ ಬ್ರೇಕ್ ಫಾಸ್ಟ್ ಎಂಬ ಪದವೇ ರಾತ್ರಿಯ ನಿದ್ದೆಯ ಸಮಯದಲ್ಲಿ ದೇಹ ಪಡೆದಿದ್ದ ಉಪವಾಸ (ಫಾಸ್ಟ್) ಅನ್ನು ಕೊನೆಗೊಳಿಸುವುದು (ಬ್ರೇಕ್) ಆಗಿದೆ. ರಾತ್ರಿಯ ಅನೈಚ್ಛಿಕ ಕ್ರಿಯೆಗಳಿಂದ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಗಳು ಉತ್ಪತ್ತಿಯಾಗಿರುತ್ತವೆ. ಇದು ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯವೂ ಆಗಿದೆ. ಆದ್ದರಿಂದ ಬೆಳಗ್ಗಿನ ಉಪಾಹಾರದ ಮೂಲಕ ಈ ಆಮ್ಲಗಳನ್ನು ಬಳಸಿಕೊಂಡು ಇದರ ಪ್ರಕೋಪವನ್ನು ತಣ್ಣಗಾಗಿಸಬಹುದು. ಇದೇ ಕಾರಣಕ್ಕೆ ಉಪಾಹಾರ ಅಲ್ಪ ಪ್ರಮಾಣದಲ್ಲಿರಬೇಕು. ಸಮಯವಿಲ್ಲದಿದ್ದರೆ ಕೇವಲ ಒಂದು ಸೇಬು, ಒಂದು ಬಾಳೆಹಣ್ಣು ಅಥವಾ ಒಂದು ಮುಷ್ಟಿಯಷ್ಟು ಒಣಫಲ ಅಥವಾ ಸಿದ್ದ ರೂಪದ ಗ್ರನೋಲಾ ಬಾರ್ ಮೊದಲಾದ ಆಹಾರಗಳನ್ನು ಸೇವಿಸಿದರೂ ಸರಿ, ಯಾವುದಕ್ಕೂ ಹೊಟ್ಟೆಯನ್ನು ಖಾಲಿ ಬಿಡಬಾರದು.


#10 ಉಗುರು ಕಚ್ಚುವುದು
ಉಗುರು ಕಚ್ಚುವುದು
ನಿಮ್ಮ ದೇಹಕ್ಕೆ ಮಾಡಬಹುದಾದ ಅಪಾಯಕರ ಕ್ರಿಯೆ ಎಂದರೆ ಉಗುರು ಕಚ್ಚುವುದು. ಇಡಿಯ ದಿನ ಗಾಳಿಯಲ್ಲಿಯೇ ಇರುವ ಉಗುರುಗಳಲ್ಲಿ ಧೂಳು, ಕ್ರಿಮಿಗಳು ಹಾಗೂ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ. ಈ ಧೂಳಿನ ವಿಶ್ಲೇಷಣೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಇದರಲ್ಲಿ ಸಾಲ್ಮೋನೆಲ್ಲಾ, ಈ ಕೊಲೈ ಎಂಬ ಭಯಾನಕ ಬ್ಯಾಕ್ಟೀರಿಯಾಗಳಿರುವುದನ್ನು ಕಂಡುಬಂದಿದೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ವಿಷವಾಗಿಸುವ ಹಾಗೂ ಅತಿಸಾರ, ಭೇದಿ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿವೆ. ಹೀಗಿದ್ದಾಗ ಈ ಬ್ಯಾಕ್ಟೀರಿಯಾಗಳನ್ನು ನಾವೇ ಕೈಯಾರೆ ಬಾಯಿಗೆ ಕೊಂಡೊಯ್ಯುವುದು ಎಷ್ಟು ಮಟ್ಟಿಗೆ ಸರಿ?

ಭಾನುವಾರ, ಫೆಬ್ರವರಿ 18, 2018

ಹಸಿರು ಟೀ - ಜಾಸ್ತಿ ಕುಡಿಯಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ!


ಬೋಲ್ಡ್ ಸ್ಕೈ. ಕಾಂ ತಾಣದಲ್ಲಿ ಪ್ರಕಟವಾದ ಲೇಖನ
https://goo.gl/z9qXQb

ಹಸಿರು ಟೀ ಚೀನಾದಲ್ಲಿ ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದರೂ ಭಾರತ ಸಹಿತ ಇತರ ವರ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿದೆ  ಹಾಗೂ ವಿಶೇಷವಾಗಿ ತೂಕ ಇಳಿಸಿಕೊಳ್ಳುವವರು ತಮ್ಮ ಪೇಯವನ್ನು ಹಸಿರು ಟೀ ಗೆ ಬದಲಿಸಿಕೊಳ್ಳುತ್ತಿದ್ದಾರೆ. ಹಸಿರು ಟೀ ಎಲೆ, ದಂಟು ಹಾಗೂ ಕಾಂಡ ಎಲ್ಲವೂ ಔಷಧೀಯ ಗುಣಗಳಿಗೆ ಬಳಸಲ್ಪಡುತ್ತಿದ್ದು ಈ ಗುಣಗಳಿಂದಾಗಿಯೇ ವಿಶ್ವದ ಅತಿ ಹೆಚ್ಚಿನ ಆರೋಗ್ಯಕರ ಪೇಯ ಎಂದು ಪರಿಗಣಿಸಲ್ಪಟ್ಟಿದೆ.
ಜಠರದ ತೊಂದರೆಗಳು
ಆರೋಗ್ಯದ ಮೇಲೆ ಹಸಿರು ಟೀ ಬೀರುವ ಪರಿಣಾಮಗಳು ಅಪಾರವಾಗಿವೆ. ಕ್ಯಾನ್ಸರ್ ನಿಂದ ರಕ್ಷಣೆ, ಮೆದುಳಿನ ಕ್ಷಮತೆ ಹೆಚ್ಚಿಸುವುದು, ಖಿನ್ನತೆಯಿಂದ ರಕ್ಷಿಸುವುದು, ತಲೆನೋವು, ಅತಿಸಾರ, ಮೂಳೆಗಳು ಶಿಥಿಲಗೊಳ್ಳುವುದು, ಹೊಟ್ಟೆಯ ತೊಂದರೆಗಳು ಮೊದಲಾದವುಗಳ ವಿರುದ್ದ ರಕ್ಷಣೆ ಒದಗಿಸುವುದು, ಹೃದಯ ಸಂಬಂಧಿ ತೊಂದರೆ, ಮಧುಮೇಹ, ಕಡಿಮೆ ರಕ್ತದೊತ್ತಡ, ಅತಿಯಾದ ದಂತ ಆಯಾಸ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದು ಮೊದಲಾದ ತೊಂದರೆಗಳು ಎದುರಾಗದಂತೆ ರಕ್ಷಣೆ ಒದಗಿಸುವುದು ಮೊದಲಾದ ಪ್ರಯೋಜನಗಳಿವೆ.

ಆದರೆ ಈ ಜಗತ್ತಿನ ಯಾವುದೇ ವಸ್ತುವಿನಲ್ಲಿರುವಂತೆ ಹಸಿರು ಟೀ ಸಹಾ ತನ್ನದೇ ಆದ ಕೆಲವು ಅಡ್ಡ ಅಥವಾ ದುಷ್ಟರಿಣಾಮದಿಂದ ಹೊರತಾಗಿಲ್ಲ. ಏಕೆಂದರೆ ಹಸಿರು ಟೀ ಯಲ್ಲಿಯೂ ಇತರ ಟೀಯಲ್ಲಿರುವಂತೆ ಕೆಫೀನ್ ಇದೆ. ಕೆಫೀನ್ ಪ್ರಮಾಣ ಹೆಚ್ಚಾದರೆ ಇದು ದೇಹದಲ್ಲಿ ನಡುಕ, ಉದ್ವೇಗ ಹಾಗೂ ನರೋದ್ರೇಕವನ್ನು ಹೆಚ್ಚಿಸುತ್ತದೆ.

ಪ್ರತಿ ಲೋಟ ಹಸಿರು ಟೀಯಲ್ಲಿ 2-4 ದಷ್ಟು ಕೆಫೀನ್ ಇದೆ. ಇದರ ಸೇವನೆಯಿಂದ ಏಕಾಗ್ರತೆ ಹಾಗೂ ಚಿಂತನಾಶಕ್ತಿಯ ಮೇಲೆ ಪ್ರಭಾವವುಂಟಾಗುತ್ತದೆ. ಬನ್ನಿ, ಹಸಿರು ಟೀ ಸೇವನೆ ಅಧಿಕವಾದರೆ ಇದರಿಂದ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಅರಿಯೋಣ.
ತಲೆನೋವು
1. ಜಠರದ ತೊಂದರೆಗಳು
ಹಸಿರು ಟೀಯಲ್ಲಿರುವ ಕೆಫೀನ್ ಪ್ರಮಾಣ ಚಿಕ್ಕದೇ ಆಗಿದ್ದರೂ, ಈ ಚಿಕ್ಕ ಪ್ರಮಾಣವೇ ಹೊಟ್ಟೆಯನ್ನು ಕೆಡಿಸಲು ಸಾಕಾಗುತ್ತದೆ. ಏಕೆಂದರೆ ಕೆಫೀನ್ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣರಸದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಜಠರದ ತೊಂದರೆಗೆ ನಾಂದಿ ಹಾಡುತ್ತದೆ. ಇದರ ಅಡ್ಡಪರಿಣಾಮವಾಗಿ ನೋವು ಅಥವಾ ವಾಕರಿಕೆಯೂ ಎದುರಾಗಬಹುದು.
 ನಿದ್ದೆಯ ತೊಂದರೆಗಳು
2. ತಲೆನೋವು:
ಹಸಿರು ಟೀ ಸೇವನೆಯಿಂದ ಲಘುವಿನಿಂದ ಹಿಡಿದು ಭಾರೀ ಎನ್ನುವಷ್ಟು ತಲೆನೋವು ಆವರಿಸಬಹುದು. ಇದಕ್ಕೆಲ್ಲಾ ಇದರಲ್ಲಿರುವ ಕೆಫೀನ್ ಕಾರಣ. ಒಂದು ವೇಳೆ ಅತಿಯಾದ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಿದರೆ ತಲೆತಿರುಗುವಿಕೆ ಎದುರಾಗಬಹುದು. ಅದರಲ್ಲೂ ಮೈಗ್ರೇನ್ ತಲೆನೋವಿನ ರೋಗಿಗಳು ಹಸಿರು ಟೀ ಸೇವಿಸಿದರೆ ತಲೆನೋವು ಇನ್ನಷ್ಟು ಉಲ್ಬಣಗೊಳಿಸುವುದರಿಂದ ಈ ರೋಗಿಗಳಿಗೆ ಹಸಿರು ಟೀ ಸಲ್ಲದು. ಆದರೆ ಮೈಗ್ರೇನ್ ಲಘುವಾಗಿದ್ದರೆ ಹಾಗೂ ಹಸಿರು ಟೀ ಇಲ್ಲದೇ ಆಗುವುದಿಲ್ಲ ಎನ್ನುವಂತಿದ್ದರೆ ಮಾತ್ರ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.
ಕಬ್ಬಿಣದ ಕೊರತೆ
3. ನಿದ್ದೆಯ ತೊಂದರೆಗಳು
ಹಸಿರು ಟೀ ಯನ್ನು ಸಂಜೆಯ ಬಳಿಕ ಸರ್ವಥಾ ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ನರವ್ಯವಸ್ಥೆಯ ಮೇಲೆ ಪ್ರಚೋದನೆಯುಂಟಾಗಿ ನಿದ್ದೆ ಆವರಿಸಲು ತೊಂದರೆಯಾಗಬಹುದು ಹಾಗೂ ರಾತ್ರಿ ಬಲುಹೊತ್ತಿನವರೆಗೆ ನಿದ್ದೆ ಬಾರದೇ ಹೋಗಬಹುದು. ಇದರಲ್ಲಿರುವ ಕೆಫೇನ್ ನಿದ್ದೆ ಆವರಿಸಲು ಅಗತ್ಯವಾದ ರಾಸಾಯನಿಕಗಳು ಮೆದುಳನ್ನು ತಲುಪದಂತೆ ತಡೆಗಟ್ಟುತ್ತದೆ ಹಾಗೂ ಉದ್ವೇಗಕ್ಕೆ ಕಾರಣವಾಗುವ ಅಡ್ರಿನಲಿನ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

4. ಕಬ್ಬಿಣದ ಕೊರತೆ:
ಒಂದು ನಂಬಲರ್ಹ ಅಧ್ಯಯನದ ಪ್ರಕಾರ ಹಸಿರು ಟೀ ಸೇವನೆ ಹೆಚ್ಚಾದರೆ ರಕ್ತಹೀನತೆಯೂ ಹೆಚ್ಚಾಗಬಹುದು. ಅಲ್ಲದೇ ಅಹಾರದ ಮೂಲಕ ಲಭಿಸುವ ಕಬ್ಬಿಣವನ್ನು ದೇಹ ಬಳಸಿಕೊಳ್ಳಲು ವಿಫಲವಾಗಿಸಬಹುದು. ಈ ಟೀಯಲ್ಲಿರುವ ಟ್ಯಾನಿನ್ ಹಾಗೂ ಪಾಲಿಫಿನಾಲ್ ಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ. ಈ ಕಣಗಳು ಕಬ್ಬಿಣದ ಕಣಗಳೊಂದಿಗೆ ಮಿಳಿತಗೊಂಡು ದೇಹ ಹೀರಿಕೊಳ್ಳುವುದಕ್ಕಿಂತಲೂ ದೊಡ್ಡ ಕಣಗಳಾಗುವ ಮೂಲಕ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಪಡಿಸುತ್ತದೆ.
ಹೃದಯ ಬಡಿತದಲ್ಲಿ ಏರುಪೇರು
5. ಹೃದಯ ಬಡಿತದಲ್ಲಿ ಏರುಪೇರು:
ಹಸಿರು ಟೀಯಲ್ಲಿರುವ ಕೆಫೀನ್ ಹೃದಯದ ಬಡಿತವನ್ನು ಏರಿಸುತ್ತದೆ ಹಾಗೂ ಗತಿಯಲ್ಲಿ ಏರುಪೇರಾಗಿಸುತ್ತದೆ. ಇದರ ಪರಿಣಾಮವಾಗಿ ಹೃದಯದ ಉಬ್ಬರವಿಳಿತ (palpitations) ಎದುರಾಗಬಹುದು. ತನ್ಮೂಲಕ ಎದೆನೋವು ಹಾಗೂ ಹೃದಯದ ಬಡಿತ ಆತಂಕಕ್ಕೆ ಕಾರಣವಾಗುವಷ್ಟು ಹೆಚ್ಚಬಹುದು ಹಾಗೂ ಇದು ಹೃದಯದ ಆರೋಗ್ಯವನ್ನು ಅಪಾಯಕ್ಕೆ ಒಡ್ಡಬಹುದು.
ಸ್ನಾಯುಗಳ ಸೆಡೆತ
6. ಸ್ನಾಯುಗಳ ಸೆಡೆತ
ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ಸ್ನಾಯುಗಳ ಸೆಡೆತಕ್ಕೆ ಕಾರಣವಾಗಬಹುದು ಹಾಗೂ ಕೆಲವು ಅಂಗಗಳು ತಿರುಚಬಹುದು. ಏಕೆಂದು ಗೊತ್ತೇ? ಟೀ ಯಲ್ಲಿರುವ ಕೆಫೀನ್ restless leg syndrome ಅಥವಾ ಸ್ನಾಯುಗಳನ್ನು ಸತತವಾಗಿ ಬಳಸಿಕೊಳ್ಳುವ ಮೂಲಕ ಎದುರಾಗುವ ಸ್ನಾಯುಗಳ ಕುಸಿತಕ್ಕೆ ಕಾರಣವಾಗುತ್ತದೆ. ಈ ಮೂಲಕ ಕೆಲವು ಮೂಳೆಗಳು ಹಿಮ್ಮರಳದಂತೆ  ಸ್ನಾಯುಗಳು ಸೆಡೆತಗೊಳುತ್ತವೆ. ವಿಶೇಷವಾಗಿ ಮೊಣಕಾಲಿನ ಮೀನಖಂಡ ಸೆಡೆತಕ್ಕೊಳಗಾಗಿ ಪಾದ ಮತ್ತು ಮೊಣಕಾಲು ಮಡಚಿ ನೇರವಾಗಿಸಲು ಆಗುವುದೇ ಇಲ್ಲ.
ಅತಿಸಾರ
7. ಅತಿಸಾರ
ಕೆಫೇನ್ ಒಂದು ವಿರೇಚಕ ಔಷಧಿಯಾಗಿದೆ. ಇದರ ಪ್ರಮಾಣ ಹೆಚ್ಚಾದರೆ ಅತಿಸಾರ ಎದುರಾಗುತ್ತದೆ ಹಾಗೂ ಸತವಾಗಿ ಶೌಚಾಲಯಕ್ಕೆ ಓಡಬೇಕಾಗುತ್ತದೆ ಹಾಗೂ ಮಲದ ಮೂಲಕ ಅತಿ ಹೆಚ್ಚೇ ಎನಿಸುವಷ್ಟು ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹಸಿರು ಟೀ ಕಡಿಮೆ ಪ್ರಮಾಣದಲ್ಲಿರಬೇಕು ಹಾಗೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು.
ವಾಂತಿ
8. ವಾಂತಿ
ಒಂದು ಭಾರತೀಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಹಸಿರು ಟೀಯಲ್ಲಿರುವ ಪಾಲಿಫೆನಾಲ್ ಗಳು ಉತ್ಕರ್ಷಶೀಲ ಒತ್ತಡ ಎದುರಿಸುತ್ತವೆ. ಒಂದು ವೇಳೆ ಹಸಿರು ಟೀ ಸೇವನೆ ಹೆಚ್ಚಾದರೆ ಇದು ವಾಂತಿ, ವಾಕರಿಕೆಗೂ ಕಾರಣವಾಗಬಹುದು. ಪ್ರತಿದಿನ ಹಸಿರು ಟೀ ಮೂಲಕ ಸೇವಿಸಬಹುದಾದ ಕೆಫೀನ್ 300 ರಿಂದ 400 ಮಿಲಿಗ್ರಾಂ ಒಳಗೇ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಒಂದು ಕಪ್ ನಲ್ಲಿ ಸುಮಾರು ಐವತ್ತು ಮಿಲಿಗ್ರಾಂ ಕೆಫೀನ್ ಲಭಿಸುತ್ತದೆ. ಆ ಪ್ರಕಾರ ದಿನಕ್ಕೆ ಸೇವಿಸಬಹುದಾದ ಗರಿಷ್ಟ ಪ್ರಮಾಣವೆಂದರೆ ಎಂಟು ಕಪ್.
ಎದೆಯುರಿತ
9. ಎದೆಯುರಿತ
ಹಸಿರು ಟೀ ಆಮ್ಲೀಯವಾಗಿದ್ದು ಇದು ಅನ್ನಾನಾಳಕ್ಕೆ ಉರಿಯುಂಟುಮಾಡಬಹುದು. ಪರಿಣಾಮವಾಗಿ ಎದೆಯುರಿತ ಎದುರಾಗಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ರೂಪದ ಹಸಿರು ಟೀ ಸೇವನೆಗೆ ನಿಮ್ಮ ಮನ ತುಡಿದರೆ ನಾವು ಮೊದಲೇ ಎಚ್ಚರಿಸುತ್ತಿದ್ದೇವೆ, ಈ ಪೇಯಕ್ಕೆ ಸಂರಕ್ಷಕರೂಪದಲ್ಲಿ ಸೇರಿಸಿರುವ ಅಸ್ಕಾರ್ಬಿಕ್ ಆಮ್ಲ ಅನ್ನನಾಳದಿಂದ ಆಹಾರ ಹಿಮ್ಮರಳು ಪ್ರಚೋದಿಸಬಹುದು ಹಾಗೂ ಹುಳಿತೇಗು, ಎದೆಯುರಿ ಮೊದಲಾದವು ಎದುರಾಗಬಹುದು.
ಮಧುಮೇಹ
10. ಮಧುಮೇಹ:
ಮಧುಮೇಹಿಗಳು ಹಸಿರು ಟೀ ಸೇವನೆಯಿಂದ ದೂರವಿವುರುದೇ ಒಳ್ಳೆಯದು. ಏಕೆಂದರೆ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಏರುಪೇರಾಗಬಹುದು. ಅದರಲ್ಲೂ ಟೈಪ್ ೨ ಮಧುಮೇಹ ಇರುವ ವ್ಯಕ್ತಿಗಳು ಹಸಿರು ಟೀ ಸರ್ವಥಾ ಸೇವಿಸಬಾರದು. ಏಕೆಂದರೆ ಇದು ದೇಹದ ಇನ್ಸುಲಿನ್ ಮಟ್ಟವನ್ನೇ ಏರುಪೇರುಗೊಳಿಸುತ್ತದೆ.
ಮೂಳೆಗಳು ಟೊಳ್ಳಾಗುವ Osteoporosis
11. ಮೂಳೆಗಳು ಟೊಳ್ಳಾಗುವ Osteoporosis
ಕೆಫೀನ್ ಸೇವನೆಯಿಂದ ದೇಹ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಸಿರು ಟೀ ಸೇವನೆಯ ಪ್ರಮಾಣ ಹೆಚ್ಚಾದರೆ ಇದು ಕ್ಯಾಲ್ಸಿಯಂ ವಿಸರ್ಜನೆಯ ಗತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಯಾವಾಗ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗುತ್ತದೆಯೋ ಆಗ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಂಡು ಟೊಳ್ಳಾಗಿ ಶಿಥಿಲಗೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

ಭಾನುವಾರ, ಫೆಬ್ರವರಿ 4, 2018

ಸಕ್ಕರೆ-ಒಂದು ಸುಂದರ ವಿಷ: ಇಲ್ಲಿವೆ ಹತ್ತು ಪುರಾವೆಗಳು

ಬೋಲ್ಡ್ ಸ್ಕೈ.ಕಾಂ ತಾಣದಲ್ಲಿ ಪ್ರಕಟವಾದ ಲೇಖನ
http://tinyurl.com/z6r69mf
ಆಯಸ್ಸು ಕಡಿಮೆಯಾಗುತ್ತದೆ

ನಾವು ಸೇವಿಸುವ ಆಹಾರಗಳಲ್ಲಿ ಹಲವು ನೋಡಲು ಸುಂದರವಾಗಿದ್ದರೂ ಆರೋಗ್ಯಕ್ಕೆ ಮಾರಕವಾಗಿವೆ. ಉದಾಹರಣೆಗೆ ಮೈದಾಹಿಟ್ಟು. ಗೋಧಿಯ ನಾರಿನಂಶವನ್ನು ನಿವಾರಿಸಿ ಕೇವಲ ಬಿಳಿಯ ಭಾಗವನ್ನು ಹೊಂದಿರುವ ಮೈದಾ ಮಲಬದ್ದತೆಗೆ ಮೂಲ. ಆದರೆ ನೋಡಲು? ಅಪ್ಪಟ ಬಿಳಿಯ ಬಣ್ಣದ ಅಪ್ಸರೆ, ಇದಕ್ಕೆ ಅಥವಾ ಇದರಿಂದ ತಯಾರಾದ ಖಾದ್ಯಗಳಿಗೆ ಮರುಳಾಗದವರೇ ಇಲ್ಲ. ಅಂತೆಯೇ ಸಕ್ಕರೆ, ಅಜಿನೋಮೋಟೋ, ಅಡುಗೆ ಸೋಡಾ, ಡಬ್ಬಿಯಲ್ಲಿ ಸಿಗುವ ಸಂಸ್ಕರಿತ ಆಹಾರಗಳು, ಮಾರ್ಜಾರಿನ್ ಎಂಬ ಬೆಣ್ಣೆ ಮೊದಲಾದವು ಸಹಾ ನೋಡಲು  ಸುಂದರವಾದ ವಿಷಗಳಾಗಿವೆ.

ಇಂದು ಬಿಳಿಯ ಈ ಸಕ್ಕರೆ ಎಂಬ ವಿಷದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ. ಇದು ಏಕೆ ವಿಷವಾಗಿದೆ ಎಂದರೆ ಇದರಲ್ಲಿರುವ ಸಕ್ಕರೆಯ ಅಂಶ ಹೆಚ್ಚು. ಅರೆ, ಸಕ್ಕರೆಯಲ್ಲಿ ಸಕ್ಕರೆ ಅಂಶ ಇಲ್ಲದೇ ಇನ್ನೇನು ಉಪ್ಪಿನಂಶ ಇರುತ್ತೆಯೇ? ಇಲ್ಲಿ ಸಕ್ಕರೆ ಎಂದರೆ ಇದನ್ನು ಸೇವಿಸಿದ ಬಳಿಕ ನಮ್ಮ ರಕ್ತಕ್ಕೆ ಸೇರುವ ಗ್ಲುಕೋಸ್ ಪ್ರಮಾಣ. ಇದು ನಮಗೆ ಅಗತ್ಯವಿರುವುದಕ್ಕಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದೇ ನಿಜವಾದ ತೊಂದರೆ. ಇದು ಅನಗತ್ಯವಾದ ಕ್ಯಾಲೋರಿಗಳನ್ನು ತುಂಬಿಸುವ ಮೂಲಕ ನಮ್ಮ ದೇಹದ ವಿವಿಧ ವ್ಯವಸ್ಥೆಗಳನ್ನು ಏರುಪೇರುಗೊಳಿಸುತ್ತದೆ. ಪ್ರಮುಖವಾಗಿ ಮಧುಮೇಹ ಇದ್ದವರಿಗೆ ತಾಳಲು ಸಾಧ್ಯವೇ ಇಲ್ಲದಷ್ಟು ಹೆಚ್ಚಿನ ಗ್ಲುಕೋಸ್ ಸೇರಿಸುವುದರಿಂದ ಮಧುಮೇಹಿಗಳು ಸಕ್ಕರೆಯನ್ನೇ ತಿನ್ನಬಾರದು ಎಂದು ವೈದ್ಯರು ಕಟ್ಟಪ್ಪಣೆ ಮಾಡುತ್ತಾರೆ. ಆದರೆ ಮಧುಮೇಹಿಗಳು ತಿನ್ನಬಹುದಾದ ಅಂದರೆ ರಕ್ತದಲ್ಲಿ ನಿಧಾನವಾಗಿ ಮಿಳಿತವಾಗುವ ಇತರ ಸಿಹಿಗಳನ್ನು ತಿನ್ನಬಹುದು. ಸಕ್ಕರೆಯಲ್ಲಿನ ಗ್ಲೂಕೋಸ್ ಅಪಾರವಾಗಿದ್ದರೆ ಅದು ಹೆಚ್ಚಾಗಿ ಬಾಧಿಸುವುದು ನಮ್ಮ ಯಕೃತ್ ಅನ್ನು. ಇದರಿಂದ ಕ್ಯಾನ್ಸರ್, ಹೃದಯದ ತೊಂದರೆ, ಸ್ಥೂಲಕಾಯ ಮೊದಲಾದ ತೊಂದರೆಗಳು ನಿಧಾನವಾಗಿ ಎದುರಾಗುತ್ತವೆ.
 
ಸಕ್ಕರೆ ಸೇರಿಸಿ ತಯಾರಾದ ಸಿಹಿತಿಂಡಿಗಳಲ್ಲಿ ಅಪಾರವಾದ ಗ್ಲೂಕೋಸ್ ಇರುತ್ತದೆ. ಗಾಬರಿಪಡಿಸುವ ಅಂಶವೆಂದರೆ ಕೋಲಾಗಳಂತಹ ಲಘುಪಾನೀಯಗಳಲ್ಲಿ ಸಾಮಾನ್ಯ ಸಕ್ಕರೆಯ ಏಳು ಪಟ್ಟು ಹೆಚ್ಚು ಸಕ್ಕರೆ ಇರುತ್ತದೆ. ಹೌದು, ಇರಬಹುದು, ಸಕ್ಕರೆ ಸಿಹಿಯೇ, ತಿಂದರೇನೀಗ? ನಾವೆಲ್ಲಾ ಚಿಕ್ಕಂದಿನಿಂದ ತಿನ್ನುತ್ತಾ ಬಂದಿಲ್ಲವೇ? ನಮಗೇನು ರೋಗ ಬಡಿದಿದೆ? ಎಂಬ ನಿಮ್ಮ ಹತ್ತು ಹಲವು ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾದ ಹತ್ತು ಉತ್ತರಗಳು ನಿಮ್ಮ ಇದುವರೆಗಿನ ನಂಬಿಕೆಯನ್ನೇ ಅಲ್ಲಾಡಿಸುತ್ತವೆ. ಕುತೂಹಲ ಮೂಡಿತೇ? ಕೊನೆಯವರೆಗೆ ನೋಡುತ್ತಾ ಹೋಗಿ:
ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು
೧) ಸಕ್ಕರೆಯಿಂದ ಕ್ಯಾನ್ಸರ್ ಎದುರಾಗಬಹುದು.
ಸಕ್ಕರೆಯಲ್ಲಿ ಬೀಟಾ ಕ್ಯಾಟೆನಿನ್ (β-catenin) ಎಂಬ ಪೋಷಕಾಂಶವಿದೆ. ಇದು ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡದು. ಆದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯಲ್ಲಿರುವ ಕ್ಯಾನ್ಸರ್ ಕಣಗಳ ವಿರುದ್ದ ಹೋರಾಡುವ ಶಕ್ತಿಯನ್ನು ಈ ಕಣ ಶಕ್ತಿಹೀನಗೊಳಿಸುತ್ತಾ ಬರುತ್ತದೆ. ಅಂದರೆ ಯಾವುದಾದರೂ ಜೀವಕೋಶ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಸಕ್ಕರೆ ಕಡಿಮೆ ತಿನ್ನುವವರಿಗಿಂತ ಹೆಚ್ಚಿರುತ್ತದೆ. ಒಂದು ವೇಳೆ ಕ್ಯಾನ್ಸರ್ ಈಗಾಗಲೇ ಆವರಿಸಿದ್ದರೆ ಜೀವಂತವಿರುವ ದಿನಗಳನ್ನು ಲೆಕ್ಕ ಹಾಕಿ ಜೀವಿಸುತ್ತಿರುವವರ ಲೆಕ್ಕವನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ.
ಸ್ಥೂಲಕಾಯ ಎದುರಾಗುತ್ತದೆ
೨) ಸ್ಥೂಲಕಾಯ ಎದುರಾಗುತ್ತದೆ.
ಸಕ್ಕರೆಯ ಸಿಹಿ ಯಾರಿಗೆ ಇಷ್ಟವಿಲ್ಲ? ಆದರೆ ಈ ಸಿಹಿಯೇ ಸ್ಥೂಲಕಾಯಕ್ಕೂ ಮೂಲವಾಗಿದೆ. ಮಕ್ಕಳಿಂದ ಹಿರಿಯರವರೆಗೆ ಸಕ್ಕರೆಯನ್ನು ಬೆಳಗ್ಗಿನಿಂದ ರಾತ್ರಿಯವರೆಗಿನ ವಿವಿಧ ಭಕ್ಷ್ಯ, ಪಾನೀಯಗಳ ಮೂಲಕ ಸೇವಿಸಿರುವ ಪರಿಣಾಮದಿಂದ ದೇಹದಲ್ಲಿ ಆಗಾಧ ಪ್ರಮಾಣದಲ್ಲಿ ಕೊಬ್ಬು ಸಂಗ್ರಹವಾಗಿ ಸ್ಥೂಲಕಾಯ ಆವರಿಸಿರುತ್ತದೆ. ಅದರಲ್ಲೂ ಕೊಬ್ಬು ಇಡಿಯ ದೇಹ ತುಂಬಿ ಸೊಂಟದ ಸುತ್ತಳತೆಯನ್ನು ಹೆಚ್ಚಿಸುವಲ್ಲಿ ಸಕ್ಕರೆಯ ದೇಣಿಗೆ ಬಹಳ ಹೆಚ್ಚು.
ಮಧುಮೇಹ ಆವರಿಸುತ್ತದೆ
೩) ಮಧುಮೇಹ ಆವರಿಸುತ್ತದೆ
ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ. ಆದರೆ ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮುಂದೆ ಯಾವುದೋ ವಯಸ್ಸಿನಲ್ಲಿ ಬರಬೇಕಾಗಿದ್ದ ಮಧುಮೇಹ ಚಿಕ್ಕವಯಸ್ಸಿಗೇ ವಕ್ಕರಿಸುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಹೆಚ್ಚಿರುತ್ತದೆ ಎಂದರೆ ಅದನ್ನು ಕೊಳೆಸಿದರೆ ವಿಸ್ಕಿ ಎಂಬ ಮದ್ಯವಾಗಿ ಪರಿವರ್ತಿತವಾಗುತ್ತದೆ.
ಸಕ್ಕರೆಗೆ ದಾಸರನ್ನಾಗಿಸುತ್ತದೆ
೪) ಸಕ್ಕರೆಗೆ ದಾಸರನ್ನಾಗಿಸುತ್ತದೆ.
ಸಕ್ಕರೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಂತೆ ಸಕ್ಕರೆಗೆ ದಾಸರಾಗುವ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚು ಕಡಿಮೆ ನಾವೆಲ್ಲಾ ಈ ಬಿಳಿಯ ಸಕ್ಕರೆಗೆ ಈಗಾಗಲೇ ದಾಸರಾಗಿರಲೂ ಬಹುದು. ಏಕೆಂದರೆ ನಮಗೆ ಸಕ್ಕರೆ ಅಥವಾ ಸಿಹಿ ಇಲ್ಲದ ಊಟ ಸೇರುವುದೇ ಇಲ್ಲ. ಈ ದಾಸ್ಯ ಹೆಚ್ಚಾದರೆ ಕೊಕೇಯ್ನ್, ಗಾಂಜಾ, ಮಾರಿಯುವಾನಾ (marijuana) ಮೊದಲಾದವುಗಳಿಗೆ ದಾಸರಾದಷ್ಟೇ ಮಾರಕವಾಗಿ ಪರಿಣಮಿಸಬಹುದು.
ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ
೫) ನೆನಪಿನ ಶಕ್ತಿಯಲ್ಲಿ ಕುಂಠಿತವಾಗುತ್ತದೆ.
2012ರಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಸಕ್ಕರೆಯನ್ನು ಸೇವಿಸುತ್ತಾ ಬಂದವರಲ್ಲಿ ಸ್ಮರಣಶಕ್ತಿ ಕುಂದುತ್ತಾ ಬಂದಿದೆ. ಅಲ್ಲದೇ ಒಟ್ಟಾರೆ ಆರೋಗ್ಯವೂ ಬಾಧೆಗೊಳಗಾಗಿದೆ.
ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ
೬) ಹೆಚ್.ಐ. ವಿ ಪತ್ತೆಗೆ ಅಡ್ಡಿಪಡಿಸುತ್ತದೆ.
ದೇಹದಲ್ಲಿರುವ ಸಕ್ಕರೆ ಮಾರಕ ಏಡ್ಸ್ ರೋಗಕ್ಕೆ ಕಾರಣವಾಗುವ ಹೆಚ್ ಐ ವಿ ವೈರಸ್ಸುಗಳ ಪತ್ತೆಗೆ ಅಡ್ಡಿಪಡಿಸುತ್ತದೆ. ಏಕೆಂದರೆ ಈ ವೈರಸ್ಸುಗಳ ಸುತ್ತಾ ಸಕ್ಕರೆಯ ಕಣಗಳು ಸುತ್ತವರೆದಿದ್ದು ಪರೀಕ್ಷೆ ಇದನ್ನು ಸಕ್ಕರೆಯ ಕಣ ಎಂದೇ ಪರಿಗಣಿಸುತ್ತದೆ. ಪರಿಣಾಮವಾಗಿ ಹೆಚ್ ಐ ವಿ ಸೋಂಕು ಹರಡುವುದನ್ನು ತಡೆಯದೇ ಮಾರಕ ರೋಗ ಉಲ್ಬಣಾವಸ್ಥೆ ತಲುಪಲು ಪರೋಕ್ಷವಾಗಿ ನೆರವಾಗುತ್ತದೆ.
ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ
೭) ಹೃದಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
2013ರಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ದೇಹದಲ್ಲಿ ಸಕ್ಕರೆಯ ಅಂದರೆ ಸಕ್ಕರೆಯ ಮೂಲಕ ಆಗಮನವಾದ ಗ್ಲುಕೋಸ್ ಪ್ರಮಾಣ ಹೆಚ್ಚಿದಷ್ಟೂ ಹೃದಯದ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಆಗಾಧವಾದ ಪ್ರಮಾಣದ ಗ್ಲುಕೋಸ್ ಬಂದರೆ ಅದಕ್ಕೊಂದು ಗತಿಗಾಣಿಸಬೇಕಲ್ಲ, ಈ ಆಗಾಧ ಪ್ರಮಾಣವನ್ನು ಎಲ್ಲೆಡೆ ಸಾಗಿಸಲು ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಒತ್ತಡದಲ್ಲಿ ದೇಹದ ತುದಿತುದಿಗಳಿಗೆ ರಕ್ತದ ಮೂಲಕ ಕಳುಹಿಸಬೇಕಾಗುತ್ತದೆ. ಹೀಗೆ ಅತಿ ಭಾರ ಅಥವಾ ಓವರ್ ಲೋಡ್ ಆದ ಹೃದಯ ಆಯಸ್ಸಿಗೂ ಮುನ್ನವೇ ಶಿಥಿಲಗೊಳ್ಳುತ್ತದೆ.
ಯಕೃತ್ ಹಾನಿಗೊಳಗಾಗುತ್ತದೆ
೮) ಯಕೃತ್ ಹಾನಿಗೊಳಗಾಗುತ್ತದೆ.
ಯಕೃತ್ ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ. ಮದ್ಯ ಯಕೃತ್ ಗೆ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.
ಹೆಚ್ಚಿನ ಸಕ್ಕರೆ?
೯) ಹೆಚ್ಚಿನ ಸಕ್ಕರೆ?
ಕೆಲವೊಮ್ಮೆ ಮಕ್ಕಳನ್ನು ಮತ್ತು ಕೆಲವು ವಯಸ್ಕರನ್ನು ತಪಾಸಣೆಗೊಳಿಸಿದ ವೈದ್ಯರು 'sugar high’ ಎಂಬ ಪದವನ್ನು ಉಪಯೋಗಿಸುವುದನ್ನು ಗಮನಿಸಿರಬಹುದು. ಏಕೆಂದರೆ ರಕ್ತದಲ್ಲಿ ಅಗತ್ಯಕ್ಕೂ ಹೆಚ್ಚು ಸಕ್ಕರೆ (ಗ್ಲುಕೋಸ್) ಇರುವ ಸಂದರ್ಭದಲ್ಲಿ ಮೆದುಳಿಗೆ ಹಾನಿಯಾಗುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚುತ್ತದೆ. ಈ ಆತಂಕವನ್ನೇ ವೈದ್ಯರು ಶುಗರ್ ಹೈ ಎಂದು ಕರೆಯುತ್ತಾರೆ. ಈಗ ಕೆಲವು ಔಷಧಿಗಳ ಮೂಲಕ ಅಪಾರವಾದ ಈ ಗ್ಲೂಕೋಸ್ ಗೆ ಒಂದು ದಾರಿ ಕಾಣಿಸಲು ಪ್ರಯತ್ನಿಸಬೇಕಾಗುತ್ತದೆ.

೧೦) ಆಯಸ್ಸು ಕಡಿಮೆಯಾಗುತ್ತದೆ.
ಸಕ್ಕರೆಯ ಅಪಾರ ಪ್ರಮಾಣದ ಸೇವನೆಯಿಂದ ದೇಹದ ವಿವಿಧ ಭಾಗಗಳು ಬಾಧೆಗೊಳಗಾಗಿ ತಮ್ಮ ಕ್ಷಮತೆಯನ್ನು ಕುಗ್ಗಿಸಿಕೊಳ್ಳುವ ಪರಿಣಾಮವಾಗಿ ಒಟ್ಟಾರೆ ಆರೋಗ್ಯ ಮತ್ತು ತನ್ಮೂಲಕ ಆಯಸ್ಸು ಕಡಿಮೆಯಾಗುತ್ತದೆ.

ಈ ವಿಷದಿಂದ ಪಾರಾಗಲು ಏನು ಮಾಡಬೇಕು:
* ಬಿಳಿ ಸಕ್ಕರೆಯ ಬದಲು ಕಂದು ಸಕ್ಕರೆ ಅಥವಾ ಬೆಲ್ಲ ಉಪಯೋಗಿಸಿ. ಬೆಲ್ಲವೂ ಕಪ್ಪು ಅಥವಾ ಕೆಂಪಗಿದ್ದಷ್ಟೂ ಉತ್ತಮ
* ಮಾರುಕಟ್ಟೆಯಲ್ಲಿ ದೊರಕುವ ಸಿಹಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ
* ಶುಭಸಂದರ್ಭಗಳಲ್ಲಿ ನೀಡಲಾಗುವ ಸಿಹಿಗಳು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಂದು ತುಂಡಿನಲ್ಲಿ ಅರ್ಧವನ್ನು ಮಾತ್ರ ತಿನ್ನಿ, ಮತ್ತೆ ಅದರ ಕಡೆಗೆ ನೋಡಲೇಬೇಡಿ.
* ಅಮೇರಿಕ ಹಾರ್ಟ್ ಅಸೋಸಿಯೇಷನ್ ಸಂಸ್ಥೆ ಸೂಚಿಸುವ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಗರಿಷ್ಟ 6 ಚಿಕ್ಕ ಚಮಚ ಅಥವಾ 100 ಕ್ಯಾಲೋರಿಗಳವರೆಗೆ ಸುರಕ್ಷಿತವಾಗಿ ಸೇವಿಸಬಹುದು. ಅದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ. 
* ಬೇಕರಿಯ ಮೈದಾ ಆಧಾರಿತ ತಿಂಡಿಗಳನ್ನು ಆದಷ್ಟೂ ದೂರ ಮಾಡಿ. ಏಕೆಂದರೆ ಇದರಲ್ಲಿ ನಾರು ಇಲ್ಲದೇ ಇರುವುದು ಮತ್ತು ರುಚಿಗಾಗಿ ಸಕ್ಕರೆ ಹಾಕಿರುವುದು ಅರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ. 
* ಸಾಂಪ್ರಾದಾಯಿಕ ವಿಧಾನದ ಜೋನಿ ಬೆಲ್ಲ, ತಟ್ಟೆ ಬೆಲ್ಲ, ಜೇನು ಮೊದಲಾದವು ಬಿಳಿ ಸಕ್ಕರೆಯ ಬದಲಿಗೆ ಉಪಯೋಗಿಸಬಹುದಾದ ಸಿಹಿಗಳು.
* ಲೋ ಕ್ಯಾಲೋರಿ ಸ್ವೀಟ್ನರ್ ಎಂದು ಮಧುಮೇಹಿಗಳಿಗೆ ಸಿಗುವ ಸಕ್ಕರೆಯಲ್ಲಿ aspertame ಎಂಬ ಹೆಸರಿದೆಯೇ ಗಮನಿಸಿ. ಇದ್ದರೆ ಖಂಡಿತಾ ಕೊಳ್ಳಬೇಡಿ, ಏಕೆಂದರೆ ಇದು ಸಕ್ಕರೆಗಿಂತಲೂ ದೊಡ್ಡ ವಿಷವಾಗಿದೆ. 
* artificial sweetner ಎಂಬ ಹೆಸರು ಹೊತ್ತ ಪೊಟ್ಟಣದ ಸಕ್ಕರೆ ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಅಪಾಯಕಾರಿ.
* ಕೋಲಾ ಮೊದಲಾದ ಲಘುಪಾನೀಯಗಳ ಬದಲು ಲಿಂಬೆರಸ, ಮಜ್ಜಿಗೆ ಸೇವಿಸಿ
* ಪೊಟ್ಟಣಗಳಲ್ಲಿ ಸಿಗುತ್ತಿರುವ ಹಣ್ಣಿನ ರಸಗಳ ಬದಲಿಗೆ ತಾಜಾ ಹಣ್ಣಿನ ರಸಗಳನ್ನು ಸೇವಿಸಿ. (ಇವುಗಳನ್ನು ಗುರುತಿಸುವುದು ಸುಲಭ, ಕೃತಕ ಸವಿ ಇರುವ ಪೇಯ ಡ್ರಿಂಕ್ ಎಂಬ ಹೆಸರಿನಲ್ಲಿ ಸಿಗುತ್ತದೆ. ಉದಾಹರಣೆಗೆ ಮ್ಯಾಂಗೋ ಡ್ರಿಂಕ್. ಅದೇ ಮಾನಿನ ರಸ ಮ್ಯಾಂಗೋ ಜ್ಯೂಸ್ ಎಂಬ ಹೆಸರಿನಲ್ಲಿ ಸಿಗುತ್ತದೆ ಹಾಗೂ ಕೊಂಚ ದುಬಾರಿಯಾಗಿರುತ್ತದೆ. ಆರೋಗ್ಯ ಉಳಿಸಿಕೊಳ್ಳಬೇಕು ಎನಿಸಿದರೆ ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ತಾಜಾ ಹಣ್ಣಿನ ರಸವನ್ನೇ ಕೊಳ್ಳಿ. 
* ಬೆಳಗ್ಗಿನ ಉಪಾಹಾರದಲ್ಲಿ ಸಕ್ಕರೆ ಚಿಮುಕಿಸಿ ತಿನ್ನುವ ಅಭ್ಯಾಸ ಕೊನೆಗೊಳಿಸಿ. (ಕೆಲವರಿಗೆ ದೋಸೆ, ಉಪ್ಪಿಟ್ಟು ಮೊದಲಾದವುಗಳನ್ನು ಸಕ್ಕರೆಯ ಜೊತೆ ಸೇವಿಸುವ ಅಭ್ಯಾಸವಿರುತ್ತದೆ)
* ಟೀ ಕಾಫಿ ಮೊದಲಾದ ನಿಮ್ಮ ನೆಚ್ಚಿನ ಪೇಯಗಳಲ್ಲಿ ಸಕ್ಕರೆ ಬದಲಿಗೆ ಕೊಂಚವೇ ಜೇನು ಸೇರಿಸಿ ಕುಡಿಯಬಹುದು.