ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ನವೆಂಬರ್ 21, 2017

ಸೀತಾಫಲದ ನೀವು ಅರಿತಿರಲೇಬೇಕಾದ ಪ್ರಮುಖ ಆರೋಗ್ಯಕರ ಪ್ರಯೋಜನಗಳು

ಒನ್ ಇಂಡಿಯಾ.ಕಾಂ ನಲ್ಲಿ ಪ್ರಕಟವಾಗಿರುವ ಲೇಖನ
https://goo.gl/d9NRvv

ಅಸ್ತಮಾ ರೋಗ ಬರದಂತೆ ತಡೆಯುತ್ತದೆ

ಸೀತಾಫಲ ಒಂದು ಅದ್ಭುತವಾದ ಫಲವಾಗಿದ್ದು ಬಹುತೇಕ ಜನರ ನೆಚ್ಚಿನ ಹಣ್ಣೂ ಆಗಿದೆ. ಸಸ್ಯಶಾಸ್ತ್ರದಲ್ಲಿ ಆನೋನಾಸಿಯಾ (Annonacea) ಎಂಬ ವರ್ಗಕ್ಕೆ ಸೇರಿರುವ ಈ ಫಲವನ್ನು ಭಾರತದೆಲ್ಲೆಡೆ ಬೆಳೆಯಲಾಗುತ್ತಿದ್ದು ಎಲ್ಲೆಡೂ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಉಷ್ಣವಲಯದಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಈ ಮರದ ಕಾಂಡ ಅಷ್ಟೇನೂ ದೃಢವಲ್ಲ. ಅಲ್ಲದೇ ಆಲುಗಡ್ಡೆಯಂತೆಯೇ ಈ ಹಣ್ಣಿನ ಆಕೃತಿಯೂ ಒಂದೇ ರೀತಿಯಾಗಿಲ್ಲ. ಕೆಲವು ದುಂಡಗಿದ್ದರೆ ಕೆಲವು ಮೊಟ್ಟೆಯಾಕಾರ, ಕೆಲವು ಮಾವಿನಂತೆ ಒಟ್ಟಾರೆ ಬೇರೆಬೇರೆಯಾಗಿರುತ್ತದೆ. ಆದರೆ ಹೊರಭಾಗ ನಸು ಹಸಿರು ಬಣ್ಣದ ಮೇಲೆ ಬೂದಿ ಎರಚಿದಂತಹ ಬಣ್ಣ ಪಡೆದಿದ್ದು ಒಳಭಾಗದಲ್ಲಿ ನೂರಾರು ಬೀಜಗಳಿರುತ್ತವೆ. ಪ್ರತಿ ಬೀಜವನ್ನೂ, ಅತಿ ಸಿಹಿಯಾದ ಹಣ್ಣಿನ ತಿರುಳು ಆವರಿಸಿಕೊಂಡಿರುತ್ತದೆ. ಈ ಬೀಜಗಳು ಗಟ್ಟಿಯಾಗಿದ್ದು ಕೊಂಚ ವಿಷಕಾರಿಯೂ ಆಗಿರುವ ಕಾರಣ ಬೀಜಗಳನ್ನು ತಿನ್ನಬಾರದು. ತಿರುಳಿನ ಭಾಗ ಹಾಗೂ ಸಿಪ್ಪೆಯ ಒಳಭಾಗವನ್ನೂ ಕೆರೆದು ಸೇವಿಸಬಹುದು. ಈ ತಿರುಳಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ನೆರವಾಗುತ್ತವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ನಿಯಾಸಿನ್, ವಿಟಮಿನ್ ಎ, ಕರಗುವ ನಾರು ಹಾಗೂ ಮೆಗ್ನೇಶಿಯಂ ಸಹಾ ಇವೆ.

ಅಲ್ಲದೇ ಈ ಹಣ್ಣಿನ ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳೂ ದೊರಕುತ್ತವೆ ಹಾಗೂ ನೈಸರ್ಗಿಕ ಸಕ್ಕರೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಸೀತಾಫಲವನ್ನು ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಇದರ ತಿರುಳನ್ನು ನೇರವಾಗಿಯೂ ಸೇವಿಸಬಹುದು ಅಥವಾ ಸ್ಮೂಥಿ, ಜ್ಯೂಸ್, ರಾಸಾಯನ, ಐಸ್ ಕ್ರೀಂ ಗಳ ರೂಪದಲ್ಲಿಯೂ ಸೇವಿಸಬಹುದು. ಇದರ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಿದ್ದು ನಿಮ್ಮನ್ನು ಚಕಿತಗೊಳಿಸಬಹುದು. ಇದು ಕೇವಲ ಉತ್ತಮ ಆರೋಗ್ಯ ಮಾತ್ರವಲ್ಲ, ತ್ವಚೆ, ಕೂದಲು, ರಕ್ತದೊತ್ತಡ ನಿರ್ವಹಣೆ, ಆರೋಗ್ಯಕರ ಮೂಳೆಗಳು ಮೊದಲಾದ ಹಲವು ಪ್ರಯೋಜನಗಳನ್ನೂ ಒದಗಿಸುತ್ತದೆ. ಈ ಮರದ ಎಲೆಗಳಲ್ಲಿ ಸಹಾ ಔಷಧೀಯ ಗುಣವಿದ್ದು ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತದೆ. ಮರದ ಕಾಂಡದ ತೊಗಟೆಯನ್ನು ಹಲ್ಲುನೋವು ಮತ್ತು ಒಸಡುಗಳ ನೋವಿನ ಶಮನಕ್ಕಾಗಿ ಬಳಸಲಾಗುತ್ತದೆ. ಇಂದಿನ ಲೇಖನದಲ್ಲಿ ಸೀತಾಫಲದ ಹತ್ತು ಪ್ರಮುಖ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ:

೧) ಅಸ್ತಮಾ ರೋಗ ಬರದಂತೆ ತಡೆಯುತ್ತದೆ:
ಇದರಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ B6 ವಿಶೇಷವಾಗಿ ಶ್ವಾಸನಾಳಗಳ ಉರಿಯೂತವನ್ನು ತಡೆಯುವ ಕ್ಷಮತೆ ಹೊಂದಿದ್ದು ನಿಯಮಿತ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ವೃದ್ದಿಸಿ ಅಸ್ತಮಾಘಾತ ಎದುರಾಗುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೨) ಹೃದಯಾಘಾತದಿಂದ ರಕ್ಷಿಸುತ್ತದೆ:
ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರಗಳು ನಮ್ಮ ಆರೋಗ್ಯವನ್ನು ಹಾಳು ಮಾಡುವುದು ಮಾತ್ರವಲ್ಲ, ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಗೂ ಆಹ್ವಾನ ನೀಡುತ್ತಿವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೃದಯದ  ಕ್ಷಮತೆಗೆ ಅಗತ್ಯವಾಗಿದೆ. ಸೀತಾಫಲದಲ್ಲಿ ಹೃದಯದ ಆರೋಗ್ಯವನ್ನು ಕಾಪಾಡಲು ಪೂರಕವಾದ ಹಲವು ಪೋಷಕಾಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ಮೆಗ್ನೇಶಿಯಂ ಹೃದಯದ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಸ್ನಾಯುಗಳ ಸೆಡೆತವನ್ನು ಕಡಿಮೆಗೊಳಿಸಿ ರಕ್ತಸಂಚಾರ ಸುಗಮಗೊಳಿಸುತ್ತದೆ. ಇದರಲ್ಲಿರುವ ವಿಟಮಿನ್ B6 ರಕ್ತದಲ್ಲಿ ಹೀಮೋಸಿಸ್ಟೈನ್ (homocystein)(ಅಥವಾ ಪ್ರೋಟೀನುಗಳಲ್ಲಿರುವ ಗಂಧಕ ಆಧಾರಿತ ಅಮೈನೋ ಆಮ್ಲ ಹಾಗೂ ಸಿಸ್ಟೈನ್ ಎಂಬ ಕಿಣ್ವಗಳ ನಡುವಣ ಜೀವರಾಸಾಯನಿಕ ಕ್ರಿಯೆಗೆ ಸಹಕರಿಸುವ ಕಿಣ್ವ) ಸಂಗ್ರಹವನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗಬಹುದಾಗಿದ್ದ ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೩) ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ
ಮಧುಮೇಹ ಇಂದು ಹೆಚ್ಚು ಹೆಚ್ಚು ಜನರಲ್ಲಿ ಕಂಡುಬರುತ್ತಿದ್ದು ವಿಶ್ವದಾದ್ಯಂತ ಪ್ರಮುಖ ಕೊಲೆಗಾರ ಕಾಯಿಲೆಯಾಗಿ ಪರಿಣಮಿಸುತ್ತಿದೆ. ಸೀತಾಫಲಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಾಲ ಮುಂದೂಡಬಹುದು. ಇದರಲ್ಲಿರುವ ಕರಗುವ ನಾರು ಆಹಾರದಲ್ಲಿರುವ ಸಕ್ಕರೆಯನ್ನು ಕರುಳುಗಳು ಹೀರಿಕೊಳ್ಳಲು ನೆರವಾಗುತ್ತದೆ, ತನ್ಮೂಲಕ ಟೈಪ್ ೨ ವಿಧದ ಮಧುಮೇಹದ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ಮಧುಮೇಹದ ವಿರುದ್ದ ಇನ್ನಷ್ಟು ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ.  ಅಲ್ಲದೇ ಇದರಲ್ಲಿರುವ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತವೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತವೆ. ಇವೆಲ್ಲಾ ಕಾರಣಗಳಿಂದ ಮಧುಮೇಹಿಗಳು ಹಾಗೂ ಮಧುಮೇಹದ ಅನುವಂಶಿಕ ಸಾಧ್ಯತೆ ಇರುವ ವ್ಯಕ್ತಿಗಳಿಗೆ ಸೀತಾಫಲ ಸೂಕ್ತ ಫಲವಾಗಿದೆ.

೪) ಜೀರ್ಣಕ್ರಿಯೆಗೆ ಸಹಕರಿಸುತ್ತದೆ:
ಇದರ ತಿರುಳು ಸುಲಭವಾಗಿ ಜೀರ್ಣವಾಗುವುದು ಮಾತ್ರವಲ್ಲ, ಜಠರ ಹಾಗೂ ಕರುಳುಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳನ್ನೂ ಇಲ್ಲವಾಗಿಸುತ್ತದೆ. ವಿಶೇಷವಾಗಿ ಕರುಳುಗಳಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಅಜೀರ್ಣತೆಯಿಂದ ಎದುರಾಗುವ ಹೊಟ್ಟೆಯುರಿ, ಕರುಳಿನ ಹುಣ್ಣು, ಆಮ್ಲೀಯತೆ, ಹುಳಿತೇಗು ಮೊದಲಾದ ತೊಂದರೆಗಳೂ ಇಲ್ಲವಾಗುತ್ತವೆ. ಒಂದು ಮಧ್ಯಮ ಗಾತ್ರದ ಸೀತಾಫಲದಲ್ಲಿ ಆರು ಗ್ರಾಂಗಳಷ್ಟು ಕರಗುವ ನಾರು ಇದ್ದು ಈ ಪ್ರಮಾಣ ಮಲಬದ್ದತೆಯಿಂದ ರಕ್ಷಿಸಲು ಸೂಕ್ತವಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ದೊರೆತಾಗ ತಿರುಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಿಟ್ಟು ಪುಡಿಯಾಗಿಸಿದರೆ ಈ ಪುಡಿಯನ್ನು ವರ್ಷವಿಡೀ ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ಅತಿಸಾರ ಹಾಗೂ ಬೇಧಿಗೆ ಔಷಧಿಯಾಗಿ ಬಳಸಬಹುದು.

೫) ಕೊಲೆಸ್ಟ್ರಾಲ್ ಕಡಿಮೆಯಾಗಿಸುತ್ತದೆ:
ಇದರಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ ಹಾಗೂ ಒಳ್ಳೆಯ ಕೊಲೆಸ್ಟಾರ್ ಅನ್ನು ಹೆಚ್ಚು ಮಾಡುತ್ತವೆ. ಅಲ್ಲದೇ ಆಹಾರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕರುಳುಗಳು ಹೀರಿಕೊಳ್ಳುವುದರಿಂದ ರಕ್ಷಿಸುತ್ತವೆ. ಅಲ್ಲದೇ ನಮ್ಮ ದೇಹದಲ್ಲಿರುವ ಕಿಣ್ವಗಳ ಮೇಲೆ ಆಕ್ರಮಣ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

೬) ಹೃದಯದ ಒತ್ತಡ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ:
ಇದರಲ್ಲಿ ಸಮತೋಲನದ ಪ್ರಮಾಣದಲ್ಲಿ ಸೋಡಿಯಂ ಹಾಗೂ ಪೊಟ್ಯಾಶಿಯಂ ಲವಣಗಳಿವೆ. ಇವು ರಕ್ತದ ಒತ್ತಡದ ಏರುಪೇರನ್ನು ನಿಯಂತ್ರಿಸಲು ಅಗತ್ಯವಾಗಿದೆ. ಮೆಗ್ನೀಶಿಯಂ ಪ್ರಮಾಣ ಕೊಂಚ ಹೆಚ್ಚಿರುವ ಕಾರಣ ಹೃದಯದ ಸ್ನಾಯುಗಳನ್ನು ನಿರಾಳಗೊಳಿಸಿ ಈ ಮೂಲಕ ಎದುರಾಗುವ ಸೆಳೆತ ಹಾಗೂ ನಡುನಡುವೆ ಎದುರಾಗುವ ನೂಕಲುಗಳಿಂದ ರಕ್ಷಿಸುತ್ತದೆ. ತನ್ಮೂಲಕ ಹೃದಯಾಘಾತ ಹಾಗೂ ಸ್ತಂಭನಗಳ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

೭) ರಕ್ತಹೀನತೆಯ ಚಿಕಿತ್ಸೆಗೆ ನೆರವಾಗುತ್ತದೆ:
ಸೀತಾಫಲದಲ್ಲಿ ಪ್ರಚೋದಕ, ಕಫ ನಿವಾರಕ, ದೇಹವನ್ನು ತಂಪುಮಾಡುವ ಹಾಗೂ ಅಸ್ತಿಮಜ್ಜೆಗಳಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣಗಳೂ ಇದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತವೆ. ಈ ಗುಣಗಳು ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉತ್ತಮವಾಗಿವೆ.

೮) ಗರ್ಭಿಣಿಯರಿಗೂ ಸೂಕ್ತವಾಗಿದೆ:
ಇದರಲ್ಲಿರುವ ತಾಮ್ರ ಮತ್ತು ಕಬ್ಬಿಣ ರಕ್ತದ ಹೀಮೋಗ್ಲೋಬಿನ್ ನಲ್ಲಿರುವ ಪ್ರಮುಖ ಘಟಕಗಳಾಗಿರುವ ಕಾರಣದಿಂದ ವಿಶೇಷವಾಗಿ ಗರ್ಭಿಣಿಯರು ಈ ಫಲವನ್ನು ಹೆಚ್ಚಾಗಿ ಸೇವಿಸಲು ಸಲಹೆ ಮಾಡಲಾಗುತ್ತದೆ.

೯) ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದ ನೈಸರ್ಗಿಕ ಆಂಟಿ ಆಕ್ಸಿಡೆಂಟು ಅಥವಾ ವಿಟಮಿನ್ ಸಿ ಇದೆ. ವಿಟಮಿನ್ ಸಿ ಅತ್ಯುತ್ತಮವಾದ ಉರಿಯೂತ ನಿವಾರಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೋಷಕಾಂಶವಾಗಿದೆ. ನಿತ್ಯವೂ ಒಂದು ಪ್ರಮಾಣದ ಸೀತಾಫಲವನ್ನು ಸೇವಿಸುವ ಮೂಲಕ ದೇಹ ಚಿಕ್ಕಪುಟ್ಟ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ದೇಹಕ್ಕೆ ಹಾನಿಕರವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದವೂ ಈ ಪೋಷಕಾಂಶ ಹೋರಾಡುವ ಮೂಲಕ ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

೧೦) ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ತೂಕವನ್ನು ನೀಡುತ್ತದೆ:
ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ ಹಾಗೂ ದೈಹಿಕ ಚಟುವಟಿಕೆಯಿಂದ ಬೇಗನೇ ಸುಸ್ತಾಗುವುದರಿಂದ ತಡೆಯುತ್ತದೆ. ಅಲ್ಲದೇ ಸ್ನಾಯುಗಳು ಬೇಗನೇ ದಣಿಯಲು ಬಿಡದೇ ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಕಡಿಮೆಯಿದ್ದು ತೂಕ ಹೆಚ್ಚಿಸಿಕೊಳ್ಳಬಯಸುವ ವ್ಯಕ್ತಿಗಳಿಗೂ ಈ ಫಲ ಅತ್ಯಂತ ಸೂಕ್ತವಾಗಿದೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವ ಕಾರಣ ಹಸಿವೂ ಹೆಚ್ಚಾಗುತ್ತದೆ. ಆದರೆ ಇದೇ ಗುಣ ಸ್ಥೂಲದೇಹವನ್ನು ಇನ್ನಷ್ಟು ಸ್ಥೂಲವಾಗಿಸುವ ಕಾರಣ ಸ್ಥೂಲದೇಹಿಗಳು ಈ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಬೇಕು.

1 ಕಾಮೆಂಟ್‌: