ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ನವೆಂಬರ್ 19, 2010

ಚೀನಾದ ಬ್ರಾ ಕಳಚುವ ಸ್ಪರ್ಧೆ

ಜಗತ್ತಿನಲ್ಲಿ ಹಲವು ಚಿತ್ರವಿಚಿತ್ರ ಸ್ಪರ್ಧೆಗಳು ನಡೆಯುತ್ತವೆ. ಇಂತಹ ಒಂದು ಎಡಬಿಡಂಗಿ ಸ್ಪರ್ಧೆ ಚೀನಾದಲ್ಲೂ ನಡೆಯುತ್ತಿದೆ. ಸುಂದರಿಯರ ಕಂಚುಕ ಬಿಚ್ಚುವ ಸ್ಪರ್ಧೆಯೊಂದು ಚೀನಾದ ಗುಂಗ್ಜೋವ್ ನಗರದಲ್ಲಿ ಈಗ ಜನಪ್ರಿಯವಾಗುತ್ತಿದೆ.


ಸ್ಪರ್ಧೆ ಅಂದರೆ ಅಂತಹ ಕಷ್ಟದ್ದೇನಲ್ಲ. ವೇದಿಕೆಯ ಮೇಲೆ ನಿಂತಿರುವ ಮುಖವಾಡ ತೊಟ್ಟಿರುವ ಎಂಟು ಸುಂದರ ಲತಾಂಗಿಯರು ತೊಟ್ಟಿರುವ ಕಂಚುಕಗಳನ್ನು ಬಿಚ್ಚುವುದು ಅಷ್ಟೇ. ಅತಿ ಕಡಿಮೆ ಸಮಯದಲ್ಲಿ ಎಂಟೂ ಕಂಚುಕಗಳನ್ನು ಬಿಚ್ಚಿದವರಿಗೆ ಒಂದು ಸಾವಿರ ಯುವಾನ್ (ಸುಮಾರು ಏಳು ಸಾವಿರದ ಮುನ್ನೂರು ರೂಪಾಯಿಗಳು) ನಗದು ಬಹುಮಾನ.




ಇದೇನು ಮಹಾ ಎಂದು ಓಡಿ ಬರುವ ಪುರುಷರಿಗೆಲ್ಲಾ ಒಂದು ನಿಯಮ ತಡೆಯುತ್ತದೆ. ಅದೇನೆಂದರೆ ಕುಂಚುಕವನ್ನು ಬಿಚ್ಚಲು ಕೇವಲ ಒಂದು ಕೈಯನ್ನು ಮಾತ್ರ ಬಳಸಬೇಕು. ಈ ವರ್ಷದ ಈ ಸ್ಪರ್ಧೆಯಲ್ಲಿ ಗೆದ್ದಿದ್ದು ಮಾತ್ರ ಓರ್ವ ಮಹಿಳೆಯಂತೆ. ಕೇವಲ ಇಪ್ಪತ್ತೊಂದು ಸೆಕೆಂಡುಗಳಲ್ಲಿ ಎಂಟೂ ಲತಾಂಗಿಯರ ಕಂಚುಕಗಳನ್ನು ಬಿಚ್ಚಿ ಸಾವಿರ ಯುವಾನ್ ಜಾಕೆಟ್ಟಿಗಿಳಿಸಿದ್ದಾಳಂತೆ.
ಸೋತ ಪುರುಷರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದಂತೆ ಬ್ರಾ ಬಿಚ್ಚುವುದೇನು ನಮ್ಮ ದಿನನಿತ್ಯದ ಕೆಲಸವೇ, ಅವರಿಗಾದರೋ ದಿನಾ ಬಿಚ್ಚೀ ಬಿಚ್ಚೀ ಅಭ್ಯಾಸವಾಗಿರುತ್ತದೆ ಎಂದು ಅವಲತ್ತುಕೊಂಡರಂತೆ.








ಶುಕ್ರವಾರ, ಅಕ್ಟೋಬರ್ 8, 2010

ಐದೂವರೆ ಅಡಿ ಎತ್ತರದ ಸೌತೆಕಾಯಿ ಬೆಳೆದ ಚೀನಾ ರೈತ

ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ ಬೆಳೆಯುತ್ತವೆ.


ಆದರೆ ದಕ್ಷಿಣ ಚೀನಾದ ಹೇಫೈ ಪ್ರಾಂತದ ಅಕೇಲೇ ಹೈ ಎಂಬ ರೈತನ ಜಮೀನಿನಲ್ಲಿ ಬರೋಬ್ಬರಿ ಐದೂವರೆ ಅಡಿ ಎತ್ತರದ ಸೌತೆಕಾಯಿಯೊಂದು ಬೆಳೆದು ಅಚ್ಚರಿ ಮೂಡಿಸಿದೆ. ಇದಕ್ಕಿಂತ ಮುನ್ನ ಬ್ರಿಟನ್ನಿನ ಫ್ರಾಂಕ್ ಡಿಮ್ಮಾಕ್ ಎಂಬ ಕೃಷಿಕರು ಬೆಳೆದಿದ್ದ ಮೂರು ಅಡಿ ಐದಿಂಚು ಎತ್ತರದ ಸೌತೇಕಾಯಿಯೇ ವಿಶ್ವದ ಅತಿದೊಡ್ಡ ಸೌತೆಕಾಯಿ ಎಂಬ ದಾಖಲೆ ಪಡೆದಿತ್ತು.
ಇಂದು ಈ ದಾಖಲೆ ಅಕೇಲೇ ಪಾಲಾಗಿದೆ. ಇದು ಬೆಳೆಯಲು ಯಾವ ಗೊಬ್ಬರ ಬಳಸಿದ್ದಿರಿ ಎಂದು ಕೇಳಿದರೆ ಆತ ನಗುತ್ತಾ ನೀಡುವ ಉತ್ತರ 'ಕುದುರೆ ಲದ್ದಿ'. ಆದರೆ ಅದೇ ಗದ್ದೆಯಲ್ಲಿ ಅದೇ ಬಳ್ಳಿಯಲ್ಲಿ ಅದೇ ಗೊಬ್ಬರವುಂಡ ಇತರ ಸೌತೇಕಾಯಿಗಳು ಸಾಮಾನ್ಯಗಾತ್ರವನ್ನು ಪಡೆದಿವೆ. ಆದರೆ ಈ ಸೌತೇಕಾಯಿ ಮಾತ್ರ ದಿನೇ ದಿನೇ ದೊಡ್ಡದಾಗುತ್ತಾ ಹೋಗುತ್ತಿತ್ತು. ಕುತೂಹಲಕ್ಕೆ ಎಷ್ಟು ದೊಡ್ಡದಾಗಿ ಬೆಳೆಯುತ್ತದೆ ನೋಡೋಣ ಎಂದು ಕೊಯ್ಲು ಮಾಡದೇ ಹಾಗೇ ಬಿಟ್ಟೆ. ಕಡೆಗೆ ಐದಡಿ ಏಳು ಇಂಚು ಎತ್ತರವಾದ ಬಳಿಕ ಇದರ ಬೆಳೆಯುವಿಕೆ ನಿಂತಿತು. ಬೆಳೆಯುವಿಕೆ ನಿಂತಿತು ಎಂದು ಖಾತ್ರಿಯಾದ ಬಳಿಕವೇ ಇದನ್ನು ಕೊಯ್ದು ತಂದೆ ಎಂದು ವಿವರಿಸುತ್ತಾನೆ.

ಈಗ ಈ ಸೌತೆಕಾಯಿಯನ್ನು ದಾಖಲೆ ಬೆಲೆಕೊಟ್ಟು ಕೊಂಡುಕೊಳ್ಳಲು ಯಾರಾದರೂ ಮುಂದೆ ಬರುವವರಿಗಾಗಿ ಆತ ಕಾಯುತ್ತಿದ್ದಾನೆ. ಸೌತೇಕಾಯಿ ಬೇಕೇ ಸೌತೆಕಾಯಿ??

ಅರ್ಶದ್ ಹುಸೇನ್ ಎಂ.ಹೆಚ್, ದುಬೈ. 

ಶುಕ್ರವಾರ, ಆಗಸ್ಟ್ 27, 2010



ಭವಿಷ್ಯದ ಗಾಳಿಯಂತ್ರ - ವಿದ್ಯುತ್ ಕೊರತೆಗೆ ನೂತನ ಮಂತ್ರ



-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡಿಬರುವುದು ಚಿತ್ರದುರ್ಗದ ಕಲ್ಲಿನ ಕೋಟೆ, ಒನಕೆ ಓಬವ್ವ, ಡಾ. ವಿಷ್ಣುವರ್ಧನರ ಮೊದಲ ಚಿತ್ರ ನಾಗರಹಾವು ಮೊದಲಾದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗಕ್ಕೆ ಭೇಟಿನೀಡಿದವರಿಗೆ ಚಿತ್ರದುರ್ಗದ ಬೆಟ್ಟಗಳ ಮೇಲೆ ಸ್ಥಾಪಿಸಿರುವ ಬೃಹತ್ ಗಾಳಿಯಂತ್ರಗಳು ಕಲ್ಲಿನ ಕೋಟೆ ಗೋಚರಿಸುವ ಮೊದಲೇ ತಮ್ಮ ದರ್ಶನ ನೀಡುತ್ತವೆ.

ಏನೀ ಗಾಳಿಯಂತ್ರಗಳು? ನಾಗರಿಕತೆ ಬೆಳೆಯುತ್ತಿದ್ದಂತೆ ಪ್ರಸ್ತುತದಿನದ ಅಗತ್ಯವಾದ ವಿದ್ಯುತ್ತಿಗೂ ಬೇಡಿಕೆ ಹೆಚ್ಚುತ್ತಿದೆ. ಅಣೆಕಟ್ಟುಗಳ ಮುಖಾಂತರ ಹರಿಯುವ ನದಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದಿಸುವ ಮಾರ್ಗ ಬಹುತೇಕ ದುಬಾರಿಯೂ ಕಷ್ಟಕರವೂ ಆಗಿದೆ. ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕಿ ಸ್ವಾವಲಂಬಿಯಾಗುವುದು ಇಂದಿನ ಅಗತ್ಯವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕದ ಹಲವೆಡೆ ಗಾಳಿಯಂತ್ರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ. ಸೋಲಾರ್ ವಿದ್ಯುತ್ ದೀಪಗಳಿಗೂ ಮನ್ನಣೆ ದೊರಕುತ್ತಿದೆ.


ಗಾಳಿಯಂತ್ರಗಳೇಕೆ ಸರ್ವವ್ಯಾಪಿಯಾಗಿಲ್ಲ? ಒಂದು ವೇಳೆ ವಿದ್ಯುತ್ ಕೊರತೆಗೆ ಗಾಳಿಯಂತ್ರಗಳು ಸಮರ್ಪಕ ಉತ್ತರವಾದರೆ ಪ್ರತಿ ಊರಿನಲ್ಲೇಕೆ ಇವನ್ನು ಸ್ಥಾಪಿಸಲಾಗುತ್ತಿಲ್ಲ? ಇದಕ್ಕೆ ಕಾರಣ ಹಲವಾರು. ಗಾಳಿಯಂತ್ರಕ್ಕೆ ಅವಶ್ಯವಾಗಿರುವ ಹಲವು ಪರಿಸ್ಥಿತಿಗಳು ಎಲ್ಲಾ ಪರಿಸರದಲ್ಲಿ ಸಿಗಲು ಸಾಧ್ಯವಿಲ್ಲ. ಉದಾಹರಣೆಗೆ ಗಾಳಿಯಂತ್ರದ ಸ್ಥಾಪನೆಗೆ ದಿನದ ಎಲ್ಲಾ ಅವಧಿಗಳಲ್ಲೂ ಕನಿಷ್ಟ ೫ ಮೀ/ಸೆಕೆಂಡ್ ವೇಗದ ಗಾಳಿ ಬೀಸುತ್ತಿರುವ ಎತ್ತರದ ಜಾಗ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗದ ಬೆಟ್ಟಗಳ ಮೇಲೆ ಹಲವು ಗಾಳಿಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅತಿ‌ಎತ್ತರದ ಬೆಟ್ಟದ ಮೇಲೂ ಸಹಾ ಗಾಳಿಯ ವೇಗ ದಿನದ ಕೆಲವು ಘಂಟೆಗಳ ಕಾಲ ೫ ಮೀ/ಸೆಕೆಂಡ್ ಗಿಂತಲೂ ಕಡಿಮೆಯಿರುತ್ತವೆ. ಆಗ ಆ ಯಂತ್ರಗಳ ಬ್ಲೇಡುಗಳು ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ಕಾರಣದಿಂದ ಬೆಟ್ಟದ ಮೇಲೆ ಹಲವಾರು ಗಾಳಿಯಂತ್ರಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಅಲ್ಲದೇ ಪ್ರತಿ ಗಾಳಿಯಂತ್ರದ ಬೆಲೆ ಬಲುದುಬಾರಿ. ಸ್ಥಾಪನಾ ವೆಚ್ಚವೂ ಹೆಚ್ಚು. ನಿರ್ವಹಣೆಗಾಗಿ ಎತ್ತರದ ಕ್ರೇನುಗಳನ್ನು ಆ ಗಾಳಿಯಂತ್ರದ ಬಳಿಗೆ ಸಾಗಿಸುವ ಸಾಗಾಣಿಕಾ ವೆಚ್ಚವೇ ಕೆಲವೊಮ್ಮೆ ನಿರ್ವಹಣಾ ವೆಚ್ಚಕ್ಕೂ ಅಧಿಕವಾಗುವುದುಂಟು. ಎತ್ತರದ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸಬಹುದಾದ್ದರಿಂದ ಎಲ್ಲಾ ಊರುಗಳಿಗೆ ಈ ಯಂತ್ರಗಳ ಸೌಭಾಗ್ಯವಿಲ್ಲ.

ಹಾಗಾದರೆ ಬೇರೆ ಪರ್ಯಾಯ ಮಾರ್ಗಗಳೇ ಇಲ್ಲವೇ? ಇದೆ. ಕೆನಡಾದ ಮ್ಯಾಗೆನ್ನ್ ಪವರ್ ಸಂಸ್ಥೆ ಯಾವುದೇ ಸ್ಥಳದಲ್ಲಿ ಸ್ಥಾಪಿಸಬಹುದಾದ ಸರಳ ಗಾಳಿಯಂತ್ರದ ಕರಡುಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಮಾರ್ಸ್ ((Magenn Air Rotor System -M.A.R.S) ಎಂಬ ಹೆಸರಿನ ಈ ತ್ರಂತ್ರಜ್ಞಾನವನ್ನು ಸುಲಭವಾಗಿ ಹಾಗೂ ಅತಿಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದು ಎಂದು ಸಂಸ್ಥೆ ಪ್ರಕಟಿಸಿದೆ. ಈ ಉಪಕರಣದ ಕಾರ್ಯವೈಖರಿ ಹೇಗೆ ಎಂದು ತಿಳಿಯುವ ಮೊದಲು ಕೆಲವು ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.


ಗಾಳಿಪಟ: ಗಾಳಿಪಟವನ್ನು ನಾವೆಲ್ಲರೂ ಹಾರಿಸಿಯೇ ಇದ್ದೇವೆ. ಕಡಿಮೆ ಎತ್ತರದಲ್ಲಿದ್ದಾಗ ಗೋತಾ ಹೊಡೆಯುವ, ಕೆಳಕ್ಕಿಳಿಯುವ ಗಾಳಿಪಟ ಕೊಂಚ ಎತ್ತರ ಪಡೆದ ಬಳಿಕ ಸ್ಥಿರವಾಗಿರುವುದೇಕೆ? ಇದಕ್ಕೆ ಕಾರಣ ಎತ್ತರ ಹೆಚ್ಚಿದಂತೆ ಗಾಳಿಯ ವೇಗ ಹೆಚ್ಚು ಸ್ಥಿರವಾಗಿರುವುದೂ ಹಾಗೂ ಹೆಚ್ಚಿನದ್ದಾಗಿರುವುದೇ ಆಗಿದೆ. ಅದೂ ಅಲ್ಲದೇ ಒಂದು ಹಂತದಲ್ಲಿ ಗಾಳಿಪಟದ ದಾರವನ್ನು ಒಂದೆಡೆ ಕಟ್ಟಿಬಿಟ್ಟರೆ ಇಡಿಯದಿನ ಅದು ತನ್ನಷ್ಟಕ್ಕೆ ಹಾರಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ -ಮ್ಯಾಗ್ನಸ್ ಎಫೆಕ್ಟ್. ಸುಮ್ಮನೇ ಎಸೆದ ಕ್ರಿಕೆಟ್ ಚೆಂಡು ನೇರವಾಗಿ ಹೋಗುತ್ತದೆ. ಅದೇ ಕ್ರಿಕೆಟ್ ಚೆಂಡನ್ನು ತನ್ನ ಸುತ್ತ ತಿರುಗುವಂತೆ ಮಾಡಿ ಎಸೆದರೆ (ಸ್ಪಿನ್) ಚೆಂಡು ತ್ರಿಜ್ಯಾಕಾರದ ಮಾರ್ಗದಲ್ಲಿ ಮುನ್ನಡೆಯುತ್ತದೆ. ಫುಟ್ಬಾಲ್ ಆಟಗಾರ ವೇಗವಾಗಿ ತಿರುಗುವಂತೆ ಒದ್ದ ಚೆಂಡು ಸರಳ ರೇಖೆಯಲ್ಲಿ ಚಲಿಸದೇ ತ್ರಿಜ್ಯಾಕಾರದಲ್ಲಿ ಚಲಿಸಿ ಗೋಲ್ ಪಡೆಯುವುದಕ್ಕೂ ಇದೇ ಕಾರಣ. ವೃತ್ತಾಕಾರದ ವಸ್ತು ತನ್ನ ಸುತ್ತ ತಿರುಗುತ್ತಾ ಗಾಳಿಯಲ್ಲಿ ಚಲಿಸಿದರೆ ಒಂದು ಬದಿಯಲ್ಲಿ ಹೆಚ್ಚಿನ ಸಾಂದ್ರತೆಯನ್ನೂ, ಇನ್ನೊಂದೆಡೆ ಕಡಿಮೆ ಸಾಂದ್ರತೆಯನ್ನೂ ಪಡೆಯುವುದರಿಂದ ವಸ್ತುವಿನ ಪಥದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ವಸ್ತುವನ್ನು ವೇಗವಾಗಿ ಬೀಸುತ್ತಿರುವ ಗಾಳಿಯ ಮಧ್ಯೆ ಇರಿಸಿದರೆ? ಇದಕ್ಕೆ ವಿರುದ್ಧವಾದ
ಪ್ರತಿಕ್ರಿಯೆ ಉಂಟಾಗುತ್ತದೆ. ಅಂದರೆ ವಸ್ತು ತಿರುಗಲು ಪ್ರಾರಂಭಿಸುತ್ತದೆ. (ಗಿರಿಗಿಟ್ಟಲೆ ನೆನಪಿಗೆ ಬಂತಲ್ಲವೇ) ಈಗ ಈ ಗಿರಿಗಿಟ್ಟಲೆಯನ್ನು ವೇಗವಾಗಿ ಗಾಳಿ ಬೀಸುತ್ತಿರುವಲ್ಲಿಟ್ಟರೆ ಗಿರಿಗಿರಿ ತಿರುಗುತ್ತದೆ. ಆ ತಿರುಗುವ ಗಿರಿಗಿಟ್ಟಲೆಯನ್ನು ವಿದ್ಯುತ್ ಉತ್ಪಾದಿಸುವ ರೋಟಾರಿಗೆ ಜೋಡಿಸಿದರೆ ಸತತ ವಿದ್ಯುತ್ ಲಭ್ಯವಾಗುತ್ತದೆ. ಮಾರ್ಸ್ ಉಪಕರಣ ಉಪಯೋಗಿಸುವ ತಂತ್ರಜ್ಞಾನದ ಜೀವಾಳವೂ ಇದೇ.



ಆದರೆ ಸತತವಾಗಿ ವೇಗವಾಗಿ ಬೀಸುತ್ತಿರುವ ಗಾಳಿ ಇರುವುದು ಎಲ್ಲಿ? ಬೇರೆಲ್ಲೂ ಹೋಗುವುದು ಬೇಡ, ನಾವಿದ್ದಲ್ಲಿಯೇ ಮುನ್ನೂರು ಅಡಿ ಮೇಲೆ ಹೋದರೆ ಸಾಕು. ಸತತವಾದ, ಒಂದೇ ದಿಕ್ಕಿನಲ್ಲಿ ಬೀಸುತ್ತಿರುವ ಸಾಧಾರಣವಾಗಿ ಹತ್ತು ಮೀ/ಸೆಕೆಂಡ್ ಗೆ ಕಡಿಮೆಯಿಲ್ಲದ ವೇಗದ ಗಾಳಿ ಸದಾ ಲಭ್ಯ. ಆದರೆ ಅಷ್ಟು ಎತ್ತರದಲ್ಲಿ ಸ್ಥಾಪಿಸುವುದು ಹೇಗೆ? ಇದಕ್ಕೆ ಉತ್ತರ ಹಗುರ ಅನಿಲ. ಅನಿಲಗಳಲ್ಲಿಯೇ ಅತಿಹಗುರವಾಗಿರುವುದು ಜಲಜನಕ. ಆದರೆ ಜಲಜನಕ ಸ್ವದಹ್ಯ (ಅಂದರೆ ತನಗೆ ತಾನೇ ಹೊತ್ತಿಕೊಳ್ಳುವ) ಗುಣವುಳ್ಳ ಅನಿಲವಾದ್ದರಿಂದ ಅದರ ಬಳಿಕ ಅತಿಹಗುರವಾದ ಅನಿಲ ಹೀಲಿಯಂ ಅನಿಲ ಈ ಉಪಕರಣದ ಮುಖ್ಯ ಪರಿಕರ.



ಮಾರ್ಸ್ ಕಾರ್ಯನಿರ್ವಹಣೆ: ಅಗತ್ಯಕ್ಕೆ ತಕ್ಕ ಗಾತ್ರದ ಬೆಲೂನ್ ಹಾಗೂ ಅದಕ್ಕೆ ಅಲವಡಿಸಬಹುದಾದ ಬ್ಲೇಡುಗಳನ್ನು ಸಾಮಾನ್ಯ ವಾಹನದಲ್ಲಿ ಕೊಂಡೊಯ್ದು ಹೀಲಿಯಂ ತುಂಬಿಸಿ ಬಲಿಷ್ಠವಾದ ಉಕ್ಕಿನ ಕೇಬಲ್ ಮೂಲಕ ಆಗಸಕ್ಕೆ ಹಾರಿಬಿಟ್ಟರೆ ಸಾಕು. ಇಡಿಯ ಪಟ್ಟಣಕ್ಕೆ ವಿದ್ಯುತ್ ಅಗತ್ಯವಾದರೆ ಒಂದಕ್ಕಿಂತ ಹೆಚ್ಚಿನ ಬೆಲೂನುಗಳ ಸಮೂಹದ ಅಗತ್ಯವಿದೆ. ಆಗಸದಲ್ಲಿ ಗಿರಗಿರ ತಿರುಗುವ ರೋಟರಿಗೆ ಅಳವಡಿಸಿರುವ ಡಿ.ಸಿ. ವಿದ್ಯುತ್ ಜನರೇಟರ್ ಮೂಲಕ ಭೂಮಿಗೆ ವಿದ್ಯುತ್ ವರ್ಗಾಯಿಸಿ ಸೂಕ್ತ ಆಲ್ಟರ್ನೇಟರ್ ಮೂಲಕ ಎ.ಸಿ.ಗೆ ಪರಿವರ್ತಿಸಿಕೊಳ್ಳಬಹುದು.






ಅತಿಸರಳವಾದ ಈ ಮಾರ್ಸ್ ಉಪಕರಣದ ಉಪಯೋಗಗಳು ಹಲವಾರು. ಇದನ್ನು ಯಾವುದೇ ಊರಿನಲ್ಲಿ, ಯಾವುದೇ ಸ್ಥಳದಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಅಗತ್ಯವಾದ ಗಾಳಿಯ ವೇಗ ಕನಿಷ್ಟ ನಾಲ್ಕು ಮೀಟರ್ ಪ್ರತಿ ಸೆಕೆಂಡ್ ಇದ್ದರೂ ಸಾಕು. ಆದರೆ ಸುಮಾರು ಮೂನ್ನೂರು ಅಡಿ ಎತ್ತರದಲ್ಲಿ ಕನಿಷ್ಟ ಹತ್ತು ಮೀಟರ್ ಆದರೂ ಗಾಳಿ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ಉಪಕರಣ ನಿಲ್ಲುವ ಭಯ ಇಲ್ಲವೇ ಇಲ್ಲ. ಎಷ್ಟೇ ವೇಗವಾದ ಗಾಳಿಯಿದ್ದರೂ ತಡೆದುಕೊಳ್ಳುವ ಸಾಮರ್ಥ್ಯ ಮಾರ್ಸ್ ಗೆ ಇದೆ.
ಸುಮಾರು ಆರುನೂರರಿಂದ ಒಂದು ಸಾವಿರ ಅಡಿ ಎತ್ತರದಲ್ಲಿ ಉಪಕರಣವನ್ನು ಸ್ಥಾಪಿಸಿದರೆ ಆ ಊರಿನ ವಿದ್ಯುತ್ ಕೊರತೆ ಶಾಶ್ವತವಾಗಿ ನೀಗಲು ಸಾಧ್ಯ. ಚಿಕ್ಕ ಮನೆಗೆ ಬೇಕಾದ ಒಂದು ಯಂತ್ರದಿಂದ ಹಿಡಿದು ಇಡಿಯ ನಗರಕ್ಕೆ ಬೇಕಾದ ಹಲವು ಯಂತ್ರಗಳ ಸಮುಚ್ಛಯದವರೆಗೂ ಸ್ಥಾಪಿಸಲು ಸಾಧ್ಯ. ಗಾಳಿಯಂತ್ರದ ಒಂದು ಭಾಗದಷ್ಟು ಮಾತ್ರ ಉತ್ಪಾದನಾವೆಚ್ಚವಿರುವ ಮಾರ್ಸ್ ಉಪಕರಣವನ್ನು ಮೇಲಕ್ಕೇರಿಸುವುದೂ ನಿರ್ವಹಣೆಗಾಗಿ ಕೆಳಕ್ಕಿಳಿಸುವುದೂ ಅತಿಸುಲಭ. ಹಗುರವಾದ್ದರಿಂದ ಯಾವ ಸ್ಥಳದಲ್ಲಿ ಅಗತ್ಯವಿದೆಯೋ ಅಲ್ಲಿ ಸುಲಭವಾಗಿ ವಾಹನದಲ್ಲಿ ಕೊಂಡೊಯ್ಯಲೂ ಸಾದ್ಯ. ಯಾವುದೇ ರೀತಿಯ ಮಾಲಿನ್ಯವಿರದ ಕಾರಣ ಅತ್ಯಂತ ಪರಿಸರಸ್ನೇಹಿ ಕೂಡಾ. ಸುರಕ್ಷತೆಯ ಕಾರಣಕ್ಕೆ ಲೈಟ್ನಿಂಗ್ ಅರೆಸ್ಟರ್ ಅಳವಡಿಸುವುದು ಅಗತ್ಯ. ಮಳೆಗಾಲದಲ್ಲಿ ಸಹಾ ಮೇಲ್ಬಾಗದಲ್ಲಿ ಗಾಳಿಯೊಂದಿಗೆ ಮಳೆಹನಿ ಹಾಗೂ ತೇವಾಂಶದ ಕಾರಣ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆಯಿರುವುದರಿಂದ ತುಕ್ಕು ನಿರೋಧಕ ಹಾಗೂ ಹಗುರವಾದ ಅಲ್ಯೂಮಿನಿಯಂ ಲೋಹದಿಂದ ಮಾರ್ಸ್ ಉಪಕರಣವನ್ನು ತಯಾರಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಬಳಿಕ ಹೆಚ್ಚೂ ಕಡಿಮೆ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾದುದರಿಂದ ವಿದ್ಯುತ್ ಬೆಲೆ ಈಗ ಲಭ್ಯವಾಗುತ್ತಿರುವ ವಿದ್ಯುತ್ ಬೆಲೆಯ ಒಂದಂಶದಷ್ಟು ಅಗ್ಗವಾಗಲಿದೆ.



ಹತ್ತು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉಪಕರಣದ ಅಂಕಿ‌ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಒಮ್ಮೆ ಅಳವಡಿಸಿದರೆ ಸುಮಾರು ಹದಿನೈದು ವರ್ಷಗಳವರೆಗೆ ಬಾಳಿಕೆ ಬರುವ ಈ ಉಪಕರಣದ ಬೆಲೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಈ ವರ್ಷದ ಅಂತ್ಯದಲ್ಲಿ ಮಾರ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.



Magenn Power Product
Model 10kW
Rated Power 10,000 Watts
Size (Diameter x Length) 30 feet by 60 feet
Shipping Weight Under 3,000 lbs - depending on tether length
Volume of Helium 33,000 cubic feet (approx.)
Tether Height 400 ft standard - up to 1,000 ft optional tether length, in increments of 100 feet
Start-up Wind Speed 2.0 m/sec - 4.48 mph
Cut-in Wind Speed 3.0 m/sec - 6.7 mph
Rated Wind Speed 12.0 m/sec - 26.8 mph
Cut-out Wind Speed 25.0 m/sec - 53.7 mph
Maximum Wind Speed 28.0 m/sec - 62.6 mph
Temperature Range -40ºC /-40ºF to +45ºC/+113ºF
Generators 2 x 5 kW
Output Form Various Options Available: 120 VAC 60Hz - 240 VAC 50 Hz - Regulated DC 12-600V
Warranty Up to 5 Years
Life Cycle 10 - 15 Years
Price (USD) (Estimated) TBD
Availability 2009-10




ಪ್ರಸ್ತುತ ಗಣಿ, ಸಮುದ್ರ, ಧೃವಪ್ರದೇಶ ಮೊದಲಾದ ನಿeನ ಪ್ರದೇಶಗಳಲ್ಲೂ ಜನವಸರಿ ವಿರಳವಾದೆಡೆಗಳಲ್ಲೂ ವಿದ್ಯುತ್ ಉತ್ಪಾದನೆ ಸುಲಭಸಾಧ್ಯವಲ್ಲ. ಇಲ್ಲಿ ಭಾರವಾದ ಡೀಸೆಲ್ eನರೇಟರುಗಳನ್ನು ಉಪಯೋಗಿಸಲಾಗುತ್ತಿದೆ. ಉರಿಸುವ ಡೀಸೆಲ್ ಹೊಗೆ ಪರಿಸರಕ್ಕೂ ಹಾನಿಕರ, ಇಂಜಿನ್ ನಿರ್ವಹಣೆಯೂ ಕಷ್ಟಕರ. ಇಂಥಹ ಸ್ಥಳಗಳಲ್ಲೆಲ್ಲಾ ಮಾರ್ಸ್ ಒಂದು ವರದಾನವಾಗಿ ಪರಿಣಮಿಸಲಿದೆ.


ಈ ಸರಳವಿದ್ಯುತ್ ಗಾಳಿಯಂತ್ರ ನಮ್ಮ ಊರುಗಳಿಗೂ ಶೀಘ್ರವೇ ಆಗಮಿಸುವಂತಾಗಲಿ ಎಂದು ಆಶಿಸೋಣ.


(ಈ ಲೇಖನ ಸುಧಾ ವಾರಪತ್ರಿಕೆಯಲ್ಲಿ 2010 ರ ಏಪ್ರಿಲ್ ನಂದು ಪ್ರಕಟವಾಗಿದೆ.)

ಬುಧವಾರ, ಏಪ್ರಿಲ್ 14, 2010

ಶತಾಯುಶಿ ಅಜ್ಜಿಯ ತಲೆ ಮೇಲೊಂದು ಕೋಡು

ಚಿಕ್ಕಂದಿನಲ್ಲಿ ನಮ್ಮ ಸ್ನೇಹಿತವರ್ಗದಲ್ಲಿ ಕೆಲವರ ಬಳಿ ಬೇರೆಯವರ ಬಳಿ ಇರದ ಯಾವುದಾದರೂ ವಸ್ತು ಇದ್ದರೆ ಅದರ ಮಾಲಿಕ ತೋರುವ ಬಿಂಕ ಬಿನ್ನಾಣವನ್ನು ನಾವು 'ಅವನ ಹತ್ತಿರ ಆ ವಸ್ತು ಇದೆ ಅಂತ ಅವನ ತಲೆಯಲ್ಲೊಂದು ಕೊಂಬು ಬಂದಿದೆ' ಎಂದು ಛೇಡಿಸುತ್ತಿದ್ದೆವು. ಅಲ್ಲದೇ ಪರೀಕ್ಷೆಯಲ್ಲಿ ಪಾಸಾದಾಗ, ಯಾವುದಾದರೂ ಸಂತೋಷ ನೀಡುವ ಸಂಗತಿಗಳಿಗೂ ಈ 'ತಲೆಯ ಮೇಲೊಂದು ಕೊಂಬು' ಎಂಬ ಉತ್ಪ್ರೇಕ್ಷೆಯನ್ನೇ ಉಪಯೋಗಿಸುತ್ತೇವೆ.

ಆದರೆ ಚೀನಾದ ಈ ಶತಾಯುಶಿ ಅಜ್ಜಿಯ ತಲೆಯ ಮೇಲೊಂದು ನಿಜವಾಗಿಯೂ ಕೋಡು ಮೂಡಿದೆ. ಚೀನಾದ ಹೆನಾನ್ ಪ್ರಾಂತದ ಲಿನ್ಲೋ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿರುವ ಜಾಂಜ್ ರುಯಿಫಾಂಗ್ ಎಂಬ ನೂರಾಒಂದು ವರ್ಷದ ಅಜ್ಜಿಯ ಹಣೆಯ ಎಡಭಾಗದಲ್ಲಿ ಕಳೆದ ವರ್ಷ ಸರಿಸುಮಾರು ಇದೇ ವೇಳೆಗೆ ಗಟ್ಟಿಯಾದ ಮಚ್ಚೆಯೊಂದು ಕಾಣಿಸಿಕೊಂಡಿತ್ತು. ದಿನಕಳೆದಂತೆ ನಿಧಾನವಾಗಿ ಬೆಳೆಯುತ್ತಾ ಹೋದ ಆ ಮಚ್ಚೆ ನಿಧಾನಕ್ಕೆ ಕೋಡಿನಾಕಾರ ತಳೆದು ಈಗ ಒಂದು ವರ್ಷದ ಬಳಿಕ ಸುಮಾರು ಆರು ಸೆಂಟಿಮೀಟರ್ ಉದ್ದ ತಲುಪಿದೆ. ಕಳೆದ ವಾರ ವೀಕ್ಲಿ ವರ್ಲ್ಡ್ ನ್ಯೂಸ್ ಮೂಲಕ ವಿಶ್ವದ ಗಮನ ಸೆಳೆದು ಇದ್ದಕ್ಕಿದಂತೆ ವಿಶ್ಯವಿಖ್ಯಾತಿ ಗಳಿಸಿಕೊಂಡಿದ್ದಾರೆ.



ಆದರೆ ಮಚ್ಚೆ ಇಷ್ಟು ದೊಡ್ಡದಾಗುವ ತನಕ ಯಾರಿಗೂ ತೋರಿಸಲಿಲ್ಲವೇಕೆ ಎಂಬ ಪ್ರಶ್ನೆಗೆ ಅವರ ಮನೆಯವರು ಇದರಿಂದ ಅಜ್ಜಿಗೆ ಯಾವುದೇ ನೋವಾಗಲೀ ತೊಂದರೆಯಾಗಲೀ ಇರದಿದ್ದುದರಿಂದ ಇದೊಂದು ವಯಸ್ಸಿಗೆ ಸ್ವಾಭಾವಿಕವಾದ ಯಾವುದೋ ಬೆಳವಣಿಗೆ ಇರಬಹುದು ಎಂದು ಉಪೇಕ್ಷಿಸಿದೆವು ಎಂದು ಅವರ ಅರವತ್ತು ವರ್ಷ ವಯಸ್ಸಿನ ಮಗ ಜಾಂಗ್ ಗೊವುಜೆಂಗ್ ತಿಳಿಸಿದ್ದಾರೆ. ಅಜ್ಜಿಗೆ ಒಟ್ಟು ಆರು ಜನರು ಮಕ್ಕಳಿದ್ದು ಅತಿ ಹಿರಿಯ ಮಗನಿಗೆ ಎಂಭತ್ತೆರೆಡು ವರ್ಷ ಪ್ರಾಯ. ಮಕ್ಕಳಲ್ಲಾಗಲೀ ಸಂಬಂಧಿಕರಲ್ಲಾಗಲೀ ಯಾರಲ್ಲೂ ಈ ತರಹದ ಮಚ್ಚೆ ಇಲ್ಲ. ಈಗ ಅವರ ಹಣೆಯ ಬಲಭಾಗದಲ್ಲೂ ಚಿಕ್ಕ ಮಚ್ಚೆಯೊಂದು ಕಾಣಿಸಿಕೊಂಡಿದ್ದು ಇದು ಎರಡನೆಯ ಕೊಂಬು ಮೂಡುವ ಸೂಚನೆ ಇರಬಹುದು ಎಂದು ಅವರ ಮನೆಯವರು ತಿಳಿಸುತ್ತಾರೆ.
ಅಷ್ಟಕ್ಕೂ ಈ ಕೋಡು ಮೂಡಿದ್ದು ಹೇಗೆ? ಪ್ರಸ್ತುತ ಈ ಪ್ರಶ್ನೆ ಹಲವರನ್ನು ಕಾಡಿದೆ. ನಮ್ಮ ಉಗುರು ಹಾಗೂ ಕೂದಲಿನ ಮೂಲವಸ್ತುವಾದ ಕೆರಾಟಿನ್ ಸಾಂದ್ರಗೊಂಡು ಈ ಕೋಡಿನ ರೂಪ ತಳೆದಿದೆ. ಒಂದೇ ಸ್ಥಳದಲ್ಲಿ ಸಂಗ್ರಹವಾದ ಕೆರಾಟಿನ್ ಒತ್ತಡದ ಕಾರಣ ಚರ್ಮದಿಂದ ಹೊರದೂಡಲ್ಪಟ್ಟು ದಿನದಿಂದ ದಿನಕ್ಕೆ ಬೆಳೆಯುತ್ತಾ ಕೊಂಬಿನ ರೂಪ ಪಡೆದಿದೆ ಎಂದು ಆಕೆಯನ್ನು ಪರಿಶೀಲಿಸಿದ ವೈದ್ಯರು ಸರಳವಾದ ಉತ್ತರ ನೀಡುತ್ತಾರೆ. ಆದರೆ ಚೀನಾದಲ್ಲಿ ಶತಾಯುಶಿಗಳು ಸಾವಿರಾರಿದ್ದರೂ ಅವರಿಗೇಕೆ ಈ ಕೊಂಬು ಮೂಡಿಲ್ಲ? ಅದೂ ಅಲ್ಲದೇ ಅಜ್ಜಿಯ ಊರಿನಲ್ಲಿಯೇ ಆಕೆಯ ಸಹವರ್ತಿಗಳಲ್ಲೂ ಈ ಕೊಂಬು ಏಕಿಲ್ಲ? ಈ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರವಿಲ್ಲ. ಆದರೆ ಶೀಘ್ರವೇ ಪರಿಣಿತರ ತಂಡ ಆಕೆಯ ಕೊಂಬನ್ನು ಹಾಗೂ ಪರಿಸರವನ್ನು ಪರಿಶೀಲಿಸಲಿದೆ. ಆ ಬಳಿಕವಷ್ಟೆ ಇನ್ನಷ್ಟು ವಿವರಗಳು ಕಂಡುಬರಬಹುದು.



ಆದರೆ ಅಜ್ಜಿಯ ಕುಟುಂಬದವರಿಗೆ ಇದೊಂದು ವರದಾನವಾಗಿ ಕಂಡುಬಂದಿದ್ದು ದೇವರು ನೀಡಿರುವ ಒಂದು ವರಪ್ರಸಾದವೆಂಬಂತೆ ಸ್ವೀಕರಿಸಿದ್ದಾರೆ. ಇದನ್ನು ತೆಗೆಸುವುದಾಗಲೀ ಯಾವುದೇ ತರಹದ ಚಿಕಿತ್ಸೆ ನೀಡುವುದಾಗಲೀ ಅವರು ಒಪ್ಪುತ್ತಿಲ್ಲ. ಈ ಕೊಂಬಿನ ಕಾರಣ ಅಜ್ಜಿಯವರಿಗೆ ಗೋಟ್ ವುಮನ್ (ಕುರಿ ಮಹಿಳೆ ಎಂದರೆ ಸರಿಹೋಗಬಹುದೇ?) ಎಂಬ ಅನ್ವರ್ಥನಾಮವೂ ಸಿಕ್ಕಿದೆ.
ಅರ್ಶದ್ ಹುಸೇನ್ ಎಂ. ಹೆಚ್,
ದುಬೈ
(ಈ ಲೇಖನ 'ಅನುಪಮ' ಮಹಿಳಾ ಮಾಸಪತ್ರಿಕೆಯ ಏಪ್ರಿಲ್-೨೦೧೦ ನೇ ಸಂಚಿಕೆಯಲ್ಲಿ ಪ್ರಕಟವಾಗಿದೆ)

ಶನಿವಾರ, ಮಾರ್ಚ್ 27, 2010

ವಿಶ್ವದ ಏಕಮಾತ್ರ ಅಮರಜೀವಿ

ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು ಪಡೆದುಕೊಳ್ಳುವ ಸಲುವಾಗಿ ನಡೆಸಿದ ಪ್ರಯತ್ನಗಳು ನಮ್ಮ ಪುರಾಣಗಳಲ್ಲಿವೆ, ಹಲವು ಥ್ರಿಲ್ಲರ್ ಕಥೆಗಳಿಗೆ ಜೀವಾಳವಾಗಿವೆ.

ವಿಶ್ವದ ಅಸಂಖ್ಯ ಜೀವಿಗಳಲ್ಲಿ ಇನ್ನೂ ಎಷ್ಟೊ ಜೀವಿಗಳು ಇನ್ನೂ ಮಾನವನಿಗೆ ಅಪರಿಚಿತವಾಗಿಯೇ ಉಳಿದಿವೆ. ನಿರಂತರವಾಗಿ ಜರುಗುತ್ತಿರುವ ಸಂಶೋಧನೆಗಳಿಂದ ಆಗಾಗ ಹೊಸಜೀವಿಗಳ ಅಸ್ತಿತ್ವದ ಬಗ್ಗೆ ಹಾಗೂ ಜೀವನಕ್ರಮಗಳ ಬಗ್ಗೆ ವಿವರಗಳು ದೊರಕಿ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಿವೆ. ಇತ್ತೀಚೆಗೆ ದೊರಕಿರುವ ಮಾಹಿತಿಗಳ ಪ್ರಕಾರ ಸಾಗರಜೀವಿಯಾದ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ (turritopsis nutricula) ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿಫಿಶ್) ವಿಶ್ವದ ಏಕಮಾತ್ರ ಅಮರಜೀವಿಯಾಗಿದೆ. ಅಂದರೆ ಅದಕ್ಕೆ ಸಹಜವಾದ ಸಾವೇ ಇಲ್ಲ. ಸಾವು ಬರುದೇನಿದ್ದರೂ ಅದು ಬೇರೆ ಜೀವಿಗೆ ಆಹಾರವಾದಾಗ ಮಾತ್ರ.
ಈ ಲೋಳೆಮೀನು ಹ್ರೈಡ್ರೊಜೋವಾ ಅಕಶೇರುಕ ವರ್ಗಕ್ಕೆ ಸೇರಿದ್ದು (ಬೆನ್ನುಮೂಳೆ ಇಲ್ಲದ ಪ್ರಜಾತಿ) ಸಾವು ಹತ್ತಿರ ಬರುತ್ತಿದ್ದಂತೆ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಮರಳುತ್ತದೆ.ಅಂದರೆ ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ (transdifferentiation) ಎಂಬ ಹೆಸರನ್ನು ನೀಡಲಾಗಿದ್ದು ಈ ಮೂಲಕ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವವನ್ನು ಪಡೆಯುತ್ತದೆ. ಈ ಅಮರತ್ವದ ಗುಣ ಹೊಂದಿರುವ ಜೀವಿ ಇದುವರೆಗೆ ಇದೊಂದೇ ಪತ್ತೆಯಾಗಿದ್ದು ಸಧ್ಯಕ್ಕೆ ಏಕಮಾತ್ರ ಜೀವಿಯಾಗಿದೆ. ಭೂಮಧ್ಯರೇಖೆಯ ಸಮಶೀತೋಷ್ಣವಲಯದ ಸಾಗರದಲ್ಲಿ ಕಂಡುಬರುವ ಈ ಲೋಳೆಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸ ಹೊಂದಿದೆ. ಹೆಚ್ಚಾಗಿ ಈ ಲೋಳೆಮೀನು ಆಸ್ಟ್ರೇಲಿಯಾ ಬಳಿ ಪತ್ತೆಯಾಗಿವೆ.
ಈ ಗುಣ ಹಲ್ಲಿ ಮತ್ತು ಸರೀಸೃಪ ಮೊದಲಾದವುಗಳಲ್ಲಿ ಕೊಂಚ ಮಟ್ಟಿಗೆ ಇರುವುದನ್ನು ನಾವೆಲ್ಲಾ ಗಮನಿಸಿಯೇ ಇದ್ದೇವೆ. ಹಲ್ಲಿ ಓತಿಕೇತಗಳು ಅಪಾಯ ಕಂಡುಬಂದಾಗ ತಮ್ಮ ಬಾಲವನ್ನು ಉದುರಿಸಿ ಓಡುತ್ತವೆ. ವೈರಿ ಉದುರಿದ ಬಾಲ ಎಗರಾಡುವುದನ್ನೇ ನೋಡಿ ಇದನ್ನೂ ಒಂದು ಜೀವಿ ಎಂದೇ ತಿಳಿದುಕೊಂಡು ಅದರ ಮೇಲೆ ದಾಳಿ ಎಸಗುತ್ತವೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲಸಮಯದಲ್ಲಿಯೇ ಹೊಸಬಾಲ ಬೆಳೆಯುತ್ತದೆ. ಆದರೆ ಇವು ಕೇವಲ ಒಂದು ಅಂಗವನ್ನು ಮಾತ್ರ ಮರುಬೆಳೆಸಬಲ್ಲವೇ ಹೊರತು ಲೋಳೆಮೀನಿನ ತಹರ ಮತ್ತೆ ಹೊಸಜನ್ಮವನ್ನು ಪಡೆಯಲಾರವು.
ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಲೋಳೇಮೀನಿನ ರಹಸ್ಯ ಕಂಡುಹಿಡಿಯಲು ಪ್ರಯತ್ನಗಳು ಸಾಗುತ್ತಿವೆ.
-ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಶುಕ್ರವಾರ, ಮಾರ್ಚ್ 19, 2010

ಭವಿಷ್ಯದ ಮೊಬೈಲ್ ವಿನ್ಯಾಸಗೊಳಿಸಿ - ಹತ್ತು ಲಕ್ಷ ರೂ. ಬಹುಮಾನ ಗೆಲ್ಲಿರಿ

ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು ಗ್ರಾಹಕನನ್ನು ತಬ್ಬಿಬ್ಬುಗೊಳಿಸುತ್ತವೆ. ಒಂದು ಮೊಬೈಲಿನಲ್ಲಿರುವ ವೈಶಿಷ್ಟ್ಯ ಇನ್ನೊಂದರಲ್ಲಿ ಇರುವುದಿಲ್ಲ. ನೂತನ ಮೊಬೈಲುಗಳಲ್ಲಿ ಅಡಕವಾಗಿರುವ ಎಷ್ಟೋ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕನಿಗೆ ಅರಿವೇ ಇರುವುದಿಲ್ಲ. ಹಾಗಾಗಿ ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಕೊಂಚ ಹಿಂದಿನ ದಿನ ಬಿಡುಗಡೆಯಾದ ಮೊಬೈಲ್ ಮಾರಾಟವಾಗದೇ ಉಳಿದು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.
 


ಈ ನಿಟ್ಟಿನಲ್ಲಿ ಗ್ರಾಹಕರೇ ತಮಗೆ ಸೂಕ್ತವೆಸಿನಿದ ವಿನ್ಯಾಸವನ್ನು ರಚಿಸಿ ಬೇಕಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ಕೇವಲ ಅತ್ಯುತ್ತಮ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಖ್ಯಾತ ಸಂಸ್ಥೆ ಎಲ್.ಜಿ. ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಹಕರೇ ಮೊಬೈಲ್ ಫೋನ್ ವಿನ್ಯಾಸಗೊಳಿಸುವ ಸ್ಪರ್ಧೆಯೊಂದನ್ನು ಸಂಸ್ಥೆ ಏರ್ಪಡಿಸಿದೆ. ಎಲ್.ಜಿ. ಡಿಸೈನ್ ದ ಫ್ಯೂಚರ್ ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಒಟ್ಟು ನಲವತ್ತು ಬಹುಮಾನಗಳಿದ್ದು ಅತ್ಯುತ್ತಮ ಮಾದರಿಯ ಮೊಬೈಲ್ ಫೋನ್ ವಿನ್ಯಾಸಕ್ಕೆ ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂಪಾಯಿ) ಬಹುಮಾನವನ್ನು ಘೋಷಿಸಲಾಗಿದೆ.


ಬಹುಮಾನದ ವಿವರಗಳು ಈ ಕೆಳಗಿನಂತಿವೆ:
ಪ್ರಥಮ ಬಹುಮಾನ : ಇಪ್ಪತ್ತು ಸಾವಿರ ಡಾಲರ್ (ಸುಮಾರು ಹತ್ತು ಲಕ್ಷ ರೂ) + ನಲವತ್ತೆರೆಡು ಸಾವಿರ ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಸಾಫ್ಟ್ ವೇರ್ (ಆಟೋಡೆಸ್ಕ್ ಇಂಡಸ್ಟ್ರಿಯಲ್ ಡಿಸೈನ್)
ಎರಡನೆಯ ಬಹುಮಾನ: ಹತ್ತು ಸಾವಿರ ಡಾಲರ್ (ಸುಮಾರು ಐದು ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)
ಮೂರನೆಯ ಬಹುಮಾನ : ಐದು ಸಾವಿರ ಡಾಲರ್ (ಸುಮಾರು ಎರೆಡೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ)
ವಿಮರ್ಶಕರ ಮೆಚ್ಚುಗೆ ಗಳಿಸಿದ ಅತ್ಯುತ್ತಮ ವಿನ್ಯಾಸಕ್ಕೆ : ಮೂರು ಸಾವಿರ ಡಾಲರ್ (ಸುಮಾರು ಒಂದೂವರೆ ಲಕ್ಷ ರೂ) + ಐದು ಸಾವಿರ ರೂ ಮೌಲ್ಯದ ಸಾಫ್ಟ್ ವೇರ್ (ಆಟೋಡೆಸ್ಕ್ ಸ್ಕೆಚ್ಬುಕ್ ಪ್ರೋ) + ನಾಲ್ಕು ಸಾವಿರ ಡಾಲರ್ (ಸುಮಾರು ಎರಡು ಲಕ್ಷ ರೂ) ಮೌಲ್ಯದ ಉಪಕರಣ
ಮೂವತ್ತೇಳು ಸಮಾಧಾನಕರ ಬಹುಮಾನಗಳು: ತಲಾ ಒಂದು ಸಾವಿರ ಡಾಲರ್ (ಸುಮಾರು ಐವತ್ತು ಸಾವಿರ ರೂ)

ಮೊಬೈಲು ವಿನ್ಯಾಸಗೊಳಿಸಲು ಹೆಚ್ಚು ಹೆಣಗಬೇಕಾದ ಅವಶ್ಯಕತೆಯಿಲ್ಲ. ಎಲ್.ಜಿ. ಸಂಸ್ಥೆಯ ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ ಹೊಸ ವಿನ್ಯಾಸ ರಚನೆಯನ್ನು ಕ್ರಮಾಂತರವಾಗಿ (ಸ್ಟೆಪ್ ಬೈ ಸ್ಟೆಪ್) ರಚಿಸಿಕೊಳ್ಳಬಹುದು.

http://www.crowdspring.com/project/2283311_lg-design-the-future-competition/access/

ಸ್ಪರ್ಧೆಗೆ ಪ್ರವೇಶಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ ಏಪ್ರಿಲ್ ೨೬, ೨೦೧೦. ವಿಜೇತರ ಪ್ರಕಟಣೆ ಮೇ ೧೪ ರಂದು. ವಿಜೇತರ ಪಟ್ಟಿಯನ್ನು ಈ ಕೆಳಗಿನ ತಾಣದಲ್ಲಿ ಪ್ರಕಟಿಸಲಾಗುವುದು:

 www.crowdspring.com/LG/winners.

ಮತ್ತೇಕೆ ತಡ, ನಿಮ್ಮ ಮೆದುಳಿಗೆ ಕೊಂಚ ಕೆಲಸ ನೀಡಿ. ಭವಿಷ್ಯದಲ್ಲಿ ನಮ್ಮ ಕೈಗಳಲ್ಲಿ ಬರುವ ಮೊಬೈಲ್ ನಿಮ್ಮದೇ ವಿನ್ಯಾಸವಾಗಿರವಬಹುದು. ಒಂದು ವೇಲೆ ಬಹುಮಾನ ಗೆದ್ದರೆ ಮಾತ್ರ ನನಗೊಂದು ಪಾರ್ಟಿ ಕೊಡಲು ಮರೆಯದಿರಿ.

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ. 

ಶುಕ್ರವಾರ, ಫೆಬ್ರವರಿ 26, 2010

ಪಾಕಿಸ್ತಾನದ ದೇವಾಲಯಗಳು - ಇನ್ನಷ್ಟು ಮಾಹಿತಿಗಳು

ಕೆಲವು ದಿನಗಳ ಮುನ್ನ ಪಾಕಿಸ್ತಾನದ ದೇವಾಲಯಗಳು ಎಂಬ ವಿಷಯದ ಮೇಲೆ ಚುಟುಕಾದ ಒಂದು ಲೇಖನ ಬರೆದಿದ್ದೆ. ಮಾನ್ಯ ಶ್ರೀ ಪೆಜತ್ತಾಯರು ಈ ಲೇಖನಕ್ಕೆ ಪ್ರತಿಕ್ರಿಯಿಸಿದವರಲ್ಲಿ ಮೊದಲಿಗರು. ಅಂದಿನಿಂದ ಹಲವಾರು ಸ್ನೇಹಿತರು ಹಾಗೂ ಅಭಿಮಾನಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವಂತೆ ಕೇಳಿಕೊಂಡಿದ್ದರು. ಆದರೆ ಹೆಚ್ಚಿನ ಮಾಹಿತಿ ಹೊಂದಿಸಲು ಸ್ವಲ್ವ ವಿಳಂಬವಾಯಿತು (ಹೆಚ್ಚಿನ ಪಕ್ಷ ನಾನು ಸೋಮಾರಿಯಾಗಿರುವುದು ಕಾರಣ)

ಶುಕ್ರವಾರ, ಫೆಬ್ರವರಿ 5, 2010

ಪಾಕಿಸ್ತಾನದ ದೇವಾಲಯಗಳು



ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.


ವಿಭಜನೆಯ ಬಳಿಕ ಜನರು ಭಾರತ ಪಾಕಿಸ್ತಾನಗಳಲ್ಲಿ ಹಂಚಿಹೋದರೂ ಅವರು ನಿರ್ಮಿಸಿದ್ದ ದೇವಾಲಯಗಳು ಹಾಗೇ ಉಳಿದವು. ಪಾಕಿಸ್ತಾನದಲ್ಲಿರುವ ಹಲವಾರು ದೇವಾಲಯಗಳ ಪೈಕಿ ಪ್ರಮುಖವಾದುದನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ.




ಭಾನುವಾರ, ಜನವರಿ 24, 2010

ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ

ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ?


ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ ಹೊಸ ಉದ್ಯೋಗವನ್ನು ಸೃಷ್ಟಿಸಿವೆ.  ಉದ್ಯೋಗದ ಹೆಸರು - ಬೆಡ್ ವಾರ್ಮರ್.

ವಾಸ್ತವವಾಗಿ ಇದೊಂದು ಕೋರಿಕೆಯ ಸೇವೆ.  ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ಆತನ ಬೇಕುಬೇಡಗಳೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸ್ನಾನದ ನೀರು ಇಷ್ಟೇ ಬಿಸಿ ಇರಬೇಕು, ಇಷ್ಟೇ ಹೊತ್ತಿಗೆ ಸ್ನಾನ ಮಾಡಬೇಕು, ಚಹಾದಲ್ಲಿ ಸಕ್ಕರೆ ಇಷ್ಟೇ ಇರಬೇಕು, ಇದೇ ಬ್ರಾಂಡಿನ ಉತ್ಪನ್ನವಾಗಬೇಕು, ಇಷ್ಟೇ ಘಂಟೆಗೆ ತಲುಪಬೇಕು, ತಾನು ಕೊಠಡಿ ತಲುಪುವ ಮೊದಲು ಕೊಠಡಿಯ ಏಸಿ ಚಾಲೂ ಇರಬೇಕು ಇತ್ಯಾದಿ ಇತ್ಯಾದಿ. ಇದಕ್ಕೊಂದು ಹೊಸ ಸೇರ್ಪಡೆ ತಾವು ಮಲಗುವ ಹಾಸಿಗೆ ಅಹ್ಲಾದಕರವಾಗಿ ಬೆಚ್ಚಗಿರಬೇಕು, ಅಂದರೆ ಬರೋಬ್ಬರಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರಬೇಕು.

ಬೇರೆ ವಿಧಾನಗಳಿಂದ ಈ ತಾಪಮಾನವನ್ನು ಪಡೆಯಬಹುದಾದರೂ ಸ್ವಾಭಾವಿಕವಾಗಿ ವ್ಯಕ್ತಿಯೊಬ್ಬ ಮಲಗಿ ಹೊರಬಂದ ಹಾಸಿಗೆ ಅತ್ಯಂತ ಕರಾರುವಕ್ಕಾಗಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರುತ್ತದೆಂದು ಸಂಶೋಧನೆಗಳಿಂದ ಧೃಢಪಟ್ಟಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಗ್ರಾಹಕ ಬಯಸಿದರೆ ಆತ ಬರುವ ಮೊದಲು ತನ್ನ ದೇಹದ ಬಿಸಿಯನ್ನು ಹಾಸಿಗೆಗೆ ವರ್ಗಾಯಿಸುವ ಸೇವೆಗೆ ಮುಡಿಪಾದ ವ್ಯಕ್ತಿ ಒಂದು ನಿಗದಿತ ಅವಧಿಯಲ್ಲಿ ಗ್ರಾಹಕನ ಹಾಸಿಗೆಯಲ್ಲಿ ಮಲಗಿ ಗ್ರಾಹಕ ಬರುವ ಕೊಂಚ ಹೊತ್ತಿನ ಮೊದಲು ಹಾಸಿಗೆ ಖಾಲಿ ಮಾಡುತ್ತಾನೆ. ಗ್ರಾಹಕ ಬಂದ ಕೂಡಲೇ ಅತ್ಯಂತ ಆಹ್ಲಾದಕರವಾದ ಬೆಚ್ಚನೆಯ ಹಾಸಿಗೆ ಲಭ್ಯ. ಈ ಸೇವೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಗ್ರಾಹಕ ಹೊರಗೆ ಕೊರೆಯುವ ಚಳಿಯಿಂದ ಥಂಡಿಯಾಗಿ ಬಂದಾಗ ಆಹ್ಲಾದಕರ ತಾಪಮಾನ ತಲುಪಲು ಹೆಚ್ಚಿನ ಸಮಯ ಬೇಕಾಗುವುದರಿಂದ ತಕ್ಷಣ ಬೆಚ್ಚಗಿರುವ ಹಾಸಿಗೆಗೆ ಹೆಚ್ಚಿನ ಬೇಡಿಕೆ.

ಸೋಮಾರಿಯಾಗಿ ಮಲಗುವವರಿಗೆ ಭಲೇ ಅದೃಷ್ಟ ಕಾದಿದೆ ಎನ್ನೋಣವೇ?

ಕೃಪೆ: ದ ಟೆಲಿಗ್ರಾಫ್.

ಗುರುವಾರ, ಜನವರಿ 21, 2010

ಮೊರೊಕ್ಕೋದ ಮರ ಹತ್ತುವ ಕುರಿಗಳು

ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.



ಹೇಳಿ ಕೇಳಿ ಮೊರೊಕ್ಕೋ ಒಂದು ಮರುಭೂಮಿ ದೇಶ. ಸುಡುವ ನೆಲದ ಮೇಲೆ ಹುಲ್ಲು ಬೆಳೆಯುವುದು ದುಸ್ತರ. ಅಂದ ಮೇಲೆ ಜೀವನಕ್ಕೆ ಅಗತ್ಯವಾಗಿರುವ ಕುರಿಗಳಿಗೆ ಮೇವು ಎಲ್ಲಿಂದ ಬರಬೇಕು?



ಮರುಭೂಮಿಯಲ್ಲಿ ವ್ಯಾಪಕವಾಗಿ ಬೆಳೆಯುವ ಸಸ್ಯಗಳ ಸಂಕುಲವೇ ಬೇರೆ ಇವೆ. ಹೆಚ್ಚಿನವು ಮುಳ್ಳುಗಳಿಂದ ಕೂಡಿರುವುವು ಅಥವಾ ವರ್ಷಕ್ಕೊಂದು ಬಾರಿ ಬೀಳುವ ಮಳೆನೀರನ್ನು ಹೀರಿ ಅಲ್ಪಕಾಲ ಜೀವಿಸಿ ಒಣಗುವಂಥವು. ಮರ ಎಂದು ಏನಾದರೂ ಇದ್ದರೆ ಅದು ಮುಳ್ಳುಗಳಿರುವ ಕುಬ್ಜ ಅರ್ಗಾನ್ ಮರ (ಆಲಿವ್ ಜಾತಿಯ ಒಂದು ಮರ) ಮಾತ್ರ. ಇಲ್ಲಿರುವ ಕುರಿಗಳಿಗೆ ಮರವೇರಿ ಸೊಪ್ಪು ತಿನ್ನದೇ ಅನ್ಯಮಾರ್ಗವಿಲ್ಲವಾದುದರಿಂದ ಕುರಿ ಮರಿಯಾಗಿದ್ದಾಗಿನಿಂದಲೇ ಕುರಿಗಾಹಿಗಳು ಮರಏರಿಸುವ ತರಬೇತಿ ನೀಡುತ್ತಾರೆ. ಚಿಕ್ಕಮರಿಯಾಗಿದ್ದಿಂದಿನಿಂದಲೇ ಮರಹತ್ತಿ ಅಭ್ಯಾಸವಾಗುವ ಕುರಿ ಪ್ರೌಢಾವಸ್ಥೆಯಲ್ಲಿ ಮರದ ಮೇಲೆ ಮಂಗ ಜಿಗಿದಷ್ಟೇ ಸಲೀಸಾಗಿ ಸುಮಾರು ಮೂವತ್ತು ಅಡಿ ಎತ್ತರವಿರುವ ಮರದ ಕೊಂಬೆಯಿಂದ ಕೊಂಬೆಗೆ ಜಿಗಿಯುವ ನಿಪುಣತೆ ಪಡಿದಿರುತ್ತದೆ.


ಈ ತರಬೇತಿಯಲ್ಲಿ ಕುರಿಗಾಹಿಗಳ ಸ್ವಾರ್ಥವೂ ಇದೆ. ಅರ್ಗಾನ್ ಮರದ ಹಣ್ಣುಗಳಲ್ಲಿ ಒಂದರಿಂದ ಮೂರು ಬೀಜಗಳಿರುತ್ತವೆ. ಈ ಬೀಜಗಳು ಧೃಢವಾಗಿರುವುದರಿಂದ ಕುರಿಗಳು ಅವನ್ನು ತಿನ್ನದೇ ಕೇವಲ ಹಣ್ಣಿನ ಮೃದುಭಾಗವನ್ನು ತಿಂದು ಬೀಜಗಳನ್ನು ಉಗುಳುತ್ತವೆ. ದಿನವಿಡೀ ಹೀಗೆ ಉಗುಳಿದ ಬೀಜಗಳನ್ನು ಕುರಿಗಾಹಿಗಳು ಸಂಜೆ ಸಂಗ್ರಹಿಸುತ್ತಾರೆ. ಈ ಬೀಜಗಳನ್ನು ತೊಳೆದು ಒಣಗಿಸಿ ಬಳಿಕ ಇದರಿಂದ ಎಣ್ಣೆ ತೆಗೆಯಲಾಗುತ್ತದೆ. ಈ ಎಣ್ಣೆಯನ್ನು ಅಡುಗೆಗೂ, ಮೈಕೈಗೆ ಮಾಲಿಷ್ ಮಾಡಲೂ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.


ಈ ಪ್ರಕ್ರಿಯೆ ನೂರಾರು ವರ್ಷಗಳಿಂದ ನೆಡೆದು ಬರುತ್ತಿದ್ದು ಇತ್ತೀಚೆಗೆ ಕುರಿಗಳ ಪ್ರಮಾಣ ತೀರಾ ಹೆಚ್ಚಾಗಿರುವುದರಿಂದ ಅರ್ಗಾನ್ ಮರಗಳು ಅಳಿವಿನಂಚಿನಲ್ಲಿವೆ.



http://www.youtube.com/watch?v=oQev3UoGp2M



ಮೇಲಿನ ಲಿಂಕ್ ಮೂಲಕ ಮರವೇರುವ ಕುರಿಗಳ ವೀಡಿಯೋದೃಶ್ಯವನ್ನು ವೀಕ್ಷಿಸಬಹುದು.

ಅರ್ಶದ್ ಹುಸೇನ್ ದುಬೈ.

ಶುಕ್ರವಾರ, ಜನವರಿ 15, 2010

ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ


ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ
ಕ್ರೀಡಾಂಗಣವೊಂದು ತೈವಾನಿನ ಕಾವೋಸ್ಯಿಯಂಗ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ.






















ವರ್ಲ್ಡ್ ಗೇಮ್ಸ್ ಸ್ಟೇಡಿಯಮ್ ಎಂಬ ಹೆಸರಿನ ಈ ಕ್ರೀಡಾಂಗಣದಲ್ಲಿ ಒಟ್ಟು ಐವತ್ತು ಸಾವಿರ ಜನರಿಗೆ ಸ್ಥಳಾವಕಾಶ ಒದಗಿಸಲಾಗಿದೆ. ಕ್ರೀಡಾಂಗಣದ ಸಂಪೂರ್ಣ ಮೇಲ್ಛಾವಣಿಯನ್ನು ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಒಟ್ಟು 8,844 ಫೋಟೋವೋಲ್ಟಾಯಿಕ್ ಸೆಲ್ಲುಗಳ ಸಮುಚ್ಛಯದಿಂದ ಆವರಿಸಲಾಗಿದ್ದು ಈ ಕಾರ್ಯವನ್ನು ಜಪಾನಿನ ಟೋಯೋ ಇಟೋ ಸಂಸ್ಥೆ ಪೂರ್ಣಗೊಳಿಸಿದೆ.ಈ ರೀತಿ ಉತ್ಪತ್ತಿಯಾದ ವಿದ್ಯುತ್ ಕ್ರೀಡಾಂಗಣದ 3,300 ವಿದ್ಯುತ್ ದೀಪಗಳಿಗೆ ಹಾಗೂ ಎರೆಡು ಬೃಹತ್ ಗಾತ್ರದ ಟೀವಿ ಪರದೆಗಳಿಗೆ ಜೀವ ನೀಡುತ್ತದೆ. ಕ್ರೀಡಾಂಗಣದ ಇನ್ನುಳಿದ ಬಳಕೆಗೂ ಉಪಯೋಗಿಸಿ ಮಿಗುವ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳಲು ಬೃಹತ್ ಬ್ಯಾಟರಿಗಳ ಸಮೂಹವನ್ನೂ ಕ್ರೀಡಾಂಗಣ ಹೊಂದಿದೆ. ಈ ಹೆಚ್ಚುವರಿ ವಿದ್ಯುತ್ತನ್ನು ಮಾರುವ ಬಗ್ಗೆಯೂ ತೈವಾನ್ ಸರ್ಕಾರ ಯೋಚಿಸುತ್ತಿದೆ.





























ಈ ಕ್ರೀಡಾಂಗಣದಲ್ಲಿ 2009 ರ ವರ್ಲ್ಡ್ ಗೇಮ್ಸ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಈ ವರ್ಷ ತೈವಾನಿನ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನೂ ಈ ಕ್ರೀಡಾಂಗಣದಲ್ಲಿ ಆಡಿಸಲು ಯೋಜಿಸಲಾಗಿದೆ. ಇನ್ನುಳಿದಂತೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಒಲಿಂಪಿಕ್ಸ್ ನಲ್ಲಿ ಒಳಗೊಳ್ಳದ ಕ್ರೀಡೆಗಳಾ ಪ್ಯಾರಾಟ್ರೂಪಿಂಗ್, ಟೆಂಪಿನ್ ಬೌಲಿಂಗ್, ರಗ್ಬಿ ಸೆವೆನ್ ಮೊದಲಾದ ಕ್ರೀಡೆಗಳನ್ನೂ ಆಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕ್ರೀಡಾಂಗಣ ಒಂದು ವೃತ್ತಾಕಾರದಲ್ಲಿದ್ದು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸ್ವಾಗತ ಬಯಸುತ್ತಿರುವ ಸ್ನೇಹಪರ ಡ್ರಾಗನ್ ನಿಂತಿರುವ ಶೈಲಿಯನ್ನು ಅನುಸರಿಸುತ್ತದೆ.

ಈ ಕೀಡಾಂಗಣ ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಪ್ರಮಾಣ ವಾರ್ಷಿಕ 1.14 ಮಿಲಿಯನ್ ಕಿ.ವ್ಯಾ.ಘಂಟೆಗಳು. (1140 ಮೆಗಾವ್ಯಾಟ್). ಈ ಉತ್ಪಾದನೆಯ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗದ ಇಂಗಾಲದ ಪ್ರಮಾಣ ವಾರ್ಷಿಕ 660 ಟನ್.

ವಿದ್ಯುತ್ ಉತ್ಪಾದನೆಯ ತೀವ್ರ ಅಗತ್ಯವಿರುವ ಭಾರತಕ್ಕೆ ಈ ಕ್ರೀಡಾಂಗಣವೊಂದು ಮಾದರಿಯಾಗಬಹುದೇ, ಕಾದು ನೋಡಬೇಕು.

ಅರ್ಶದ್ ಹುಸೇನ್, ದುಬೈ.


ಗುರುವಾರ, ಜನವರಿ 14, 2010

ಕೊಳಕು ನೀರು ಶುದ್ಧೀಕರಿಸಲು ’ಒಸಾರ್ಬ್’ ಸ್ಪಂಜು - ಹೊಸವರ್ಷದ ಕೊಡುಗೆ


ನೀರನ್ನು ಶುದ್ಧೀಕರಿಸಲು ಇಂದು ಹತ್ತು ಹಲವು ತಂತ್ರಜ್ಞಾನಗಳು ಲಭ್ಯವಿವೆ. ಸರಳ ಮಡಕೆ-ಮರಳು ಸೋಸುಕುಡಿಕೆಯಿಂದ ಹಿಡಿದು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ಬೃಹತ್ ಕಾರ್ಯಗಾರಗಳು ಇಂದು ಲಭ್ಯವಿದೆ.

ಜನಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಅಗತ್ಯತೆಯೂ ಹೆಚ್ಚುತ್ತಾ ಶುದ್ಧನೀರಿನ ಕೊರತೆಯನ್ನು ಪ್ರತಿನಗರಗಳು ಎದುರಿಸುತ್ತವೆ. ಹೆಚ್ಚುವರಿ ನೀರನ್ನು ಹೊರಗಿನಿಂದ ಪಡೆಯುವುದರ ಜೊತೆಗೆ ವ್ಯರ್ಥನೀರನ್ನು ಮರುಬಳಕೆಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಅಮೇರಿಕಾದ ಓಹಿಯೋ ಸಂಸ್ಥಾನದ ವೂಸ್ಟರ್ ವಿಶ್ವವಿದ್ಯಾಲಯದ ಡಾ. ಪೌಲ್ ಎಡ್ಮಿನ್ಸ್ಟನ್ ರವರು ನೂತನ ಸ್ಪಂಜ್ ಒಂದನ್ನು ಸಾದರಪಡಿಸಿದ್ದಾರೆ. ’ಒಸಾರ್ಬ್’ ಎಂಬ ಹೆಸರಿನ ಈ ಸ್ಪಂಜು ನೀರಿನ ಕಲ್ಮಶಗಳನ್ನು ಮಾತ್ರ ಹೀರಿ ಶುದ್ಧ ನೀರನ್ನು ಪ್ರತ್ಯೇಕಗೊಳಿಸುತ್ತದೆ. ಮಲಿನ ನೀರಿನಿಂದ ಶುದ್ಧ ನೀರನ್ನು ಪಡೆಯಲು ’ಒಸಾರ್ಬ್’ ಅತ್ಯಂತ ಸರಳ, ಸುಲಭ ಹಾಗೂ ಕಡಿಮೆಬೆಲೆಯ ವಸ್ತುವಾಗಿದೆ.

ವಾಸ್ತವವಾಗಿ ಒಸಾರ್ಬ್ ಗಾಜಿನ ಒಂದು ರೂಪ. ಒಸಾರ್ಬ್ ಸಂಪರ್ಕಕ್ಕೆ ಬರುವ ಎಣ್ಣೆ, ಜಿಡ್ಡು, ಮತ್ತಿತರ ನೀರಿನಲ್ಲಿ ಕರಗಿರುವ ಕಲ್ಮಶಗಳು ಅದಕ್ಕೆ ಅಂಟಿಕೊಂಡು ಬಿಡುತ್ತವೆ. ಆದರೆ ನೀರು ಮಾತ್ರ ಒಸಾರ್ಬ್ ಗೆ ಅಂಟಿಕೊಳ್ಳದೇ ಹೋಗುತ್ತದೆ. (ತಾವರೆ ಎಲೆಯ ಮೇಲೆ ನೀರಿನ ಹನಿ ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ). ಕಲ್ಮಶಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದ್ದಂತೆ ಉಬ್ಬಿಕೊಳ್ಳುತ್ತಾ ಹೋಗುವ ಒಸಾರ್ಬ್ ಮೂಲಗಾತ್ರದ ಎಂಟು ಪಟ್ಟು ಕಲ್ಮಶಗಳನ್ನು ಅಂಟಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಎಂಟು ಪಟ್ಟು ಕಲ್ಮಶಗಳನ್ನು ಹೀರಿದ ಒಸಾರ್ಬ್ ಬಳಿಕ ನೀರಿನ ಮೇಲೆ ತೇಲುತ್ತದೆ. ಬಳಿಕ ನೀರಿನಿಂದ ಹೊರತೆಗೆದ ಒಸಾರ್ಬ್ ಸ್ಪಂಜನ್ನು ಹಿಸುಕುವ ಮೂಲಕ ಎಲ್ಲಾ ಕಲ್ಮಶಗಳನ್ನು ಹೊರತೆಗೆದು ಮರುಬಳಕೆ ಮಾಡಬಹುದು.

ಹೊಸವರ್ಷದ ಪ್ರಥಮ ಕೊಡುಗೆಯಾಗಿ ಪ್ರಸ್ತುತಪಡಿಸಿದ ಡಾ. ಎಡ್ಮಿನ್ಸ್ಟನ್ ರವರ ಈ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಯಶಸ್ವಿಯಾಗಿ ಪ್ರಸ್ತುತಪಡಿಸಲು ಜಂಪ್ ಸ್ಟಾರ್ಟ್ ಇಂಕಾರ್ಪೋರೇಶನ್ ಸಂಸ್ಥೆ ಇನ್ನೂರೈವತ್ತು ಸಾವಿರ ಡಾಲರುಗಳ ಸಹಾಯಧನವನ್ನು ಘೋಷಿಸಿದೆ.

ಇದುವರೆಗಿನ ಸಂಶೋಧನೆಗಳ ಮೂಲಕ ಐದು ಪ್ರಕಾರದ ಒಸಾರ್ಬ್ ಗಳನ್ನು ಪ್ರಸ್ತುತಪಡಿಸಲಾಗಿದೆ. ಇವುಗಳಲ್ಲಿ ಎರೆಡು ಪ್ರಕಾರಗಳು ನೀರನ್ನು ಸೋಸುತ್ತವೆ. ಒಂದು ಮಣ್ಣನ್ನೂ, ಇನ್ನೊಂದು ಮರಳನ್ನೂ ಹಾಗೂ ಕೊನೆಯದು ಗಾಳಿಯನ್ನೂ ಸೋಸುತ್ತದೆ.

ಸುಲಭವಸ್ತುಗಳಿಂದ ತಯಾರಾದ ಒಸಾರ್ಬ್ ಕಡಿಮೆವೆಚ್ಚದಲ್ಲಿ ಉತ್ಪಾದಿಸಬಹುದಾದುದರಿಂದ ಇದರಿಂದಾಗುವ ಉಪಯೋಗಗಳು ಅನೇಕ. ಮೊದಲನೆಯದಾಗಿ ನೀರಿನ ಅಗತ್ಯ ಎಲ್ಲಿದೆಯೋ ಅಲ್ಲೆಲ್ಲಾ ಒಸಾರ್ಬ್ ಹೊಂದಿರುವ ನೀರಿನ ಸೋಸುಉಪಕರಣಗಳನ್ನು ಸ್ಥಾಪಿಸಿ ನೀರನ್ನು ಸ್ಥಳೀಯವಾಗಿಯೇ ಮರುಬಳಕೆಮಾಡಿಕೊಳ್ಳುವುದರ ಮೂಲಕ ಶುದ್ಧ ನೀರಿನ ಕೊರತೆಯನ್ನು ನೀಗಿಸಬಹುದು. ಎರಡನೆಯದಾಗಿ ನೀರಿನೊಂದಿಗೆ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಕಶ್ಮಲಗಳಲ್ಲಿರುವ ಕೆಲವು ತೈಲವಸ್ತುಗಳನ್ನು ಮತ್ತೆ ಪಡೆದು ಮರುಬಳಕೆ ಮಾಡಿಕೊಳ್ಳಬಹುದು.

ಶೀಘ್ರದಲ್ಲಿಯೇ ಒಸಾರ್ಬ್ ನಮ್ಮ ಊರಿಗೂ ಬರುವಂತಾಗಲಿ ಎಂದು ಆಶಿಸೋಣ

ಅರ್ಶದ್ ಹುಸೇನ್ ದುಬೈ.

ಗುರುವಾರ, ಜನವರಿ 7, 2010

ಎರೆಡು ರೂಪಾಯಿ ಡಾಕ್ಟ್ರು


ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಪ್ರಥಮ ಭೇಟಿಗೆ ಈ ಡಾಕ್ಟ್ರು ವಿಧಿಸುವುದು ಎರೆಡು ರೂಪಾಯಿ, ಎರಡನೆಯ ಭೇಟಿಗೆ?…. ಒಂದು ರೂಪಾಯಿ


ಲಕ್ಷಗಟ್ಟಲೇ ಡೊನೇಶನ್ ನೀಡಿ ಎಂಬಿಬಿಎಸ್ ಮಾಡಿ ಲಕ್ಷಗಟ್ಟಲೇ ಕಮಾಯಿಸುವ ನಿಟ್ಟಿನಲ್ಲಿ ವೈದ್ಯರಾಗುವವರ ಇಂದಿನ ದಿನಗಳಲ್ಲಿ ಯಾರಾದರೂ ಬಡವರ ಸೇವೆ ಮಾಡುತ್ತೇನೆ, ಹಳ್ಳಿಗೆ ಹೋಗುತ್ತೇನೆ ಎಂದರೆ ನಗುವವರ ಸಂಖ್ಯೆಯೇ ಹೆಚ್ಚು.

ಆದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಪ್ರದೇಶವಾದ ಮೇಲ್ಘಾಟ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರವೀಂದ್ರ ಕೊಯ್ಲೆ ನಿಜಕ್ಕೂ ಅಭಿನಂದನಾರ್ಹರು.

ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪದವಿಗಳನ್ನು ಪಡೆದ ಡಾ. ರವೀಂದ್ರ ಮನಸ್ಸು ಮಾಡಿದ್ದರೆ ನಗರದಲ್ಲಿದ್ದು ಲಕ್ಷಗಟ್ಟಲೇ ದುಡಿಯಬಹುದಿತ್ತು. ಆದರೆ ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಅಪ್ಪಟ ಅಭಿಮಾನಿಯಾದ ಅವರು ವಿದ್ಯಾರ್ಥಿದೆಸೆಯಲ್ಲಿದ್ದಾಗ ಓದಿದ್ದ ರಸ್ಕಿನ್ ಬಾಂಡ್ ರವರ ವಾಕ್ಯಗಳು ಅವರ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದವು. ’ನಿಮಗೆ ನಿಜವಾಗಿಯೂ ಜನಸೇವೆ ಮಾಡಬೇಕೆಂದಿದ್ದರೆ ಮೊದಲು ಅತ್ಯಂತ ಬಡವರಿಗೆ ಹಾಗೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದವವ ನಡುವೆ ಕಾರ್ಯನಿರ್ವಹಿಸಿ’ ಎಂದು ರಸ್ಕಿನ್ ಬಾಂಡ್ ಕರೆಯಿತ್ತಿದ್ದರು. ಆಗ ನಾಗಪುರ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಡಾ. ರವೀಂದ್ರ ಪದವಿ ಪಡೆದ ಬಳಿಕ ವೈದ್ಯಕೀಯ ಸೇವೆ ಅತ್ಯಂತ ದುರ್ಲಭವಾದೆಡೆ ತನ್ನ ಸೇವೆ ಮುಡಿಪು ಎಂದು ಸಂಕಲ್ಪಮಾಡಿಕೊಂಡಿಟ್ಟು ಬಿಟ್ಟಿದ್ದರು.

ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಅವರು ಮಹಾರಾಷ್ಟ್ರ್‍ಅ, ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮಪ್ರದೇಶಗಳಿಗೆ ಭೇಟಿ ನೀಡಿ ಕಡೆಗೆ ಮಹಾರಾಷ್ಟ್ರದ ಗಾದ್ರಿಚೋಲಿ ಎಂಬ ಪ್ರದೇಶದಲ್ಲಿ ತಮ್ಮ ಸೇವೆ ಆರಂಭಿಸಿದರು. ಆದರೆ ಆ ಪ್ರದೇಶದಲ್ಲಿ ನಕ್ಸಲರ ಕಾಟ ಅತಿಯಾಗಿದ್ದು ತನ್ನ ಮಗನ ಕ್ಷೇಮದ ಕಾಳಜಿ ವಹಿಸಿದ ಅವರ ತಾಯಿ ಅಷ್ಟೇ ಹಿಂದುಳಿದ ಪ್ರದೇಶವಾದ ಆದರೆ ಸುರಕ್ಷಿತವಾದ ಮೇಲ್ಘಾಟ್ ಎಂಬಲ್ಲಿ ಅವರ ಸೇವೆ ನೀಡಲು ಆಗ್ರಹಿಸಿದ್ದರು. ತಮ್ಮ ತಾಯಿಯ ಹಿತವಚನಗಳನ್ನು ಶಿರಾವಹಿಸಿದ ಡಾ. ರವೀಂದ್ರ ಮೇಲ್ಘಾಟಿನಲ್ಲಿ ತಮ್ಮ ಸೇವೆ ಆರಂಭಿಸಿದರು.

ಸುಮಾರು ಒಂದೂವರೆ ವರ್ಷ ತನ್ನ ಸೇವೆಯನ್ನು ಅಲ್ಲಿನ ಜನತೆಗೆ ನೀಡಿದ ಡಾ. ರವೀಂದ್ರರಿಗೆ ಅಲ್ಲಿನ ಜನಗಳಿಗೆ ಕೇವಲ ಮಾತ್ರೆ, ಇಂಜೆಕ್ಷನ್ನುಗಳ ವೈದ್ಯಕೀಯ ಸೇವೆ ಮಾತ್ರವಲ್ಲದೇ ಸಾಮಾಜಿಕ ಕಾಳಜಿಯ ಸಾಂತ್ವಾನವೂ ಅವಶ್ಯಕವಿದೆ ಎಂದು ಮನಗಂಡಿತ್ತು. ನಂತರ ನಾಗಪುರಕ್ಕೆ ಹಿಂದಿರುಗಿ ’ರಕ್ಷಣಾತ್ಮಕ ಮತ್ತು ಸಾಮಾಜಿಕ ವೈದ್ಯಶಾಸ್ತ್ರ’ ಎಂಬ ವಿಷಯದಲ್ಲಿ (MD in preventive and social medicine) ಎಂ.ಡಿ. ಪದವಿಯನ್ನು ಪಡೆದು ಮೇಲ್ಘಾಟಿಗೆ ಹಿಂದಿರುಗಿದರು.

ಅಂದಿನಿಂದ ಸತತವಾಗಿ ಹಿಂದುಳಿದ ಜನರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅವರು ಈ ಸೇವೆ ಪ್ರಾರಂಭಿಸಿ ಇಂದಿಗೆ ಇಪ್ಪತ್ತನಾಲ್ಕು ವರ್ಷ ಕಳೆದವು. ಇಂದಿಗೂ ಅವರು ತಮ್ಮ ರೋಗಿಗಳಿಂದ ವಸೂಲು ಮಾಡುವ ಮೊತ್ತ ಮೊದಲನೆಯ ಭೇಟಿಗೆ ಎರೆಡು ರೂ ! ಹಾಗೂ ಮುಂದಿನ ಭೇಟಿಗೆ ಒಂದು ರೂ ! ಆರಂಭಿಕ ದಿನಗಳಲ್ಲಿ ಧರ್ನಿಯಿಂದ ನಲವತ್ತು ಕಿ.ಮೀ. ದೂರವಿರುವ ಬೈರಗಡ ಎಂಬಲ್ಲಿ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದ ಅವರಿಗೆ ದಾರಿಯಲ್ಲಿ ತಿಂಗಳಿಗೆ ಕನಿಷ್ಟ ಒಂದಾದರೂ ಹುಲಿಯ ದರ್ಶನವಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಒಂದೂ ಹುಲಿಯನ್ನು ತಾನು ಕಂಡಿಲ್ಲ ಎಂದು ಡಾ. ರವೀಂದ್ರ ತಿಳಿಸುತ್ತಾರೆ.

ಆ ಪ್ರದೇಶದಲ್ಲಿ ವಾಸವಾಗಿರುವ ಕೋರ್ಕು ಎಂಬ ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ಒಮ್ಮೆ ಕೋರ್ಟು ಮೆಟ್ಟಿಲನ್ನೂ ಹತ್ತಿದ್ದರು.

ಡಾ. ರವೀಂದ್ರರಿಗೆ ಜೈ ಹೋ! ಎನ್ನೋಣವೇ