ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಮಾರ್ಚ್ 25, 2011

ಬಜೆಟ್ ಏರ್‌ಲೈನ್ಸ್-ಕೆಲವು ಮಾಹಿತಿಗಳು


ವಿಮಾನಯಾನ, ಒಂದು ಕಾಲಕ್ಕೆ ಅತಿಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಸಾರಿಗೆ ಸೌಲಭ್ಯ ಇಂದು ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಷ್ಟು ಬೆಳವಣಿಗೆ ಕಂಡಿದೆ. ವಿಮಾನಯಾನದ ಎಲ್ಲಾ ಧನಾತ್ಮಕ ಅಂಶಗಳು ಅತೀವ ದುಬಾರಿ ಸಾರಿಗೆ ವೆಚ್ಚದ ಒಂದು ಋಣಾತ್ಮಕ ಅಂಶದಿಂದ ಜನಸಾಮಾನ್ಯನಿಗೆ ಗಗನಕುಸುಮವೇ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿರುವ ಬಜೆಟ್ ಏರ್‌ಲೈನ್ಸ್ ಅಥವಾ ಕಡಿಮೆಬೆಲೆಯ ವಿಮಾನಯಾನದ ಸೌಲಭ್ಯ ಜನಸಾಮಾನ್ಯನೂ ವಿಮಾನ ಪ್ರಯಾಣದ ಬಗ್ಗೆ ಯೋಚಿಸುವಂತೆ ಮಾಡಿವೆ.


ಬಜೆಟ್ ಏರ್‌ಲೈನ್ಸ್ ಬರುವ ಮುನ್ನ ಲಭ್ಯವಿದ್ದ ಇತರ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳಿಗೆ ವಿಧಿಸುತ್ತಿದ್ದ ಶುಲ್ಕ ದುಬಾರಿಯಾದರೂ ಪ್ರಯಾಣಿಕರ ನಿಬಿಡತೆ ಅವಲಂಭಿಸಿ ದರಗಳಲ್ಲಿ ಏರುಪೇರಾಗುವುದು ಸಹಜ. ಆದರೆ ವರ್ಷದ ಅತಿ ಕಡಿಮೆ ದರ ಇರುವ ಸಮಯದಲ್ಲೂ ಬಜೆಟ್ ಏರ್‌ಲೈನ್ಸ್ ಸರಿಸುಮಾರು ಇವುಗಳ ಅರ್ಧಕ್ಕಿಂತಲೂ ಕಡಿಮೆ ದರಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಇದು ಹೇಗೆ ಸಾಧ್ಯ?

ಬಜೆಟ್ ಏರ್‌ಲೈನ್ಸ್‌ನ ಪರಿಕಲ್ಪನೆ ಹೊಸತೇನಲ್ಲ. ಸರಿಸುಮಾರು ೧೯೪೯ನೆಯ ಇಸವಿಯಲ್ಲಿ ಎರಡನೆಯ ಮಹಾಯುದ್ಧ ಮುಗಿದ ಬಳಿಕ ಸೈನಿಕರು ತಮ್ಮ ತಮ್ಮ ದೇಶಗಳಿಗೆ ಮರಳಲು ಅಮೇರಿಕನ್ ಏರ್‌ಲೈನ್ಸ್ ಮತ್ತು ಪೆಸಿಫಿಕ್ ಸೌಥ್‌ವೆಸ್ಟ್ ಏರ್‌ಲೈನ್ಸ್ ಕಡಿಮೆ ದರದಲ್ಲಿ ತಮ್ಮ ಯಾನಗಳನ್ನು ನಡೆಸಿದ್ದವು. ಅಂದಿನಿಂದಲೂ ಹಲವಾರು ವಿಮಾನ ಸಂಸ್ಥೆಗಳು ಈ ಪರಿಕಲ್ಪನೆಯನ್ನು ತಮ್ಮ ಇಲಾಖೆಗಳಿಗೆ ಅಳವಡಿಸಿಕೊಳ್ಳುತ್ತಲೇ ಬಂದಿವೆ.

ಗಲ್ಫ್ ರಾಷ್ಟ್ರಗಳಲ್ಲಿ ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಸಾಧಿಸಿ ತೋರಿಸಿದ್ದು ಶಾರ್ಜಾದ ಏರ್ ಅರೇಬಿಯಾ ಸಂಸ್ಥೆ. ೨೦೦೩ ಅಕ್ಟೋಬರಿನಲ್ಲಿ ತೊಡಗಿದಾಗ ಶಾರ್ಜಾದಿಂದ ಮುಂಬೈಗೆ ಏಕಮುಖ ಪ್ರಯಾಣಕ್ಕೆ (ಒನ್ ವೇ) ಕೇವಲ ಮುನ್ನೂರು ದಿರ್ಹಾಂ (ತೆರಿಗೆಗಳು ಪ್ರತ್ಯೇಕ)ದ ಮೂಲಬೆಲೆಯೊಂದಿಗೆ ಗ್ರಾಹಕರನ್ನು ಸೆಳೆದಿತ್ತು. ಕ್ಷಿಪ್ರಗತಿಯಲ್ಲಿ ಜಯಪ್ರಿಯತೆಗನ್ನು ಗಳಿಸಿಕೊಂಡ ಈ ಸಂಸ್ಥೆ ಭಾರತದ ಇನ್ನಿತರ ನಗರಗಳಿಗೂ, ಪಾಕಿಸ್ತಾನ, ಈಜಿಪ್ಟ್ ಇನ್ನಿತರ ನೆರೆರಾಷ್ಟ್ರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಇದೇ ಜಾಡಿನಲ್ಲಿ ಭಾರತದ ರಾಷ್ಟ್ರೀಯ ವಾಯುಮಾರ್ಗ ಸಂಸ್ಥೆ ಏರ್ ಇಂಡಿಯಾ ಕೂಡಾ ತನ್ನ ಬಜೆಟ್ ಏರ್‌ಲೈನ್ಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಿ ಜನಪ್ರಿಯವಾಗಿದೆ. ಮೊದಲು ಕೇರಳದಿಂದ ತೊಡಗಿದ ವ್ಯಾಪ್ತಿ ಇಂದು ಇತರ ನಗರಗಳಿಗೂ, ನಮ್ಮ ಮಂಗಳೂರಿಗೂ ವಿಸ್ತರಿಸಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಗಳೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯವಾಗಲು ಸಾಧ್ಯವಾಗಿದ್ದು ಬಜೆಟ್ ಏರ್‌ಲೈನ್ಸ್‌ನ ಪರೋಕ್ಷ ಉಪಕಾರ. ಇಂದು ಕುವೈಟಿನ ಜಜ಼ೀರಾ ಏರ್‌ವೇಸ್, ಪಾಕಿಸ್ತಾನದ ಏರ್ ಏಶಿಯಾ, ಶಾಹೀನ್ ಏರ್‌ವೇಸ್, ಸೌದಿ ಅರೇಬಿಯಾದ ನಾಸ್ ಏರ್ ಮತ್ತು ಸಾಮಾ ಏರ್‌ಲೈನ್ಸ್ ಮೊದಲಾದವು ಕೊಲ್ಲಿ ರಾಷ್ಟ್ರಗಳಿಗೆ ಸೇವೆಯನ್ನು ಒದಗಿಸಿದರೆ ಭಾರತದ ರಾಷ್ಟ್ರೀಯ ಜಾಲದಲ್ಲಿ ಕಿಂಗ್‌ಫ಼ಿಷರ್, ಏರ್ ಡೆಕ್ಕನ್, ಗೋ ಏರ್ ಮೊದಲಾದವು ಜನಪ್ರಿಯಗೊಳ್ಳುತ್ತಿವೆ.

ಬಜೆಟ್ ಏರ್‌ಲೈನ್ಸ್ ದರಗಳು ಅಗ್ಗವೇಕೆ ಎಂದು ತಿಳಿದುಕೊಳ್ಳುವ ಮುನ್ನ ಪೂರ್ಣಪ್ರಮಾಣದ ಏರ್‌ಲೈನ್ಸ್ ದರಗಳು ದುಬಾರಿಯೇಕೆ ಎಂದು ತಿಳಿದುಕೊಳ್ಳುವುದು ಉಚಿತ. ಪ್ರಯಾಣಿಕರು ಪ್ರಯಾಣಿಸುವ ಮಾರ್ಗಗಳ ದಟ್ಟಣೆಯನ್ನು ಅವಲಂಬಿಸಿ ಕಲೆಹಾಕಿದ ಅಂಕಿ ಅಂಶಗಳನ್ನು ಆಧರಿಸಿ ಆಯಾ ಮಾರ್ಗಗಳಿಗೆ ಅನುಗುಣವಾಗಿ ವಿಮಾನಗಳ ವಿಂಗಡಣೆಯಾಗುತ್ತದೆ. ಮುಖ್ಯ ಮಾರ್ಗಗಳಿಗೆ ದೊಡ್ಡ ವಿಮಾನಗಳನ್ನೂ ನಂತರದ ಮಾರ್ಗಗಳಿಗೆ ಚಿಕ್ಕ ವಿಮಾನಗಳನ್ನೂ ಬಳಸಲಾಗುತ್ತದೆ. ಉದಾಹರಣೆಗೆ ಒಬ್ಬ ಪ್ರಯಾಣಿಕ ಲಂಡನ್ನಿನಿಂದ ಮಂಗಳೂರಿಗೆ ಬರಬೇಕಾದರೆ ಲಂಡನ್ನಿನಿಂದ ಮೊದಲು ಮುಂಬೈಗೆ ಬಂದು ನಂತರ ಮಂಗಳೂರಿಗೆ ಬರಬೇಕಾಗುತ್ತದೆ. ಅಂದು ಲಂಡನ್ನಿನಿಂದ ಮುಂಬೈಗೆ ಬರುವವರ ಸಂಖ್ಯೆ ಅಂದಾಜು ಮುನ್ನೂರಿದ್ದರೆ ಮುಂಬೈಯಿಂದ ಮಂಗಳೂರಿಗೆ ಬರುವವರ ಸಂಖ್ಯೆ ಐವತ್ತಿರಬಹುದು, ಇನ್ನೈವತ್ತು ಜನರು ದೆಹಲಿಗೂ, ಮತ್ತೈವತ್ತು ಜನರು ಮದರಾಸಿಗೂ ಹೋಗುವವರಿರಬಹುದು. ಹೀಗೆ ಪ್ರಯಾಣಿಕರ ಸಂಖ್ಯೆ ಮಾರ್ಗದಿಂದ ಮಾರ್ಗಕ್ಕೆ ಅಸಮಾನ ಅನುಪಾತದಲ್ಲಿ ಹಂಚಿಹೋಗುವುದರಿಂದ ಸಂಸ್ಥೆಗೆ ಆಯಾ ಅನುಪಾತಕ್ಕನುಗುಣವಾಗಿ ವಿಮಾನದ ಗಾತ್ರ ಹಾಗೂ ಸಂಖ್ಯೆಗಳನ್ನು ನಿರ್ಧರಿಸಬೇಕಾಗುತ್ತದೆ. ಕೆಲವೆಡೆ ಮುಂದಿನ ಯಾನ ಎರೆಡು ಮೂರು ದಿನ ತಡವಾಗಿಯೂ ಆಗಬಹುದು. ಹಾಗಾಗಿ ಈ ಸಂಸ್ಥೆಗಳಿಗೆ ವಿವಿಧ ಮಾದರಿಯ, ವಿವಿಧ ಸಾಮರ್ಥ್ಯದ ವಿಮಾನಗಳನ್ನೂ, ಅವುಗಳಿಗನುಗುಣವಾಗಿ ಚಾಲಕ ಸಿಬ್ಬಂದಿ (ಪೈಲಟ್), ಇತರ ಸಿಬ್ಬಂದಿ, ವಿಮಾನಗಳ ಬಿಡಿಭಾಗಗಳು, ತಂತ್ರಜ್ಞರು, ತರಬೇತಿ ವೆಚ್ಚ ಇತ್ಯಾದಿಗಳನ್ನು ಭರಿಸಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಪ್ರಯಾಣಿಕರ ಟಿಕೇಟಿನ ಮೇಲೆ ಹೇರಲಾಗುತ್ತದೆ. ಈ ದರದಲ್ಲಿ ಇಂಧನ ಸಹಿತ ಇತರ ಮೂಲದರದ ಹೊರತಾಗಿ ವಿಮಾನದಲ್ಲಿ ಒದಗಿಸಲಾಗುವ ಊಟ, ಪಾನೀಯ, ವೃತ್ತಪತ್ರಿಕೆ, ಮನರಂಜನೆ ಇತ್ಯಾದಿಗಳ ಹೊರತಾಗಿ ತೆರಿಗೆಯೂ ಒಳಗೊಂಡಿರುತ್ತವೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೆ ಆ ನಿರ್ಧಾರಿತ ಯಾನವನ್ನು ರದ್ದುಪಡಿಸುವ ಅಧಿಕಾರ ಸಂಸ್ಥೆಗಿಲ್ಲ. ಏಕೆಂದರೆ ಪ್ರತಿ ನಿರ್ಧಾರಿತ ಯಾನವೂ ಏರ್ ಟ್ರಾಫ಼ಿಕ್ ಕಂಟ್ರೋಲ್‌ನವರು ನಿರ್ಧರಿಸಿದಂತೆಯೇ ನಡೆದುಕೊಳ್ಳಬೇಕಾಗುತ್ತದೆ. ಯಾವ ವಿಮಾನ, ಎಷ್ಟು ಎತ್ತರದಲ್ಲಿ, ಯಾವ ಅಕ್ಷಾಂಶ ರೇಖಾಂಶಗಳನ್ನು ದಾಟಿ ಬರಬೇಕೆಂದು ಏಟಿಸಿ ನಿರ್ಧರಿಸುತ್ತದೆಯೇ ಹೊರತು ವಿಮಾನ ಸಂಸ್ಥೆ ನಮ್ಮ ಪ್ರೈವೇಟ್ ಬಸ್ಸುಗಳ ತರಹ ’ಬಸ್ಸು ಫ಼ುಲ್ಲಾದ ಮೇಲೆ’ ಹೊರಡುವಂತಿಲ್ಲ. ಇಡೀ ವಿಮಾನದಲ್ಲಿ ಕೆಲವೇ ಪ್ರಯಾಣಿಕರಿದ್ದರೂ ಅದು ತನ್ನ ನಿಯಮಿತ ಹಾರಾಟವನ್ನು ನಡೆಸಲೇಬೇಕು. ಏಟಿಸಿ ತೆಗೆದುಕೊಳ್ಳುವ ನಿರ್ಧಾರ ಕೊಂಚ ಏರುಪೇರಾದರೂ ಆಗಬಹುದಾದ ಅನಾಹುತ ಊಹಿಸಲಸಾಧ್ಯ. (ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ದೆಹಲಿಯ ಸಮೀಪ ಚಾಕಿ ದಾದ್ರಿ ಎಂಬ ಗ್ರಾಮದ ಆಕಾಶದಲ್ಲಿ ಸೌದಿ ಏರ್‌ಲೈನ್ಸ್ ಮತ್ತು ಕಜ಼ಾಕಿಸ್ತಾನ್ ಕಾರ್ಗೋ ವಿಮಾನಗಳ ಢಿಕ್ಕಿಯಾಗಿ ಹಲವಾರು ಮಂದಿ ಸತ್ತ ದುರಂತ ನೆನೆಪಿರಬಹುದು) ಹಾಗಾಗಿಯೇ ಇಂದೂ ನಮಗೆ ವಿಮಾನಗಳ ಉಡಾವಣಾ ಸಮಯ ಮಧ್ಯರಾತ್ರಿ, ಅಪರಾತ್ರಿಗಳಲ್ಲಿ ಲಭ್ಯವಿರುವುದು. ಹಾಗಾಗಿ ಖಾಲಿ ಸೀಟುಗಳಿಂದ ಬರದ ವೆಚ್ಚವನ್ನು ಅನಿವಾರ್ಯವಾಗಿ ಆದಾಯ ಬರುವ ಇತರ ಮಾರ್ಗಗಳ ಮೇಲೆ ಹೇರಬೇಕಾಗುತ್ತದೆ. ಅಂತೆಯೇ ಎಲ್ಲಾ ವೆಚ್ಚಗಳನ್ನೊಳಗೊಂಡ ದರ ದುಬಾರಿಯೇ ಆಗಿರುತ್ತದೆ.

ಈಗ ಬಜೆಟ್ ಏರ್‌ಲೈನ್ಸ್‌ನ ದರಗಳೇಕೆ ಕಡಿಮೆಯೆಂದು ನೊಡೋಣ.

ಮೊದಲೆನೆಯದಾಗಿ: ಈ ಸಂಸ್ಥೆಗಳು ಮೊದಲು ಅತಿನಿಬಿಡ ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಅಂದರೆ ಪ್ರತಿ ಮಾರ್ಗದಲ್ಲೂ ಹೋಗಿ ಬರುವ ಎರೆಡೂ ಕಡೆಗಳಿಂದ ಇಡೀ ವಿಮಾನ ಭರ್ತಿಯಾಗುವಷ್ಟು ಪ್ರಯಾಣಿಕರಿರಬೇಕು, ಆ ಸಮಯದಲ್ಲಿ ಬೇರೆ ವಿಮಾನಸಂಸ್ಥೆಗಳ ಯಾನವಿರಬಾರದು, ಇಂತಹ ಮಾರ್ಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದ ಖಾಲಿ ಸೀಟುಗಳ ಲೆಕ್ಕಾಚಾರ ಕಳೆದು ಲಾಭ ಎಲ್ಲಾ ಪ್ರಯಾಣಿಕರಲ್ಲಿ ಹಂಚಿಹೋಗುತ್ತದೆ.

ಎರಡನೆಯದಾಗಿ: ಈ ಸಂಸ್ಥೆ ಆಯ್ಕೆ ಮಾಡಿಕೊಳ್ಳುವ ವಿಮಾನದ ಮಾದರಿ ಒಂದೇ ಆಗಿರುತ್ತದೆ. ಹಾಗಾಗಿ ಆ ವಿಮಾನದ ನಿರ್ವಹಣೆಗಾಗಿ ತಗಲುವ ವೆಚ್ಚ, ಪೈಲಟ್‌ಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ ನೀಡಬೇಕಾದ ತರಬೇತಿ, ಬಿಡಿಭಾಗಳು, ತಂತ್ರಜ್ಞರು ಈ ಎಲ್ಲವನ್ನೂ ಆ ಮಾದರಿಯ ವಿಮಾನಕ್ಕೆ ಸೀಮಿತಗೊಳಿಸಿದರೆ ಸಾಕಾಗುತ್ತದೆ. ವಿಮಾನದ ಬಿಡಿಭಾಗಳೂ, ಹೊಸವಿಮಾನ, ಇನ್ನಿತರ ವಸ್ತುಗಳನ್ನು ಹೆಚ್ಚುವರಿಯಾಗಿ (ಹೋಲ್ ಸೇಲ್) ಕೊಂಡುಕೊಳ್ಳುವುದರಿಂದ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ. ಒಂದೇ ಮಾದರಿಯ ವಿಮಾನಗಳನ್ನು ಅಗತ್ಯವಿದ್ದಷ್ಟು ಮಾತ್ರ ಖರೀದಿಸುವುದರಿಂದ ಕಡಿಮೆ ಮೂಲಧನ ಹಾಗೂ ಅದರ ಮೇಲೆ ನಿರ್ಧಾರವಾಗುವ ಸಾಲ ಹಾಗೂ ಬಡ್ಡಿ ಕೂಡಾ ಕಡಿಮೆಯಾಗುತ್ತದೆ. ಕೇವಲ ಜನನಿಬಿಡ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದಲೂ, ಪ್ರತಿ ವಿಮಾನವೂ ತನ್ನ ಪೂರ್ಣಸಾಮರ್ಥ್ಯದ ಪ್ರಯಾಣಿಕರನ್ನು ಒಯ್ಯುವುದರಿಂದಲೂ ಪ್ರತಿ ಪ್ರಯಾಣಿಕನ ಮೇಲೆ ಬೀಳುವ ಖರ್ಚು ಹಂಚಿ ಹೋಗುತ್ತದೆ.

ಮೂರನೆಯದಾಗಿ: ಸರಳಗೊಳಿಸಿದ ಸೌಲಭ್ಯಗಳು: ಪ್ರತಿ ವಿಮಾನಯಾನದಲ್ಲಿ ಒದಗಿಸಿದ ಆಹಾರಕ್ಕೆ ತಕ್ಕ ವೆಚ್ಚವನ್ನು ಪ್ರಯಾಣಿಕರ ಟಿಕೇಟ್ ದರ ಒಳಗೊಂಡಿರುತ್ತದೆ. ಊಟ ಬೇಡ, ಅದರ ಹಣ ಟಿಕೇಟಿನಲ್ಲಿ ಕಟ್ ಮಾಡಿಕೊಳ್ಳಿ ಎಂದು ಹೇಳುವ ಹಾಗಿಲ್ಲ. ಅದೇ ಬಜೆಟ್ ಏರ್‌ಲೈನ್ಸ್‌ನಲ್ಲಿ ಆಹಾರ ವ್ಯವಸ್ಥೆ ಟಿಕೇಟಿನ ದರದಲ್ಲಿ ಮಿಳಿತಗೊಳಿಸಿಲ್ಲ. ಆದರೆ ಪ್ರಯಾಣಿಕರಿಗೆ ಬೇಕಾದ ಆಹಾರ ಪದಾರ್ಥಗಳನ್ನು ಹಣ ಕೊಟ್ಟು ಖರೀದಿಸುವ ಅವಕಾಶ ಕಲ್ಪಸಲಾಗಿದೆ. ಬೇಕಿದ್ದವರು ಏನು ಬೇಕೋ ಅದನ್ನು ಹಣ ಕೊಟ್ಟು ಕೊಂಡುಕೊಳ್ಳಬಹುದು. ನೆಲದ ಮೇಲೆ ಸಿಗುವ ಬೆಲೆಗಿಂತ ತುಸುವೇ ದುಬಾರಿಯಾದ ಬೆಲೆಯಲ್ಲಿ ಉತ್ತಮ ಆಹಾರ ಲಭ್ಯ. ಹೀಗೆ ಪ್ರಯಾಣಿಕರು ಕೊಂಡ ವಸ್ತುಗಳಿಂದ ಬಂದ ಲಾಭ ಸಂಸ್ಥೆಗೆ ಪರೋಕ್ಷ ಆದಾಯ.

ನಾಲ್ಕನೆಯದಾಗಿ: ವಜಾಮಾಡಿದ ಮಧ್ಯಂತರ ವ್ಯವಸ್ಥೆ: ಈ ಶತಮಾನದ ಅದ್ಭುತ ಕೊಡುಗೆಗಳಲ್ಲೊಂದಾದ ಇಂಟರ್ನೆಟ್ ಮುಖಾಂತರ ಪ್ರಯಾಣಿಕರು ತಮ್ಮ ಪ್ರಯಾಣವನ್ನು ತಾವೇ ನಿರ್ಧರಿಸಿ ತಮ್ಮ ಕ್ರೆಡಿಟ್ ಕಾರ್ಡುಗಳ ಮುಖಾಂತರ ಪಾವತಿಸುವ ಸೌಲಭ್ಯದಿಂದ ಮಧ್ಯೆ ಬರುವ ಏಜೆಂಟರ ಪಾತ್ರ ಇಲ್ಲವೇ ಇಲ್ಲ. ಹಾಗಾಗಿ ಏಜೆಂಟರಿಗೆ ನೀಡಬೇಕಾದ ಪ್ರತಿ ಟಿಕೇಟಿನ ಮೇಲಿನ ಕಮೀಶನ್ ಪ್ರಯಾಣಿಕರಿಗೆ ಉಳಿತಾಯ. ಸಂಸ್ಥೆಗಳೂ ತಮ್ಮ ಜಾಹೀರಾತಿನಲ್ಲಿ ನಿಮ್ಮ ಟಿಕೇಟನ್ನು ನೀವೇ ಪ್ರತಿ ತೆಗೆದುಕೊಳ್ಳುವುದರಿಂದ ಕಾಗದದ ಉಳಿತಾಯ ಎಂದು ಸ್ಪಷ್ಟವಾಗಿ ಪ್ರಚಾರ ಮಾಡಿರುತ್ತಾರೆ. ಒಂದು ಕಾಗದದ ಚೂರಿನಿಂದ ಏನು ಮಹಾ ಉಳಿತಾಯವಾಗಬಹುದು ಎಂದು ಅಸಡ್ಡೆಯಿಂದ ಈ ವಿಷಯ ತೆಗೆದುಹಾಕುವಹಾಗಿಲ್ಲ. ಏಕೆಂದರೆ ಏಜೆಂಟರು ನಮಗೆ ಕೊಡುವ ಸುಂದರ ಟಿಕೇಟಿಗೆ ಬಳಸಲಾದ ವಿಶೇಷ ಕಾಗದ ಕಾರ್ಬನ್ ಕೋಟಿಂಗ್ ಸಹಿತ ಮುದ್ರಿತವಾಗಿರುತ್ತದೆ. ಅದೂ ಅಲ್ಲದೆ ಈ ಟಿಕೇಟಿನ ಮೇಲೆ ಪ್ರಯಾಣಿಕರ ವಿವರಗಳನ್ನು ತುಂಬಲು ವಿಶೇಷ ಪ್ರಿಂಟರುಗಳು ಬೇಕಾಗುತ್ತವೆ. ಹಾಗಾಗಿ ಈ ಕಾಗದದ ಬೆಲೆ ನಾವು ಇ-ಟಿಕೆಟ್ ಕೊಂಡ ಮೇಲೆ ಮುದ್ರಿಸಲು ಬೇಕಾಗುವ ಅರ್ಧ ಹಾಳೆಯ ಬೆಲೆಗಿಂತಲೂ ನಾನ್ನೂರು ಐನೂರು ಪಟ್ಟು ಹೆಚ್ಚಾಗಿರುತ್ತದೆ.

ಐದನೆಯದಾಗಿ: ಏಕಪ್ರಕಾರ ಆಸನ ವ್ಯವಸ್ಥೆ: ಇತರ ವಿಮಾನಗಳಲ್ಲಿ ಆಸನಗಳು ಮೊದಲ, ಬಿಸಿನೆಸ್ ಮತ್ತು ಎಕಾನಮಿ ಕ್ಲಾಸ್ ಎಂದು ವಿಂಗಡಣೆಯಾಗಿರುತ್ತವೆ. ಅದಕ್ಕನುಗುಣವಾಗಿ ಸೌಲಭ್ಯಗಳಲ್ಲೂ, ಟಿಕೇಟಿನ ಬೆಲೆಗಳಲ್ಲೂ ವ್ಯತ್ಯಾಸವಿರುತ್ತದೆ. ಬಜೆಟ್ ಏರ್‌ಲೈನ್ಸ್‌ಗಳಲ್ಲಿ ಈ ತಾರತಮ್ಯವಿಲ್ಲ. ಪೈಲಟಿನ ಹಿಂಬದಿಯ ಸೀಟು ಹಿಡಿದು ವಿಮಾನದ ಕಟ್ಟಕಡೆಯ ಆಸನದವರೆಗೂ ಒಂದೇ - ಎಕಾನಮಿ ಕ್ಲಾಸ್. ಇದರಿಂದಾಗಿ ಏಕಪ್ರಕಾರ ದರವನ್ನು ಹೆಚ್ಚಿನ ಪ್ರಯಾಣಿಕರ ಮೇಲೆ ಹೇರಲು ಅನುಕೂಲವಾಗುತ್ತದೆ.

ಆರನೆಯದಾಗಿ: ನಾನ್ ಸ್ಟಾಪ್ ಆಪರೇಶನ್ (ನಿಲುಗಡೆರಹಿತ ನಿರ್ವಹಣೆ): ನಾನ್‌ಸ್ಟಾಪ್ ಉಡುಪಿ, ನಾನ್‌ಸ್ಟಾಪ್ ಉಡುಪಿ, ನೆನಪಿಗೆ ಬಂತೇ? ಇಲ್ಲಿ ಆ ತರಹದ ನಾನ್ ಸ್ಟಾಪ್ ಅನ್ವಯವಾಗುವುದಿಲ್ಲ. ಯಾವುದೇ ವಿಮಾನಕ್ಕೂ ವಿಮಾನ ನಿಲ್ದಾಣದ ನಿಲುಗಡೆಯಲ್ಲಿ ನಿಲ್ದಾಣಶುಲ್ಕವಿರುತ್ತದೆ. ಅದು ನಿಂತ ಅವಧಿಗೆ ಅನುಸಾರವಾಗಿ ಶುಲ್ಕವೂ ನಿರ್ಧಾರವಾಗುತ್ತದೆ. ಉದಾಹರಣೆಗೆ ಒಂದು ವಿಮಾನ ಇಂದು ಲಂಡನ್ನಿನಿಂದ ಮುಂಬೈಗೆ ಬಂದು ನಾಳೆ ವಾಪಾಸು ಹೋಗುವುದಿದ್ದರೆ ಸಂಸ್ಥೆ ಆ ವಿಮಾನದ ಪ್ರತಿ ಸಿಬ್ಬಂದಿಗೂ ಪಂಚತಾರಾ ಹೋಟೆಲ್ ಅಥವಾ ತನ್ನ ಸ್ವಂತ ಗೆಸ್ಟ್ ಹೌಸ್ ನಲ್ಲಿ ವಸತಿ ಊಟ ಕಲ್ಪಿಸಿಕೊಡಬೇಕಾಗುತ್ತದೆ. ಅಂತೆಯೇ ಪ್ರಯಾಣಿಕರ ಮರುಪ್ರಯಾಣದ ಅಂತರ ಹೆಚ್ಚಾಗಿದ್ದರೆ ಅವರಿಗೂ ಹೋಟೆಲ್, ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಈ ಎಲ್ಲಾ ಖರ್ಚುಗಳು ಇತರ ಪ್ರಯಾಣಿಕರ ಟಿಕೇಟಿಗೆ ವರ್ಗಾವಣೆಯಾಗುತ್ತವೆ. ಬಜೆಟ್ ಏರ್‌ಲೈನ್ಸ್‌ನಲ್ಲಿ ಒಂದು ವಿಮಾನ ಒಂದು ನಿಲ್ದಾಣದಲ್ಲಿಳಿದ ಮೇಲೆ ಅಲ್ಲೇ ಉಳಿಯುವ ಮಾತಿಲ್ಲ. ಅದೇ ಪೈಲಟ್, ಅದೇ ಸಿಬ್ಬಂದಿ ಅಲ್ಪವಿರಾಮದ ಬಳಿಕ ಹಿಂದಿರುಗಿ ತಮ್ಮ ಮೂಲ ಸ್ಥಾನಕ್ಕೆ ಹಾರಾಟ ನಡೆಸುತ್ತದೆ. ಹಾಗಾಗಿ ವಸತಿ ಖರ್ಚುಗಳಿಗೆ ಟಾಟಾ.

ಏಳನೆಯದು: ಕಡಿಮೆಗೊಳಿಸಿದ ಲಗೇಜ್: ಇತರ ವಿಮಾನಗಳಲ್ಲಿ ಭಾರತಕ್ಕೆ ಹೋಗುವ ಯಾನಗಳಲ್ಲಿ ಸುಮಾರು ನಲವತ್ತು ಪ್ಲಸ್ ಹ್ಯಾಂಡ್ ಕ್ಯಾರಿ ಹತ್ತು ಒಟ್ಟು ಐವತ್ತು ಕೇಜಿ ಒಯ್ಯಬಹುದಾದರೆ ಹಿಂತಿರುಗಿ ಬರುವಾಗ ಬರೆಯ ಇಪ್ಪತ್ತು ಕೇಜಿ. ಏಕೆಂದರೆ ಭಾರತದಿಂದ ರಫ಼್ತಾಗುವ ವಸ್ತುಗಳು ಲಗೇಜ್ ಸ್ಥಳವನ್ನು ಆಕ್ರಮಿಸಿಕೊಂಡು ಬಿಟ್ಟಿರುತ್ತವೆ. ಇದನ್ನು ಪ್ರಯಾಣಿಕರ ಪಾಲಿಗೆ ಖೋತಾ ಮಾಡುತ್ತಾರೆ. ಬಜೆಟ್ ಏರ್‌ಲೈನ್ಸ್‌ನಲ್ಲಿ ಲಗೇಜ್ ಕಡಿಮೆಮಾಡಲು ಕಾರಣ ಇಡಿಯ ವಿಮಾನಕ್ಕೆ ತಗಲುವ ಪೇ ಲೋಡ್. ವಿಮಾನದ ಇಡಿಯ ಭಾರದ ಮೇಲೆ ಇಂಧನದ ಖರ್ಚು ನಿರ್ಧಾರವಾಗುವುದರಿಂದ ಲಗೇಜು ಕಡಿತಗೊಳಿಸಿ ಪೇ ಲೋಡ್ ಕಡಿಮೆ ಮಾಡಲಾಗುತ್ತದೆ.

ಎಲ್ಲಾ ರೀತಿಯಲ್ಲಿ ಅನುಕೂಲಕರವೆಂದು ಕಂಡುಬರುವ ಬಜೆಟ್ ಏರಲೈನ್ಸಿನಲ್ಲಿಯೂ ಕೆಲವು ಅನಾನುಕೂಲತೆಗಳಿವೆ. ಮುಖ್ಯವಾಗಿ ಪ್ರಯಾಣಿಕರಿಗೆ ತಾವು ಹೋಗಬೇಕಾದ ಮಾರ್ಗದ ಟಿಕೇಟನ್ನು ಒಮ್ಮೆ ಕೊಂಡರೆ ನಂತರ ದಿನಾಂಕ
ಬದಲಿಸಬೇಕಾದಲ್ಲಿ ದುಬಾರಿ ವೆಚ್ಚ ನೀಡಬೇಕಾಗುತ್ತದೆ. ಅದೂ ಸಂಸ್ಥೆ ನಿಯಮಿಸಿದ ನಿಗದಿತ ಏಜೆಂಟುಗಳಲ್ಲಿ ಮಾತ್ರ ಸಾಧ್ಯ. ಏಜೆಂಟು ಹತ್ತಿರವಿದ್ದರೆ ಸರಿ, ಇಲ್ಲದಿದ್ದರೆ ಅವರಿದ್ದಲ್ಲಿ ಹೋಗಿ ಕೆಲಸ ಸಾಧಿಸಲು ಸಮಯ ಮತ್ತು ಹಣ ಹೆಚ್ಚಾಗಿಯೇ ಖರ್ಚಾಗುತ್ತದೆ. ಏಕೆಂದರೆ ಇಂಟರ್ನೆಟ್ ಮುಖಾಂತರ ಖರೀದಿಸಿದ ಟಿಕೇಟುಗಳನ್ನು ಸಂಸ್ಥೆ ಖಚಿತವೆಂದೇ ಪರಿಗಣಿಸುತ್ತದೆ. ಪ್ರಯಾಣದ ದಿನಾಂಕದ ಹಿಂದಿನ ಇಪ್ಪತ್ತನಾಲ್ಕು ಘಂಟೆಗಳ ವರೆಗೂ ಟಿಕೇಟ್ ರದ್ದುಪಡಿಸುವ ಸೌಲಭ್ಯವಿರುತ್ತದೆ. ದಿನಾಂಕ ಮುಂದುವರಿಸುವುದಕ್ಕಾಗಲೀ ರದ್ದುಪಡಿಸುವುದಕ್ಕಾಗಲೀ ಪ್ರತ್ಯೆಕ ವೆಚ್ಚವಿದೆ. ಬೇರೆ ಪ್ರಯಾಣಿಕರಿಗೆ ವರ್ಗಾವಣೆ ಸಾಧ್ಯವಿದ್ದರೂ ಅದಕ್ಕೂ ತಕ್ಕ ಶುಲ್ಕವಿದೆ. ಶುಲ್ಕವೂ ಕೊಂಚ ದುಬಾರಿಯೇ. ಹಾಗಾಗಿ ತನ್ನ ಪ್ರಯಾಣದ ದಿನಾಂಕಗಳ ಖಚಿತ
ಕಾರ್ಯಕ್ರಮವಿರುವವರಿಗೆ ಮಾತ್ರ ಇದು ಉತ್ತಮ. ಯಾವುದೇ ಕಾರಣಗಳಿಂದಾಗಿ ದಿನಾಂಕ ಬದಲಿಸಬೇಕಾದರೆ ತಕ್ಕ ದಂಡವನ್ನು ತೆರಬೇಕಾಗುತ್ತದೆ. ಅದೇ ಪೂರ್ಣಪ್ರಮಾಣದ ಏರ್ ಲೈನುಗಳಲ್ಲಿ ರೀಕನ್ಫರ್ಮ್(ಮರುಧೃಢೀಕರಣ) ಮಾಡಬೇಕೆಂಬ ವಿಧಿಯಿರುತ್ತದೆ. ತಾವು ಹಿಂತಿರುಗುವ ದಿನಾಂಕವನ್ನು ಬೇಕಿದ್ದರೆ ಯಾವುದೇ ಏಜೆಂಟರಲ್ಲಿ ಹೋಗಿ ಹೆಚ್ಚಿನ ಬೆಲೆ ಕೊಡದೇ ಬದಲಿಸಕೊಳ್ಳಬಹುದು ಅಥವಾ ಫ಼ೋನ್ ಮುಖಾಂತರ ತನ್ನ ಪ್ರಯಾಣದ ದಿನಾಂಕವನ್ನು ಸ್ಪಷ್ಟಪಡಿಸಬಹುದು.
ಬಜೆಟ್ ಏರ್‌ಲೈನ್ಸ್ ಸಂಸ್ಥೆಗಳು ಕೇವಲ ಜನನಿಬಿಡ ಮಾರ್ಗಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದರಿಂದ ಅಲ್ಲಿಂದ ಮುಂದೆ ಪ್ರಯಾಣಿಸುವವರು ಇತರ ಡೊಮೆಸ್ಟಿಕ್ ಅಥವಾ ಸ್ಥಳೀಯ ವಿಮಾನಯಾನವನ್ನು ಅವಲಂಬಿಸಬೇಕಾಗುತ್ತದೆ. ಈ ಪ್ರಯಾಣಕ್ಕೆ ತಗಲುವ ವೆಚ್ಚ ಹೆಚ್ಚಾಗಿರಬಹುದು. ಅದರ ಬದಲಿಗೆ ಮೂಲ ಸ್ಥಾನದಿಂದ ಕೊನೆಯ ನಿಲ್ದಾಣದವರೆಗೂ ಒಂದೇ ಸಂಸ್ಥೆಯ ಟಿಕೇಟನ್ನು ಕೊಂಡರೆ ಮಾರ್ಗಮಧ್ಯೆ ವಿಮಾನ ಬದಲಿಸಿ ಮುಂದುವರೆಯುವಾಗ ಹೆಚ್ಚಿನ ಬೆಲೆ ವ್ಯತ್ಯಾಸವಿಲ್ಲದೆ ಗುರಿ ತಲುಪಬಹುದು. ಇದರ ಒಟ್ಟು ಮೌಲ್ಯ ಬಜೆಟ್ ಏರ್ ಲೈನ್ಸ್ ಮುಖಾಂತರ ಬಂದು ಮಾರ್ಗಮಧ್ಯೆ ಬೇರೆ ವಿಮಾನದ ಮುಖಾಂತರ ಮುಂದುವರೆದು ಗುರಿ ತಲುಪಿದಾಗ ತಗಲುವ ವೆಚ್ಚಕ್ಕಿಂತ ಕಡಿಮೆ ಇರಬಹುದು. ಇದಕ್ಕೆ ಮುಖ್ಯ ಕಾರಣ ತೆರಿಗೆ. ತೆರಿಗೆ ಪ್ರತಿ ಪ್ರಯಾಣದ ಪ್ರತಿ ಸೀಟಿಗೆ ಎಂದು ನಿಗದಿಪಡಿಸಿರುವುದರಿಂದ ಹಾಗೂ ಬಜೆಟ್ ಏರ್‌ಲೈನ್ಸ್ ಮತ್ತು ಬೇರೆ ಏರ್‌ಲೈನ್ಸಿನ ವಿಮಾನಕ್ಕೆ ಎರೆಡೆರೆಡು ಟಿಕೇಟುಗಳನ್ನು ಕೊಳ್ಳಬೇಕಾಗುವುದರಿಂದ ಎರೆಡು ತೆರಿಗೆ ಕಟ್ಟಬೇಕಾಗುತ್ತದೆ. ಅದೇ ಪೂರ್ಣಪ್ರಮಾಣದ ವಿಮಾನಗಳಲ್ಲಿ ಒಂದೇ ಟಿಕೇಟಿನಲ್ಲಿ ಮೂಲಪ್ರಯಾಣ, ಅದರ ಮುಂದಿನ ಪ್ರಯಾಣ, ಅದರ ಮುಂದಿನ ಪ್ರಯಾಣ ಎಲ್ಲವೂ ಒಂದೇ ಟಿಕೇಟಿನಲ್ಲಿದ್ದು ಪ್ರತಿ ಪ್ರಯಾಣಕ್ಕೂ ಒಂದೊಂದು ಕಾರ್ಬನ್ ಪ್ರತಿಯಿರುವುದರಿಂದ ಇಡಿಯ ಪ್ರಯಾಣಕ್ಕೆ ಒಂದೇ ಬಾರಿ ತೆರಿಗೆ ಕಟ್ಟಿದರೆ ಸಾಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಜೆಟ್ ಏರ್‌ಲೈನ್ಸ್ ಉಚಿತವಾಗುವುದಿಲ್ಲ.
ಬೆಲೆ ಕಡಿಮೆ ಎಂದು ಪ್ರಚಾರ ಪಡಿಸುವ ಈ ಸಂಸ್ಥೆಗಳು ಹೆಚ್ಚು ಜನರು ಆಯ್ಕೆಮಾಡಿಕೊಳ್ಳುವ ದಿನಗಳಂದು ಹೆಚ್ಚಿನ ಬೆಲೆ ವಿಧಿಸುತ್ತವೆ. ಉದಾಹರಣೆಗೆ ರಜೆಯ ಸಮಯದಲ್ಲಿ ಹೆಚ್ಚಿನ ಜನರು ಊರಿಗೆ ಹೋಗುವವರಿದ್ದಾಗ ಈ ಬಜೆಟ್ ಏರ್‌ಲೈನ್ಸ್ ವಿಧಿಸುವ ದರಕ್ಕೂ ಪೂರ್ಣಪ್ರಮಾಣದ ವಿಮಾನದರಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಅದೂ ಅಲ್ಲದೆ ಇಂಟರ್ನೆಟ್ ನಲ್ಲಿ ಈ ಸಂಸ್ಥೆಗಳು ನಿಗದಿಪಡಿಸುವ ಒಂದು ಮಾರ್ಗದ ದರ ನಿಮಿಷ ನಿಮಿಷಕ್ಕೂ ಬದಲಾಗುತ್ತಾ ಇರುತ್ತದೆ. ಈ ಸೌಲಭ್ಯ ಪಡೆಯಬಯಸುವವರು ಪ್ರತಿದಿನ ಬೆಲೆಗಳನ್ನು ತುಲನೆ ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ. ಕೆಲವಾರು ದಿನಗಳಲ್ಲಿ ಯಾವ ದಿನಗಳಂದು ಬೆಲೆ ಕಡಿಮೆಯಿರುತ್ತದೆ ಎಂಬ ಅಂದಾಜು ಸಿಗುತ್ತದೆ. ಹಾಗಾಗಿ ಉತ್ತಮ ಬೆಲೆಗಳು ಇಂಟರ್ನೆಟ್ ಸತತವಾಗಿ ಬಳಸುತ್ತಿರುವವರಿಗೆ ಮಾತ್ರ ಲಭ್ಯವಾಗುತ್ತವೆ. ಹಾಗಾಗಿ ಒಂದೇ ವಿಮಾನದಲ್ಲಿ ಬೇರೆಬೇರೆ ಬೆಲೆಯ ಟಿಕೇಟ್ ಕೊಂಡವರು ಪ್ರಯಾಣಿಸುತ್ತಿರುತ್ತಾರೆ. ರಜೆಯ ಸಮಯದಲ್ಲಿ ಬೆಲೆ ವಿಪರೀತ ಏರಿ ಇತರ ವಿಮಾನದರಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲದಂತಾದಾಗ ಗೊಂದಲಗೊಂಡ ಶ್ರೀಸಾಮಾನ್ಯ ’ಇದೆಂತಹಾ ಬಜೆಟ್ ಏರ್ ಲೈನ್ಸ್’ ಎಂದು ಪ್ರಶ್ನಿಸುವಂತಾಗುತ್ತದೆ.

ಒಟ್ಟಾರೆ ಬಜೆಟ್ ಏರ್‌ಲೈನ್ಸ್ ಮಧ್ಯಮವರ್ಗದವರಿಗೆ ಒಂದು ವರವಾಗಿ ಪರಿಣಮಿಸಿರುವುದರಲ್ಲಿ ಎರೆಡು ಮಾತಿಲ್ಲ. ಈ ಅನಾನುಕೂಲತೆಗಳು ಬರುವ ದಿನಗಳಲ್ಲಿ ಬಜೆಟ್ ಏರ್‌ಲೈನ್ಸ್ ತನ್ನ ವ್ಯಾಪ್ತಿ ಹೆಚ್ಚಿಸುವುದರ ಮೂಲಕ ಹಾಗೂ ಇನ್ನೂ ಉತ್ತಮ ಸೇವೆ ಒದಗಿಸುವ ಮೂಲಕ ಕೊನೆಗಾಣಿಸಬಹುದೇನೋ, ಕಾದು ನೋಡಬೇಕು. 

ಶುಕ್ರವಾರ, ಮಾರ್ಚ್ 11, 2011

ಬೆಂಗಳೂರು: ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಲೋಕಾರ್ಪಣೆ- ಅಧ್ಯಕ್ಷತೆ ವಹಿಸಿದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ


ಮುನ್ನುಡಿ ಬರೆದ ಡಾ. ನಾ ಸೋಮೇಶ್ವರ, ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಉಪಸ್ಥಿತಿ














ಬೆಂಗಳೂರು, ಮಾರ್ಚ್ 8: ಅನಿವಾಸಿ ಕನ್ನಡಿಗ ಶ್ರೀ ಅರ್ಶದ್ ಹುಸೇನ್ ಅವರು ಬರೆದಿರುವ ವಿಸ್ಮಯ ಪ್ಲಸ್ ಕೃತಿ ಕಳೆದ ಮಾರ್ಚ್ ರ ಸೋಮವಾರ ಸಂಜೆ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಿಲಾಯೆನ್ಸ್ ಟೈಮ್ ಔಟ್ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆಗೊಂಡಿತು.