ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಸೆಪ್ಟೆಂಬರ್ 14, 2012

ಭವಿಷ್ಯದ ಗಾಳಿಯಂತ್ರ - ವಿದ್ಯುತ್ ಕೊರತೆಗೆ ನೂತನ ಮಂತ್ರ

ಭವಿಷ್ಯದ ಗಾಳಿಯಂತ್ರ - ವಿದ್ಯುತ್ ಕೊರತೆಗೆ ನೂತನ ಮಂತ್ರ

-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.

ಚಿತ್ರದುರ್ಗ ಎಂದಾಕ್ಷಣ ನಮ್ಮೆಲ್ಲರ ಮನದಲ್ಲಿ ಮೂಡಿಬರುವುದು ಚಿತ್ರದುರ್ಗದ ಕಲ್ಲಿನ ಕೋಟೆ, ಒನಕೆ ಓಬವ್ವ, ಡಾ. ವಿಷ್ಣುವರ್ಧನರ ಮೊದಲ ಚಿತ್ರ ನಾಗರಹಾವು ಮೊದಲಾದವು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗಕ್ಕೆ ಭೇಟಿನೀಡಿದವರಿಗೆ ಚಿತ್ರದುರ್ಗದ ಬೆಟ್ಟಗಳ ಮೇಲೆ ಸ್ಥಾಪಿಸಿರುವ ಬೃಹತ್ ಗಾಳಿಯಂತ್ರಗಳು ಕಲ್ಲಿನ ಕೋಟೆ ಗೋಚರಿಸುವ ಮೊದಲೇ ತಮ್ಮ ದರ್ಶನ ನೀಡುತ್ತವೆ.

ಏನೀ ಗಾಳಿಯಂತ್ರಗಳು? ನಾಗರಿಕತೆ ಬೆಳೆಯುತ್ತಿದ್ದಂತೆ ಪ್ರಸ್ತುತದಿನದ ಅಗತ್ಯವಾದ ವಿದ್ಯುತ್ತಿಗೂ ಬೇಡಿಕೆ ಹೆಚ್ಚುತ್ತಿದೆ. ಅಣೆಕಟ್ಟುಗಳ ಮುಖಾಂತರ ಹರಿಯುವ ನದಿಗೆ ತಡೆಯೊಡ್ಡಿ ವಿದ್ಯುತ್ ಉತ್ಪಾದಿಸುವ ಮಾರ್ಗ ಬಹುತೇಕ ದುಬಾರಿಯೂ ಕಷ್ಟಕರವೂ ಆಗಿದೆ. ಪರ್ಯಾಯ ವಿದ್ಯುತ್ ಮೂಲಗಳನ್ನು ಹುಡುಕಿ ಸ್ವಾವಲಂಬಿಯಾಗುವುದು ಇಂದಿನ ಅಗತ್ಯವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕದ ಹಲವೆಡೆ ಗಾಳಿಯಂತ್ರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ. ಸೋಲಾರ್ ವಿದ್ಯುತ್ ದೀಪಗಳಿಗೂ ಮನ್ನಣೆ ದೊರಕುತ್ತಿದೆ.


ಗಾಳಿಯಂತ್ರಗಳೇಕೆ ಸರ್ವವ್ಯಾಪಿಯಾಗಿಲ್ಲ? ಒಂದು ವೇಳೆ ವಿದ್ಯುತ್ ಕೊರತೆಗೆ ಗಾಳಿಯಂತ್ರಗಳು ಸಮರ್ಪಕ ಉತ್ತರವಾದರೆ ಪ್ರತಿ ಊರಿನಲ್ಲೇಕೆ ಇವನ್ನು ಸ್ಥಾಪಿಸಲಾಗುತ್ತಿಲ್ಲ? ಇದಕ್ಕೆ ಕಾರಣ ಹಲವಾರು. ಗಾಳಿಯಂತ್ರಕ್ಕೆ ಅವಶ್ಯವಾಗಿರುವ ಹಲವು ಪರಿಸ್ಥಿತಿಗಳು ಎಲ್ಲಾ ಪರಿಸರದಲ್ಲಿ ಸಿಗಲು ಸಾಧ್ಯವಿಲ್ಲ. ಉದಾಹರಣೆಗೆ ಗಾಳಿಯಂತ್ರದ ಸ್ಥಾಪನೆಗೆ ದಿನದ ಎಲ್ಲಾ ಅವಧಿಗಳಲ್ಲೂ ಕನಿಷ್ಟ ೫ ಮೀ/ಸೆಕೆಂಡ್ ವೇಗದ ಗಾಳಿ ಬೀಸುತ್ತಿರುವ ಎತ್ತರದ ಜಾಗ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಚಿತ್ರದುರ್ಗದ ಬೆಟ್ಟಗಳ ಮೇಲೆ ಹಲವು ಗಾಳಿಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅತಿ‌ಎತ್ತರದ ಬೆಟ್ಟದ ಮೇಲೂ ಸಹಾ ಗಾಳಿಯ ವೇಗ ದಿನದ ಕೆಲವು ಘಂಟೆಗಳ ಕಾಲ ೫ ಮೀ/ಸೆಕೆಂಡ್ ಗಿಂತಲೂ ಕಡಿಮೆಯಿರುತ್ತವೆ. ಆಗ ಆ ಯಂತ್ರಗಳ ಬ್ಲೇಡುಗಳು ನಿಶ್ಚಲವಾಗಿ ನಿಂತಿರುವುದನ್ನು ಕಾಣಬಹುದು. ಈ ಕಾರಣದಿಂದ ಬೆಟ್ಟದ ಮೇಲೆ ಹಲವಾರು ಗಾಳಿಯಂತ್ರಗಳನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ. ಅಲ್ಲದೇ ಪ್ರತಿ ಗಾಳಿಯಂತ್ರದ ಬೆಲೆ ಬಲುದುಬಾರಿ. ಸ್ಥಾಪನಾ ವೆಚ್ಚವೂ ಹೆಚ್ಚು. ನಿರ್ವಹಣೆಗಾಗಿ ಎತ್ತರದ ಕ್ರೇನುಗಳನ್ನು ಆ ಗಾಳಿಯಂತ್ರದ ಬಳಿಗೆ ಸಾಗಿಸುವ ಸಾಗಾಣಿಕಾ ವೆಚ್ಚವೇ ಕೆಲವೊಮ್ಮೆ ನಿರ್ವಹಣಾ ವೆಚ್ಚಕ್ಕೂ ಅಧಿಕವಾಗುವುದುಂಟು. ಎತ್ತರದ ಸ್ಥಳಗಳಲ್ಲಿ ಮಾತ್ರ ಸ್ಥಾಪಿಸಬಹುದಾದ್ದರಿಂದ ಎಲ್ಲಾ ಊರುಗಳಿಗೆ ಈ ಯಂತ್ರಗಳ ಸೌಭಾಗ್ಯವಿಲ್ಲ.

ಹಾಗಾದರೆ ಬೇರೆ ಪರ್ಯಾಯ ಮಾರ್ಗಗಳೇ ಇಲ್ಲವೇ? ಇದೆ. ಕೆನಡಾದ ಮ್ಯಾಗೆನ್ನ್ ಪವರ್ ಸಂಸ್ಥೆ ಯಾವುದೇ ಸ್ಥಳದಲ್ಲಿ ಸ್ಥಾಪಿಸಬಹುದಾದ ಸರಳ ಗಾಳಿಯಂತ್ರದ ಕರಡುಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಮಾರ್ಸ್ ((Magenn Air Rotor System -M.A.R.S) ಎಂಬ ಹೆಸರಿನ ಈ ತ್ರಂತ್ರಜ್ಞಾನವನ್ನು ಸುಲಭವಾಗಿ ಹಾಗೂ ಅತಿಕಡಿಮೆ ವೆಚ್ಚದಲ್ಲಿ ಸ್ಥಾಪಿಸಬಹುದು ಎಂದು ಸಂಸ್ಥೆ ಪ್ರಕಟಿಸಿದೆ. ಈ ಉಪಕರಣದ ಕಾರ್ಯವೈಖರಿ ಹೇಗೆ ಎಂದು ತಿಳಿಯುವ ಮೊದಲು ಕೆಲವು ಪೂರಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.


ಗಾಳಿಪಟ: ಗಾಳಿಪಟವನ್ನು ನಾವೆಲ್ಲರೂ ಹಾರಿಸಿಯೇ ಇದ್ದೇವೆ. ಕಡಿಮೆ ಎತ್ತರದಲ್ಲಿದ್ದಾಗ ಗೋತಾ ಹೊಡೆಯುವ, ಕೆಳಕ್ಕಿಳಿಯುವ ಗಾಳಿಪಟ ಕೊಂಚ ಎತ್ತರ ಪಡೆದ ಬಳಿಕ ಸ್ಥಿರವಾಗಿರುವುದೇಕೆ? ಇದಕ್ಕೆ ಕಾರಣ ಎತ್ತರ ಹೆಚ್ಚಿದಂತೆ ಗಾಳಿಯ ವೇಗ ಹೆಚ್ಚು ಸ್ಥಿರವಾಗಿರುವುದೂ ಹಾಗೂ ಹೆಚ್ಚಿನದ್ದಾಗಿರುವುದೇ ಆಗಿದೆ. ಅದೂ ಅಲ್ಲದೇ ಒಂದು ಹಂತದಲ್ಲಿ ಗಾಳಿಪಟದ ದಾರವನ್ನು ಒಂದೆಡೆ ಕಟ್ಟಿಬಿಟ್ಟರೆ ಇಡಿಯದಿನ ಅದು ತನ್ನಷ್ಟಕ್ಕೆ ಹಾರಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ -ಮ್ಯಾಗ್ನಸ್ ಎಫೆಕ್ಟ್. ಸುಮ್ಮನೇ ಎಸೆದ ಕ್ರಿಕೆಟ್ ಚೆಂಡು ನೇರವಾಗಿ ಹೋಗುತ್ತದೆ. ಅದೇ ಕ್ರಿಕೆಟ್ ಚೆಂಡನ್ನು ತನ್ನ ಸುತ್ತ ತಿರುಗುವಂತೆ ಮಾಡಿ ಎಸೆದರೆ (ಸ್ಪಿನ್) ಚೆಂಡು ತ್ರಿಜ್ಯಾಕಾರದ ಮಾರ್ಗದಲ್ಲಿ ಮುನ್ನಡೆಯುತ್ತದೆ. ಫುಟ್ಬಾಲ್ ಆಟಗಾರ ವೇಗವಾಗಿ ತಿರುಗುವಂತೆ ಒದ್ದ ಚೆಂಡು ಸರಳ ರೇಖೆಯಲ್ಲಿ ಚಲಿಸದೇ ತ್ರಿಜ್ಯಾಕಾರದಲ್ಲಿ ಚಲಿಸಿ ಗೋಲ್ ಪಡೆಯುವುದಕ್ಕೂ ಇದೇ ಕಾರಣ. ವೃತ್ತಾಕಾರದ ವಸ್ತು ತನ್ನ ಸುತ್ತ ತಿರುಗುತ್ತಾ ಗಾಳಿಯಲ್ಲಿ ಚಲಿಸಿದರೆ ಒಂದು ಬದಿಯಲ್ಲಿ ಹೆಚ್ಚಿನ ಸಾಂದ್ರತೆಯನ್ನೂ, ಇನ್ನೊಂದೆಡೆ ಕಡಿಮೆ ಸಾಂದ್ರತೆಯನ್ನೂ ಪಡೆಯುವುದರಿಂದ ವಸ್ತುವಿನ ಪಥದಲ್ಲಿ ವ್ಯತ್ಯಾಸವುಂಟಾಗುತ್ತದೆ. ಅದೇ ವಸ್ತುವನ್ನು ವೇಗವಾಗಿ ಬೀಸುತ್ತಿರುವ ಗಾಳಿಯ ಮಧ್ಯೆ ಇರಿಸಿದರೆ? ಇದಕ್ಕೆ ವಿರುದ್ಧವಾದ
ಪ್ರತಿಕ್ರಿಯೆ ಉಂಟಾಗುತ್ತದೆ. ಅಂದರೆ ವಸ್ತು ತಿರುಗಲು ಪ್ರಾರಂಭಿಸುತ್ತದೆ. (ಗಿರಿಗಿಟ್ಟಲೆ ನೆನಪಿಗೆ ಬಂತಲ್ಲವೇ) ಈಗ ಈ ಗಿರಿಗಿಟ್ಟಲೆಯನ್ನು ವೇಗವಾಗಿ ಗಾಳಿ ಬೀಸುತ್ತಿರುವಲ್ಲಿಟ್ಟರೆ ಗಿರಿಗಿರಿ ತಿರುಗುತ್ತದೆ. ಆ ತಿರುಗುವ ಗಿರಿಗಿಟ್ಟಲೆಯನ್ನು ವಿದ್ಯುತ್ ಉತ್ಪಾದಿಸುವ ರೋಟಾರಿಗೆ ಜೋಡಿಸಿದರೆ ಸತತ ವಿದ್ಯುತ್ ಲಭ್ಯವಾಗುತ್ತದೆ. ಮಾರ್ಸ್ ಉಪಕರಣ ಉಪಯೋಗಿಸುವ ತಂತ್ರಜ್ಞಾನದ ಜೀವಾಳವೂ ಇದೇ.



ಆದರೆ ಸತತವಾಗಿ ವೇಗವಾಗಿ ಬೀಸುತ್ತಿರುವ ಗಾಳಿ ಇರುವುದು ಎಲ್ಲಿ? ಬೇರೆಲ್ಲೂ ಹೋಗುವುದು ಬೇಡ, ನಾವಿದ್ದಲ್ಲಿಯೇ ಮುನ್ನೂರು ಅಡಿ ಮೇಲೆ ಹೋದರೆ ಸಾಕು. ಸತತವಾದ, ಒಂದೇ ದಿಕ್ಕಿನಲ್ಲಿ ಬೀಸುತ್ತಿರುವ ಸಾಧಾರಣವಾಗಿ ಹತ್ತು ಮೀ/ಸೆಕೆಂಡ್ ಗೆ ಕಡಿಮೆಯಿಲ್ಲದ ವೇಗದ ಗಾಳಿ ಸದಾ ಲಭ್ಯ. ಆದರೆ ಅಷ್ಟು ಎತ್ತರದಲ್ಲಿ ಸ್ಥಾಪಿಸುವುದು ಹೇಗೆ? ಇದಕ್ಕೆ ಉತ್ತರ ಹಗುರ ಅನಿಲ. ಅನಿಲಗಳಲ್ಲಿಯೇ ಅತಿಹಗುರವಾಗಿರುವುದು ಜಲಜನಕ. ಆದರೆ ಜಲಜನಕ ಸ್ವದಹ್ಯ (ಅಂದರೆ ತನಗೆ ತಾನೇ ಹೊತ್ತಿಕೊಳ್ಳುವ) ಗುಣವುಳ್ಳ ಅನಿಲವಾದ್ದರಿಂದ ಅದರ ಬಳಿಕ ಅತಿಹಗುರವಾದ ಅನಿಲ ಹೀಲಿಯಂ ಅನಿಲ ಈ ಉಪಕರಣದ ಮುಖ್ಯ ಪರಿಕರ.



ಮಾರ್ಸ್ ಕಾರ್ಯನಿರ್ವಹಣೆ: ಅಗತ್ಯಕ್ಕೆ ತಕ್ಕ ಗಾತ್ರದ ಬೆಲೂನ್ ಹಾಗೂ ಅದಕ್ಕೆ ಅಲವಡಿಸಬಹುದಾದ ಬ್ಲೇಡುಗಳನ್ನು ಸಾಮಾನ್ಯ ವಾಹನದಲ್ಲಿ ಕೊಂಡೊಯ್ದು ಹೀಲಿಯಂ ತುಂಬಿಸಿ ಬಲಿಷ್ಠವಾದ ಉಕ್ಕಿನ ಕೇಬಲ್ ಮೂಲಕ ಆಗಸಕ್ಕೆ ಹಾರಿಬಿಟ್ಟರೆ ಸಾಕು. ಇಡಿಯ ಪಟ್ಟಣಕ್ಕೆ ವಿದ್ಯುತ್ ಅಗತ್ಯವಾದರೆ ಒಂದಕ್ಕಿಂತ ಹೆಚ್ಚಿನ ಬೆಲೂನುಗಳ ಸಮೂಹದ ಅಗತ್ಯವಿದೆ. ಆಗಸದಲ್ಲಿ ಗಿರಗಿರ ತಿರುಗುವ ರೋಟರಿಗೆ ಅಳವಡಿಸಿರುವ ಡಿ.ಸಿ. ವಿದ್ಯುತ್ ಜನರೇಟರ್ ಮೂಲಕ ಭೂಮಿಗೆ ವಿದ್ಯುತ್ ವರ್ಗಾಯಿಸಿ ಸೂಕ್ತ ಆಲ್ಟರ್ನೇಟರ್ ಮೂಲಕ ಎ.ಸಿ.ಗೆ ಪರಿವರ್ತಿಸಿಕೊಳ್ಳಬಹುದು.



ಅತಿಸರಳವಾದ ಈ ಮಾರ್ಸ್ ಉಪಕರಣದ ಉಪಯೋಗಗಳು ಹಲವಾರು. ಇದನ್ನು ಯಾವುದೇ ಊರಿನಲ್ಲಿ, ಯಾವುದೇ ಸ್ಥಳದಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಅಗತ್ಯವಾದ ಗಾಳಿಯ ವೇಗ ಕನಿಷ್ಟ ನಾಲ್ಕು ಮೀಟರ್ ಪ್ರತಿ ಸೆಕೆಂಡ್ ಇದ್ದರೂ ಸಾಕು. ಆದರೆ ಸುಮಾರು ಮೂನ್ನೂರು ಅಡಿ ಎತ್ತರದಲ್ಲಿ ಕನಿಷ್ಟ ಹತ್ತು ಮೀಟರ್ ಆದರೂ ಗಾಳಿ ಯಾವಾಗಲೂ ಇದ್ದೇ ಇರುತ್ತದೆ. ಹಾಗಾಗಿ ಉಪಕರಣ ನಿಲ್ಲುವ ಭಯ ಇಲ್ಲವೇ ಇಲ್ಲ. ಎಷ್ಟೇ ವೇಗವಾದ ಗಾಳಿಯಿದ್ದರೂ ತಡೆದುಕೊಳ್ಳುವ ಸಾಮರ್ಥ್ಯ ಮಾರ್ಸ್ ಗೆ ಇದೆ.
ಸುಮಾರು ಆರುನೂರರಿಂದ ಒಂದು ಸಾವಿರ ಅಡಿ ಎತ್ತರದಲ್ಲಿ ಉಪಕರಣವನ್ನು ಸ್ಥಾಪಿಸಿದರೆ ಆ ಊರಿನ ವಿದ್ಯುತ್ ಕೊರತೆ ಶಾಶ್ವತವಾಗಿ ನೀಗಲು ಸಾಧ್ಯ. ಚಿಕ್ಕ ಮನೆಗೆ ಬೇಕಾದ ಒಂದು ಯಂತ್ರದಿಂದ ಹಿಡಿದು ಇಡಿಯ ನಗರಕ್ಕೆ ಬೇಕಾದ ಹಲವು ಯಂತ್ರಗಳ ಸಮುಚ್ಛಯದವರೆಗೂ ಸ್ಥಾಪಿಸಲು ಸಾಧ್ಯ. ಗಾಳಿಯಂತ್ರದ ಒಂದು ಭಾಗದಷ್ಟು ಮಾತ್ರ ಉತ್ಪಾದನಾವೆಚ್ಚವಿರುವ ಮಾರ್ಸ್ ಉಪಕರಣವನ್ನು ಮೇಲಕ್ಕೇರಿಸುವುದೂ ನಿರ್ವಹಣೆಗಾಗಿ ಕೆಳಕ್ಕಿಳಿಸುವುದೂ ಅತಿಸುಲಭ. ಹಗುರವಾದ್ದರಿಂದ ಯಾವ ಸ್ಥಳದಲ್ಲಿ ಅಗತ್ಯವಿದೆಯೋ ಅಲ್ಲಿ ಸುಲಭವಾಗಿ ವಾಹನದಲ್ಲಿ ಕೊಂಡೊಯ್ಯಲೂ ಸಾದ್ಯ. ಯಾವುದೇ ರೀತಿಯ ಮಾಲಿನ್ಯವಿರದ ಕಾರಣ ಅತ್ಯಂತ ಪರಿಸರಸ್ನೇಹಿ ಕೂಡಾ. ಸುರಕ್ಷತೆಯ ಕಾರಣಕ್ಕೆ ಲೈಟ್ನಿಂಗ್ ಅರೆಸ್ಟರ್ ಅಳವಡಿಸುವುದು ಅಗತ್ಯ. ಮಳೆಗಾಲದಲ್ಲಿ ಸಹಾ ಮೇಲ್ಬಾಗದಲ್ಲಿ ಗಾಳಿಯೊಂದಿಗೆ ಮಳೆಹನಿ ಹಾಗೂ ತೇವಾಂಶದ ಕಾರಣ ಕಬ್ಬಿಣ ತುಕ್ಕು ಹಿಡಿಯುವ ಸಾಧ್ಯತೆಯಿರುವುದರಿಂದ ತುಕ್ಕು ನಿರೋಧಕ ಹಾಗೂ ಹಗುರವಾದ ಅಲ್ಯೂಮಿನಿಯಂ ಲೋಹದಿಂದ ಮಾರ್ಸ್ ಉಪಕರಣವನ್ನು ತಯಾರಿಸಲಾಗಿದೆ. ಒಮ್ಮೆ ಸ್ಥಾಪಿಸಿದ ಬಳಿಕ ಹೆಚ್ಚೂ ಕಡಿಮೆ ನಿರ್ವಹಣಾ ವೆಚ್ಚ ಮಾತ್ರ ಭರಿಸಬೇಕಾದುದರಿಂದ ವಿದ್ಯುತ್ ಬೆಲೆ ಈಗ ಲಭ್ಯವಾಗುತ್ತಿರುವ ವಿದ್ಯುತ್ ಬೆಲೆಯ ಒಂದಂಶದಷ್ಟು ಅಗ್ಗವಾಗಲಿದೆ.

ಹತ್ತು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉಪಕರಣದ ಅಂಕಿ‌ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. ಒಮ್ಮೆ ಅಳವಡಿಸಿದರೆ ಸುಮಾರು ಹದಿನೈದು ವರ್ಷಗಳವರೆಗೆ ಬಾಳಿಕೆ ಬರುವ ಈ ಉಪಕರಣದ ಬೆಲೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಈ ವರ್ಷದ ಅಂತ್ಯದಲ್ಲಿ ಮಾರ್ಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.



Magenn Power Product
Model 10kW
Rated Power 10,000 Watts
Size (Diameter x Length) 30 feet by 60 feet
Shipping Weight Under 3,000 lbs - depending on tether length
Volume of Helium 33,000 cubic feet (approx.)
Tether Height 400 ft standard - up to 1,000 ft optional tether length, in increments of 100 feet
Start-up Wind Speed 2.0 m/sec - 4.48 mph
Cut-in Wind Speed 3.0 m/sec - 6.7 mph
Rated Wind Speed 12.0 m/sec - 26.8 mph
Cut-out Wind Speed 25.0 m/sec - 53.7 mph
Maximum Wind Speed 28.0 m/sec - 62.6 mph
Temperature Range -40ºC /-40ºF to +45ºC/+113ºF
Generators 2 x 5 kW
Output Form Various Options Available: 120 VAC 60Hz - 240 VAC 50 Hz - Regulated DC 12-600V
Warranty Up to 5 Years
Life Cycle 10 - 15 Years
Price (USD) (Estimated) TBD
Availability 2009-10



ಪ್ರಸ್ತುತ ಗಣಿ, ಸಮುದ್ರ, ಧೃವಪ್ರದೇಶ ಮೊದಲಾದ ನಿeನ ಪ್ರದೇಶಗಳಲ್ಲೂ ಜನವಸರಿ ವಿರಳವಾದೆಡೆಗಳಲ್ಲೂ ವಿದ್ಯುತ್ ಉತ್ಪಾದನೆ ಸುಲಭಸಾಧ್ಯವಲ್ಲ. ಇಲ್ಲಿ ಭಾರವಾದ ಡೀಸೆಲ್ eನರೇಟರುಗಳನ್ನು ಉಪಯೋಗಿಸಲಾಗುತ್ತಿದೆ. ಉರಿಸುವ ಡೀಸೆಲ್ ಹೊಗೆ ಪರಿಸರಕ್ಕೂ ಹಾನಿಕರ, ಇಂಜಿನ್ ನಿರ್ವಹಣೆಯೂ ಕಷ್ಟಕರ. ಇಂಥಹ ಸ್ಥಳಗಳಲ್ಲೆಲ್ಲಾ ಮಾರ್ಸ್ ಒಂದು ವರದಾನವಾಗಿ ಪರಿಣಮಿಸಲಿದೆ.

ಈ ಸರಳವಿದ್ಯುತ್ ಗಾಳಿಯಂತ್ರ ನಮ್ಮ ಊರುಗಳಿಗೂ ಶೀಘ್ರವೇ ಆಗಮಿಸುವಂತಾಗಲಿ ಎಂದು ಆಶಿಸೋಣ.



ನೀರಡಿಯಲ್ಲಿ ಇಸ್ತ್ರಿ ಮಾಡುವುದೇ? ಎಲಾ ಇದೆಂಥ ಗಿನ್ನೆಸ್ ದಾಖಲೆ?


?
ಹುಚ್ಚುತನವೆಂದು ಅನ್ನಿಸುವ ಈ ಕಾರ್ಯಕ್ಕೂ ಒಂದು ಗಿನ್ನೆಸ್ ದಾಖಲೆಯಿದೆ. ಕಳೆದ ವರ್ಷ ಹತ್ತು ನಿಮಿಷದ ಅವಧಿಯಲ್ಲಿ ಆಸ್ಟ್ರೇಲಿಯಾದ ಎಪ್ಪತ್ತೆರೆಡು ಮುಳುಗುಗಾರರ ತಂಡ ಲಿನೆನ್ ಬಟ್ಟೆಯೊಂದನ್ನು ಇಸ್ತ್ರಿ ಮಾಡಿತ್ತು.
ಆದರೆ ಈ ವರ್ಷ ಬ್ರಿಟನ್ನಿನ ಎಂಭತ್ತಾರು ಮುಳುಗುಗಾರರ ತಂಡ ಆ ದಾಖಲೆಯನ್ನು ಮುರಿದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ತ್ಯಜಿಸಲಾಗಿರುವ ಗಣಿಯೊಂದರಲ್ಲಿ ೧೭೩ ಅಡಿ ಆಳದದಲ್ಲಿ ಹತ್ತು ನಿಮಿಷದಲ್ಲಿ ಎಂಭತ್ತಾರು ಮುಳುಗುಗಾರರು ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿದ್ದಾರೆ.
ಬ್ರಿಟನ್ನಿನ ಸೌಥ್ ವೇಲ್ಸ್ ಎಂಬಲ್ಲಿ ನಡೆದ ಈ ಸಾಧನೆ ನಿಜಕ್ಕೂ ಲೈಫ್ ಬೋಟ್ ರಕ್ಷಣಾಗಾರರಿಗೆ ನೆರವು ನೀಡುವಲ್ಲಿ ಧನಸಂಗ್ರಹದ ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತೇ ವಿನಃ ದಾಖಲೆಗಾಗಿ ಅಲ್ಲ ಎಂದು ತಂಡದ ನಾಯಕ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ್ದ ಗಾರೆಥ್ ಲಾಕ್ ಅವರು ತಿಳಿಸಿದ್ದಾರೆ.
ಈ ಪ್ರಯತ್ನವನ್ನು ವೀಕ್ಷಿಸಲು ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಆಗಮಿಸಿದ್ದುದು ವಿಶೇಷವಾಗಿದೆ. ಹೊಸ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಇನ್ನು ಒಂದೆರೆಡು ವಾರದಲ್ಲಿ ಪ್ರಕಟಿಸಬಹುದು.
ಇಸ್ತ್ರಿ ಮಾಡಿದ ಬಟ್ಟೆ ಒದ್ದೆಯಾಗಿಯೇ ಇದ್ದರೆ ತೊಡುವುದು ಹೇಗೆ? ಈ ಮಾಹಿತಿಯನ್ನು ಅವರು ನೀಡಿಲ್ಲ.
ಕೃಪೆ: www.thesun.co.uk

ವಿಶ್ವದ ಅತ್ಯಂತ ಅಪಾಯಕಾರಿ ಪ್ರಾಣಿಸಂಗ್ರಹಾಲಯ - ಲುಜಾನ್ ಝೂ

- ಅರ್ಶದ್ ಹುಸೇನ್ ಎಂ.ಹೆಚ್., ಕೊಪ್ಪ

ಈ ವರ್ಷದ ರಜೆಗಾಗಿ ಊರಿಗೆ ಬರುವ ಮೊದಲೇ ಮೈಸೂರಿನ ಪ್ರಾಣಿಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಬೇಕೆಂದು ಮಕ್ಕಳು ಬೇಡಿಕೆಯಿಟ್ಟಿದ್ದರು. ನಾನೂ ಮೈಸೂರು ಪ್ರಾಣಿಸಂಗ್ರಹಾಲಯವನ್ನು ನೋಡಿ ಇಪ್ಪತ್ತೈದು ವರ್ಷಗಳೇ ಕಳೆದಿದ್ದವು. ಈಗ ಇಲ್ಲಿ ಹಲವಾರು ಬದಲಾವಣೆಗಳಾಗಿವೆ, ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ, ನೋಡಲು ಚೆನ್ನಾಗಿದೆ ಎಂದು ಇತ್ತೀಚೆಗೆ ಭೇಟಿ ನೀಡಿದ್ದ ಹಲವು ಸ್ನೇಹಿತರು ತಿಳಿಸಿದ್ದರು. ಅಂತೆಯೇ ಮೈಸೂರು ತಲುಪಿದ ಮರುದಿನ ಬೆಳಿಗ್ಗೆ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಅಡಿಯಿಟ್ಟಿದ್ದೆ. ಸ್ನೇಹಿತರು ತಿಳಿಸಿದಂತೆ ಇಪ್ಪತ್ತೈದು ವರ್ಷ ಹಿಂದೆ ನೋಡಿದ್ದ ಮೈಸೂರು ಪ್ರಾಣಿಸಂಗ್ರಹಾಲಯಕ್ಕೂ ಇಂದಿನದಕ್ಕೂ ಎಷ್ಟೋ ವ್ಯತ್ಯಾಸವಿತ್ತು. ಎಲ್ಲೆಲ್ಲೂ ಅಚ್ಚುಕಟ್ಟು, ಸ್ವಚ್ಛತೆ, ಮಾಹಿತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಶಕರಿಗೆ ಒದಗಿಸಲಾದ ಸುರಕ್ಷತೆ. ಪ್ರಾಣಿಗಳಿಗೆ ಆಹಾರ ನೀಡುವುದಾಗಲೀ ಅಣಕಿಸುವುದಾಗಲೀ ಇಲ್ಲಿ ನಿಷಿದ್ಧ. ಹುಲಿ ಸಿಂಹಗಳಂತಹ ವನ್ಯಮೃಗಗಳ ಬೋನುಗಳ ದಪ್ಪನೆಯ ಕಬ್ಬಿಣದ ಸರಳುಗಳಂತೂ ಪ್ರಾಣಿಗಳ ಅರ್ಧಭಾಗ ಕಾಣದಿರುವಷ್ಟು ಮರೆಮಾಚುತ್ತವೆ. ಪ್ರಾಣಿಗಳೊಂದಿಗೆ ಮುಖಾಮುಖಿಯಾದರೆ ಅಪಾಯ ತಪ್ಪಿದ್ದಲ್ಲ ಎಂಬ ರೇಖಾಚಿತ್ರಗಳನ್ನು ಎಲ್ಲೆಲ್ಲೂ ಅಳವಡಿಸಲಾಗಿದೆ. ಅಂತೆಯೇ ಆಯಾ ಪ್ರಾಣಿಗಳ ವಿವರಗಳನ್ನು ಸಹಾ ಸ್ಪಷ್ಟವಾಗಿ ನೀಡಲಾಗಿದೆ. ಆದರೆ ಪ್ರಾಣಿಗಳನ್ನು ಸಾಕುವ ಖರ್ಚು ವಿಪರೀತವಾಗಿರುವುದರಿಂದ ಹಾಗೂ ಕೇವಲ ಪ್ರವೇಶಧನದಿಂದ ಈ ಖರ್ಚುಗಳನ್ನು ಭರಿಸಲಸಾಧ್ಯವಾದುದರಿಂದ ಇತ್ತೀಚೆಗೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಒಂದು ಹೊಸ ಪ್ರಯೋಗವನ್ನು ಪ್ರಾರಂಭಿಸಲಾಯಿತು. ಈ ಕರೆಗೆ ಸ್ಪಂದಿಸಿದ ನಾಡಿನ ಹಲವಾರು ಗಣ್ಯರು ಹಾಗೂ ಸಂಸ್ಥೆಗಳು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿವೆ. ಕೆಲವು ಸಂಸ್ಥೆಗಳು ಒಂದು ನಿರ್ದಿಷ್ಟ ಅವಧಿಗಾಗಿ ಪ್ರಾಣಿಯೊಂದನ್ನು ದತ್ತು ತೆಗೆದುಕೊಂಡರೆ ಕೆಲವು ಸಂಸ್ಥೆಗಳು ಜೀವಾವಧಿಗೆ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿವೆ. ದತ್ತು ಯೋಜನೆ ಯಶಸ್ವಿಯಾಗಿರುವುದರಿಂದ ಮೈಸೂರು ಪ್ರಾಣಿಸಂಗ್ರಹಾಲಯ ಇನ್ನಷ್ಟು ಸೌಲಭ್ಯಗಳೊಂದಿಗೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. 



ಆದರೆ ಸುರಕ್ಷತೆಯ ವಿಷಯದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಾಣಿಸಂಗ್ರಹಾಲಯವೊಂದು ಅರ್ಜೆಂಟೀನಾ ದೇಶದ ರಾಜಧಾನಿ ಬ್ಯೂನಸ್ ಐರಸ್ ನಗರದಿಂದ ಐವತ್ತು ಮೈಲಿ ದೂರದಲ್ಲಿರುವ ಲುಜಾನ್ ಎಂಬ ನಗರದಲ್ಲಿದೆ.  ಮೈಸೂರಿನಂತೆಯೇ ಅಲ್ಲಿಯೂ ಪ್ರಾಣಿಗಳನ್ನು ಸಾಕಲು ಧನದ ಆಭಾವ. ೧೯೯೪ ರಲ್ಲಿ ಪ್ರಾರಂಭವಾದ  ಲುಜಾನ್ ಜೂ ಎಂಬ ಹೆಸರಿನ ಈ ಪ್ರಾಣಿಸಂಗ್ರಹಾಲಯದಲ್ಲಿ ಮನುಷ್ಯರನ್ನು ವನ್ಯಪ್ರಾಣಿಗಳಿಂದ ರಕ್ಷಣೆ ನೀಡಲು ಮಾಡಿರುವ ವ್ಯವಸ್ಥೆಯ ನಡುವೆಯೇ ಸರ್ಕಾರವೇ ವನ್ಯಮೃಗಗಳೊಂದಿಗೆ ಮುಖಾಮುಖಿಯಾಗಲೂ, ಪ್ರಾಣಿಗಳ ಮೇಲೆ ಸವಾರಿ ಮಾಡಲೂ ಅನುಕೂಲ ಮಾಡಿಕೊಡುತ್ತದೆ. ಅಲ್ಲದೇ ಪ್ರಾಣಿಗಳಿಗೆ ಆಹಾರ ನೀಡಲು, ಹಾಲು ಕುಡಿಸಲು ಅನುವುಮಾಡಿಕೊಡುತ್ತದೆ.   ಆದರೆ ಈ ಸೇವೆಗಾಗಿ ಗ್ರಾಹಕ ಐವತ್ತು ಡಾಲರುಗಳನ್ನು (ಸುಮಾರು ಎರಡೂವರೆ ಸಾವಿರ ರೂಪಾಯಿಗಳು) ನೀಡಬೇಕು.




































ಅಲ್ಲದೇ ಒಂದು ವೇಳೆ ಯಾವುದೇ ವನ್ಯಮೃಗ ಧಾಳಿ ಎಸಗಿದರೆ ಆಗುವ ಪ್ರಮಾದಗಳಿಗೆ ತಾನೇ ಹೊಣೆ, ಪ್ರಾಣಿಸಂಗ್ರಹಾಲಯದ ಸಿಬ್ಬಂದಿಯನ್ನು ಹೊಣೆಯಾಗಿಸಲಾರೆ ಎಂದು ಮುಚ್ಚಳಿಕೆ ಬರೆದು ಕೊಡಬೇಕು.  ಆದರೆ ಪ್ರವೇಶಧನ  ಐದು ಪೌಂಡುಗಳು (ಸುಮಾರು ಮುನ್ನೂರಾ ಅರವತ್ತೈದು ರೂಪಾಯಿಗಳು) ಮಾತ್ರ. ಆದರೆ ಹೆಚ್ಚಿನ ಮೊತ್ತ ಕೊಟ್ಟು ವನ್ಯಪ್ರಾಣಿಗಳ ಹತ್ತಿರ ಬರಲು ಇಚ್ಛಿಸುವ ಸಾರ್ವಜನಿಕರೂ ಬೇಕಾದಷ್ಟು ಸಂಖ್ಯೆಯಲಿದ್ದಾರೆ. ಸಿಂಹ, ಕರಡಿ ಮೊದಲಾದ ದೊಡ್ಡ ಪ್ರಾಣಿಗಳ ಬೆನ್ನ ಮೇಲೆ ಕುದುರೆಯಂತೆ ಸವಾರಿ ಮಾಡಿದರೆ ಮಕ್ಕಳು ಪ್ರಾಣಿಗಳ ಮರಿಗಳನ್ನು ಎತ್ತಿಕೊಂಡು ಅಪ್ಪಿ ಮುದ್ದಾಡುತ್ತಾರೆ. ಅಂಗಾತ ಬಿದ್ದಿರುವ ಪ್ರಾಣಿಯ ಹೊಟ್ಟೆಯನ್ನು ನೇವರಿಸಿ ಪುಳಕಿತರಾಗುತ್ತಾರೆ. ಕರಡಿ, ಚಿರತೆ ಮೊದಲಾದವುಗಳ ಬಾಯಿಯಲ್ಲಿ ಕೈಗಳನ್ನಿರಿಸಿ ಹುಸಿ ಹುಸಿ ಕಚ್ಚಿಸಿಕೊಳ್ಳುತ್ತಾರೆ. ಚಿಕ್ಕ ಪ್ರಾಣಿಗಳನ್ನು ಬೆನ್ನ ಮೇಲೆ, ತಲೆಯ ಮೇಲೆ ಎತ್ತಿ ಕೂರಿಸುತ್ತಾರೆ, ತಳ್ಳುಗಾಡಿಯಲ್ಲಿ ಕುಳ್ಳಿರಿಸಿ ಸವಾರಿ ಮಾಡಿಸಿ ಸಂಭ್ರಮಿಸುತ್ತಾರೆ. 




 ಅಷ್ಟಕ್ಕೂ ಈ ಪ್ರಾಣಿಗಳು ಜನರಿಗೇನೂ ಅಪಾಯ ಎಸಗುವುದಿಲ್ಲವೇ? ಸ್ವಾರಸ್ಯ ಇರುವುದು ಇಲ್ಲಿ.  ಈ ಪ್ರಾಣಿಗಳ ಮೇಲೆ ಸವಾರಿ ಮಾಡಲು, ಬಳಿ ನಿಂತುಕೊಳ್ಳಲು, ಮೈ ನೇವರಿಸಲು, ಆಹಾರ ನೀಡಲು ಒಂದು ನಿರ್ದಿಷ್ಟ ಸಮಯವಿದೆ. ಆ ಸಮಯಕ್ಕೂ ಮೊದಲು ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ಎಲ್ಲಾ ಪ್ರಾಣಿಗಳಿಗೆ ಹೊಟ್ಟೆ ಬಿರಿಯುವಷ್ಟು ತಿನ್ನಿಸಿರುತ್ತಾರೆ. ಆ ಬಳಿಕ ಬಳಿಬರುವ ಮನುಷ್ಯರನ್ನು ತಿನ್ನುವ ಯೋಚನೆಯೇ ಅವುಗಳಿಗೆ ಬಾರದಿರುವುದರಿಂದ ಧಾಳಿ ಮಾಡುವ ಸಂಭವ ತೀರಾ ಕಡಿಮೆ.  ಅಲ್ಲದೇ ಹೆಚ್ಚಿನ ಪ್ರಾಣಿಗಳು ಇಲ್ಲಿಯೇ ಹುಟ್ಟಿ ಬೆಳೆದವುಗಳು, ಚಿಕ್ಕಂದಿನಿಂದಲೂ ಅವುಗಳಿಗೆ ಮನುಷ್ಯರ ಒಡನಾಟ ಅಭ್ಯಾಸವಾಗಿದ್ದು ಮನುಷ್ಯನೆಂದರೆ ತಿನ್ನಬಹುದಾದ ವಸ್ತು ಎಂಬ ವಿಚಾರವೇ ಅವುಗಳ ಮನಸ್ಸಿನಲ್ಲಿ ಸುಳಿಯುವುದಿಲ್ಲ, ಹಾಗಾಗಿ ಯಾರೂ ಈ ಪ್ರಾಣಿಗಳ ಬಳಿ ನಿರ್ಭಯವಾಗಿ ಹೋಗಬಹುದು, ಸವಾರಿ ಮಾಡಬಹುದು, ಹಾಲು ಕುಡಿಸಬಹುದು, ಮೈ ನೇವರಿಸಬಹುದು, ಎತ್ತಿ ಮುದ್ದಾಡಬಹುದು - ಇದು ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ನೀಡುವ ಸಮರ್ಥನೆ.














ಅಂದಹಾಗೆ ಥಾಯ್ಲೆಂಡಿನ ಬ್ಯಾಂಕಾಕ್ ನಗರದ ವಾಟ್ ಪಾ ಲುವಾಂಗ್ ಟಾ ಬುವಾ (Wat Pa Luang Ta Bua) ಎಂಬ ಹೆಸರಿನ  ಒಂದು ಬೌದ್ಧ ದೇವಾಲಯದಲ್ಲಿಯೂ ಹುಲಿಗಳನ್ನು ಸಾಕುಮೃಗಗಳಂತೆ ಸಾಕಲಾಗಿದೆ. ಇಲ್ಲಿಯೂ ಸಹಾ ಈ ಹುಲಿಗಳನ್ನು ನೇವರಿಸಲು ಮತ್ತು ಫೋಟೋ ತೆಗೆಸಿಕೊಳ್ಳಲೂ ದರ ತೆರಬೇಕು.(ಸುಮಾರು ಎರಡೂವರೆ ಸಾವಿರ ರೂಪಾಯಿಗಳು) ಈ ಹುಲಿಗಳು ಮಾತ್ರ ಅಪ್ಪಟ ಬೌದ್ಧಮುನಿಗಳಂತೆಯೇ ಸದಾ ಶಾಂತವಾಗಿರುತ್ತವೆ. ಹುಲಿಗಳಿರುವ ಕಾರಣ ಈ ದೇವಲಯಕ್ಕೆ ಹುಲಿಗಳ ದೇವಾಲಯ (Temple of Tigers) ಎಂಬ ಅನ್ವರ್ಥನಾಮವೂ ಒದಗಿದೆ. ಕೆಲವು ವರ್ಷಗಳ ಹಿಂದೆ ಕಳ್ಳಸಾಗಣೆದಾರರು ಹುಲಿಮರಿಯೊಂದನ್ನು ಎಲ್ಲಿಯೋ ಕದ್ದೊಯ್ಯುತ್ತಿದ್ದುದನ್ನು ಹಿಡಿದ ಅರಣ್ಯ ರಕ್ಷಣಾದಳ ಬಳಿಕ ಸಾಕಲೆಂದು ಈ ಬೌದ್ಧಭಿಕ್ಷುಗಳಿಗೆ ನೀಡಿತ್ತು. ಮನೆಯ ಹಸುವಿನಂತೆಯೇ ಹುಲಿ ಬೆಳೆಯುತ್ತಿದ್ದುದನ್ನು ಗಮನಿಸಿದ ಜನರು ಕಳ್ಳಸಾಗಣೆದಾರರಿಂದ ಹಿಡಿದ ಇನ್ನಷ್ಟು ಹುಲಿಮರಿಗಳನ್ನು ದೇವಾಲಯದ ಬಾಗಿಲ ಬಳಿ ಬಿಟ್ಟು ಬರಲು ತೊಡಗಿದರು. ಆ ಮರಿಗಳು ದೊಡ್ಡವಾಗಿ ಅವುಗಳ ಸಂತತಿ ಬೆಳೆದು ಇಂದು ಒಟ್ಟು ಮೂವತ್ತ ನಾಲ್ಕುಹುಲಿಗಳು ದೇವಾಲಯದ ಆವರಣದಲ್ಲಿ ಜೀವಿಸುತ್ತಿವೆ.







ಎಷ್ಟಾದರೂ ವನ್ಯಮೃಗಗಳು  ತಮ್ಮ ಕ್ರೂರತ್ವವನ್ನು ಮರೆತಾವೆಯೇ? ಎಂದಾದರೊಮ್ಮೆ ತಮಾಷೆಗೆಂದು ಹುಲಿಯೋ ಸಿಂಹವೋ ಬರೆ ತನ್ನ ಪಂಜವನ್ನು ಬೀಸಿದರೆ ಓರ್ವ ಮನುಷ್ಯನನ್ನು ಪರಂಧಾಮಕ್ಕೆ ಅಟ್ಟಲು ಸಾಕು. ಇದೇ ಅನುಮಾನವನ್ನು ವ್ಯಕ್ತಪಡಿಸಿದ ಅರ್ಜೆಂಟೀನಾದ ಪ್ರಾಣಿರಕ್ಷಾ ಸಂಸ್ಥೆಯಾದ ಬಾರ್ನ್ ಫ್ರೀ ಫೌಂಡೇಶನ್ ವನ್ಯಮೃಗಗಳೊಂದಿಗೆ ಸಾರ್ವಜನಿಕರು ಮುಕ್ತವಾಗಿ ಬೆರೆಯುವುದನ್ನು ಖಂಡಿಸಿ 2009 ರಿಂದಲೂ ಪ್ರತಿಭಟನೆ ನಡೆಸುತ್ತಾ ಬಂದಿದೆ. ಈ ರೀತಿಯಾಗಿ ಅಪಾಯಕಾರಿಯಾದ ವನ್ಯಮೃಗಗಳೊಂದಿಗೆ ಸಾರ್ವಜನಿಕರ ಮುಖಾಮುಖಿಯಾಗುವುದು ಅಪಾಯಕ್ಕೆ ಒಂದು ತೆರೆದ ಆಹ್ವಾನ, ಪ್ರಾಣಿಗಳ ನಡವಳಿಕೆ ಯಾವಾಗ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಬಾರ್ನ್ ಫ್ರೀ ಸಂಸ್ಥೆಯ ನಿರ್ದೇಶಕರಾದ ವಿಲ್ ಟ್ರಾವೆರ್ಸ್ ತಿಳಿಸುತ್ತಾರೆ. ಆದರೆ ಲಾಭ ಪಡೆಯುತ್ತಿರುವ ಸರ್ಕಾರ ಈ ಮನವಿಗಳಿಗೆ ಜಪ್ಪೆನ್ನದೇ ವನ್ಯಪ್ರಾಣಿಗಳೊಂದಿಗೆ ಸಾರ್ವಜನಿಕರ ಒಡನಾಟದ ವ್ಯಾಪಾರವನ್ನು ಮುಂದುವರೆಸಿಕೊಂಡು ಬಂದಿದೆ. ಯಾವುದಾದರೂ ಅಪಾಯ ಸಂಭವಿಸುವ ಮೊದಲೇ ಯಾವುದಾದರೂ ಕ್ರಮ ಕೈಗೊಳ್ಳಲಾಗುತ್ತದೆಯೋ ಎಂದು ಕಾದು ನೋಡಬೇಕು.

(ಈ ಲೇಖನ ಸಂಯುಕ್ತ ಕರ್ನಾಟಕದ 'ಭಿನ್ನ ವಿಭಿನ್ನ'ವಿಭಾಗದಲ್ಲಿ ಜೂನ್ 20, 2012 ರಂದು ಪ್ರಕಟವಾಗಿದೆ)