ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಮಾರ್ಚ್ 13, 2009

ಥಾಯ್ಲೆಂಡ್: ತೆಂಗಿನಕಾಯಿ ಕೀಳುವ ಮಂಗನಿಂದ ಮಾಲೀಕನ ಕೊಲೆ


ಥಾಲ್ಲೆಂಡ್, ಮಾರ್ಚ್ 13:  ಭಾರತದ ಕೇರಳದಲ್ಲಿ ಹಾಗೂ ಇನ್ನೂ ಹಲವೆಡೆ ತೆಂಗಿನಮರದಿಂದ ತೆಂಗಿನಕಾಯಿಗಳನ್ನು ಉದುರಿಸಲು ಮಂಗಗಳಿಗೆ ತರಬೇತಿ ನೀಡಲಾಗಿರುತ್ತದೆ. ಈ ಮಂಗಗಳು ಲೀಲಾಜಾಲವಾಗಿ ಮರಹತ್ತಿ ಪಕ್ವವಾದ ತೆಂಗಿನಕಾಯಿಗಳನ್ನು ಗುರುತಿಸಿ ಅವುಗಳನ್ನು ತಿರುಚಿ ಕೆಳಕ್ಕೆಸೆಯುವ ಅಧ್ಬುತ ಸಾಮರ್ಥ್ಯ ಪಡೆದಿರುತ್ತವೆ.

ತೆಂಗಿನ ಕಾಯಿ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ನಿತ್ಯಾಧಾರವಾಗಿರುವಂತೆಯೇ ಪೂರ್ವದ ಥಾಯ್ಲೆಂಡಿಗೂ ಸಹಾ.  ಅಲ್ಲಿಯೂ ತೆಂಗಿನಕಾಯಿ ಕೀಳುವವರಿಗೆ ಬರ. ಆದ್ದರಿಂದ ತೆಂಗಿನ ಕಾಯಿ ಕೀಳುವ ಮಂಗಗಳಿಗೆ ಭಾರೀ ಬೇಡಿಕೆ. ಈ ಬೇಡಿಕೆಯ ಮೂಲಕ ಮಂಗಗಳಿಗೂ ದುಬಾರಿ ಬೆಲೆ.

ಕಳೆದ ವರ್ಷ ಥಾಯ್ಲೆಂಡಿನ ನಾಕೋರಾನ್ ಶ್ರೀ ಥಮಾರಾಟ್ ಎಂಬಲ್ಲಿ ವಾಸವಾಗಿದ್ದ ಲೀಲಿಟ್ ಜಾಂಛೂಮ್ ಎಂಬ ನಲವತ್ತೆಂಟು ವರ್ಷದ ಕೃಷಿಕರೊಬ್ಬರು ನೂರಾಮೂವತ್ತು ಡಾಲರ್ ತೆತ್ತು ತರಬೇತುಗೊಂಡ ಮಂಗವೊಂದನ್ನು ಖರೀದಿಸಿ ಬ್ರದರ್ ಕ್ವಾನ್ ಎಂದು ಹೆಸರಿಟ್ಟಿದ್ದರು. ತಮ್ಮ ತೋಟಗಳ ತೆಂಗಿನಕಾಯಿಗಳನ್ನು ಕೀಳುವುದು ಮಾತ್ರವಲ್ಲದೇ ಅಕ್ಕಪಕ್ಕದ ತೋಟಗಳಿಂದ ಕಾಯಿ ಕೀಳಲು ಪ್ರತಿ ಕಾಯಿಗೆ ನಾಲ್ಕು ಪೆನ್ನಿಯಂತೆ ಬಾಡಿಗೆಗೂ ದುಡಿಸಿಕೊಳ್ಳುತ್ತಿದ್ದರು.

ಸುಮಾರು ಒಂದು ವರ್ಷ ಯಾವುದೇ ತಕರಾರಿಲ್ಲದೆ ಕೆಲಸ ಮಾಡಿದ ಮಾರುತಿಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತೇನೋ, ಆದರೆ ಹಣ ಎಣಿಸುತ್ತಿದ್ದ ಮಾಲಿಕನಿಗೆ ಅದರ ಅಳಲು ಅರ್ಥವಾಗಬೇಕಲ್ಲ, ಇನ್ನಷ್ಟು ಕಾಯಿಗಳನ್ನು ಉದುರಿಸುವಂತೆ ಮಾರುತಿಯನ್ನು ಹುರಿದುಂಬಿಸುತ್ತಿದ್ದರು. ಅಲ್ಲದೇ ಮರವನ್ನೇರಲು ನಿರಾಕರಿಸಿದರೆ ಏಟುಗಳ ಶಿಕ್ಷೆಯನ್ನೂ ನೀಡಲಾಗುತ್ತಿತ್ತು. 

ಕಳೆದ ಮಾರ್ಚ್ ಹನ್ನೊಂದನೇ ತಾರೀಖಿಗೆ ಅದೇ ಪ್ರಕಾರ ಕಾಯಿ ಕೀಳೆಂದು ಪೀಡಿಸಿದ ಮಾಲಿಕನ ಮೇಲೆ ಮಾರುತಿ ದಪ್ಪನಾದ ತೆಂಗಿನಕಾಯಿಯೊಂದನ್ನು ನೇರ ತಲೆಯ ಮೇಲೆ ಬೀಳುವಂತೆ ಎಸೆದಿತ್ತು.  ನೇರವಾಗಿ ಆಗಸದಿಂದ ನೆತ್ತಿಗೆ ಬಿದ್ದ ಹೊಡೆತಕ್ಕೆ ಕಿಮಕ್ ಕಮ್ಮಕ್ ಎನ್ನದೇ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  

ಸ್ಥಳದಲ್ಲಿಯೇ ಉಪಸ್ಥಿತರಿದ್ದವರು ಮಂಗ ಉದ್ದೇಶಪೂರ್ವಕವಾಗಿಯೇ ಮಾಲಿಕನ ತಲೆಯ ಮೇಲೆ ತೆಂಗಿನ ಕಾಯಿ ಎಸೆದು ಕೊಲೆ ಮಾಡಿದೆ ಎಂದು ಆರೋಪಿಸಿದ್ದಾರೆ.  ಮೃತನ ಪತ್ನಿ ಮಂಗ ತಮ್ಮೊಂದಿಗೆ ಕಳೆದವರ್ಷದಿಂದಲೂ ಸ್ನೇಹದಿಂದಿದ್ದು ಈಗ ಕೆಲಸದ ಒತ್ತಡ ಅದಕ್ಕೆ ಈರೀತಿ ಮಾಡಲು ಪ್ರೇರೇಪಿಸಿರಬಹುದೆಂದು ತಿಳಿಸಿದ್ದಾರೆ.

ಮಂಗನಿಗೆ ಕೊಲೆ ಆರೋಪ ಹೊರಿಸಲಾಗುತ್ತದೆಯೇ? ಹೊರಿಸಿದರೂ ಯಾವ ಸೆಕ್ಷನ್ ಹಾಕಲಾಗುತ್ತದೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ. ಆದರೆ ಕೊಲೆ ಮಾಡಿದ ಮಾರುತಿ ನಿರಾಳವಾಗಿ ಕುಳಿತಿದೆ.

ಮಂಗಳವಾರ, ಮಾರ್ಚ್ 10, 2009

ಜಾರ್ಜಿಯಾ: ಜೈಲಿನಿಂದ ಆರಾಮವಾಗಿ ಪಾರಾದ, ಮತ್ತೆ ಹಿಂದಿರುಗಿದಾಗ ಸಿಕ್ಕಿಬಿದ್ದ


ಜಾರ್ಜಿಯಾ, ಮಾರ್ಚ್ 10: ಜೈಲಿನಲ್ಲಿ ಕೊಳೆಯುತ್ತಿರುವವರು ತಾವು ಯಾವಾಗ ಜೈಲಿನಿಂದ ಪಾರಾಗುತ್ತೇವೆಯೋ ಎಂದು ಜಾತಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಆದರೆ ಅಮೇರಿಕಾದ ಜಾರ್ಜಿಯಾ ರಾಜ್ಯದ ವುಡ್ ಬೈನ್ ಎಂಬ ಪಟ್ಟಣದ ಜೈಲೊಂದರಲ್ಲಿ ಕೈದಿಯಾಗಿದ್ದ ಹ್ಯಾರಿ ಜಾಕ್ಸನ್ ಎಂಬ ಇಪ್ಪತ್ತೈದು ವರ್ಷದ ತರುಣನೊಬ್ಬನಿಗೆ ಸಿಗರೇಟು ಸೇದುವ ಹಂಬಲ ತಡೆಯಲಾಗದೇ ಹೇಗೋ ಜೈಲಿನ ಬಂಧನವನ್ನು ಪಾರಾಗಿ ಹೊರಬಂದಿದ್ದ. ಬಂದವ ಸುಮ್ಮನೇ ಪರಾರಿಯಾಗಬಾರದೇ, ಅದುಬಿಟ್ಟು ಸಮೀಪದ ಅಂಗಡಿಗೆ ನುಗ್ಗಿ ಹದಿನಾಲ್ಕು ಪ್ಯಾಕೆಟ್ ಸಿಗರೇಟುಗಳನ್ನು ಕದ್ದು ಮತ್ತೆ ಜೈಲಿಗೇ ವಾಪಸಾದ.  

ಆದರೆ ವಾಪಸ್ಸು ಬರುವಾಗ ಯಾವುದೋ ಘಳಿಗೆಯಲ್ಲಿ ಅಲಾರಾಂ ಹೊಡೆದು ಸುರಕ್ಷಾ ತಂಡದವರ ಕೈಗೆ ಸಿಕ್ಕಿಬಿದ್ದ. ಈತ ಪರಾರಿಯಾಗಿದ್ದು ಹೇಗೆ ಎಂದು ತಲೆಕೆಡಿಸಿಕೊಂಡ ಜೈಲಿನ ಷೆರೀಫ್ ಟಾಮಿ ಗ್ರೆಗರಿ ಈತ ವ್ಯಾಯಾಮಶಾಲೆಯ ಗೋಡೆ ಹತ್ತಿ ಅಲ್ಲಿಂದ ಜೈಲಿನ ಬೇಲಿಯನ್ನು ಹಾರಿ ಬಂದಿದ್ದ ಎಂದು ತಿಳಿಸಿದ್ದಾರೆ. ಈಗ ಹಿಂದಿನ ಶಿಕ್ಷೆಯ ಜೊತೆಗೆ ಜೈಲು ಪಾರಾಗಿ ಹೋದ ಮತ್ತು ಕಳ್ಳತನದ ಅಪಾದನೆಯನ್ನೂ ಜಾಕ್ಸನ್ ಎದುರಿಸಬೇಕಾಗಿದೆ. ಇದಕ್ಕೂ ಮೊದಲು ನಿಯಂತ್ರಿತ ವಸ್ತುವೊಂದನ್ನು ಹೊಂದಿದ್ದ ಮತ್ತು ತರಬೇತಿಯ ಅವಧಿಗೂ ಮುನ್ನ ಓಡಿಹೋದ ಆರೋಪದ ಮೇಲೆ ಜೈಲುಶಿಕ್ಷೆ ಅನುಭವಿಸುತ್ತಿದ್ದ. ಈಗ ಹದಿನಾಲ್ಕು ಪ್ಯಾಕೆಟ್ ಸಿಗರೇಟು ಸೇದಲು ಹೆಚ್ಚು ಸಮಯ ಸಿಗುತ್ತದಂತಾಯಿತು. 

ಕೃಪೆ: ಬಿಬಿಸಿ

ಶುಕ್ರವಾರ, ಮಾರ್ಚ್ 6, 2009

ಬರಲಿದೆ - ಅರೆಪಾರದರ್ಶಕ ಕಾಂಕ್ರೀಟ್


ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಾಮಾಗ್ರಿ ಸಿಮೆಂಟ್.  ಸಿಮೆಂಟ್ ಹಾಗೂ ಜಲ್ಲಿಕಲ್ಲಿನ ಮಿಶ್ರಣವೇ ಕಾಂಕ್ರೀಟು.  ಒಂದು ವೇಳೆ ಈ ಕಾಂಕ್ರೀಟು ಪಾರದರ್ಶಕವಾಗಿದ್ದಿದ್ದರೆ?

ಹಂಗರಿ ದೇಶದ ಆರನ್ ಲೊಸೊನ್ಸ್ಕಿ ಎಂಬುವರು ಸಿಮೆಂಟಿಗೆ ಹಾಗೂ ಜಲ್ಲಿಕಲ್ಲಿಗೆ ಪರ್ಯಾಯವಾದ ಆದರೆ ಅವುಗಳಷ್ಟೇ ಸುದೃಢವಾದ ಸಾಮಾಗ್ರಿಗಳಿಂದ ಅರೆಪಾರದರ್ಶಕ ಕಾಂಕ್ರೀಟನ್ನು ಸಿದ್ಧಪಡಿಸಿದ್ದಾರೆ. ಲಿಟ್ರಾಕಾನ್ (LiTraCon - light transmitting concrete) ಎಂಬ ಹೆಸರಿನ ಈ ಸಾಮಾಗ್ರಿ ಹೊರಗಿನ ಬೆಳಕಿನ ಅರ್ಧದಷ್ಟನ್ನು ತನ್ಮೂಲಕ ಹಾಯಲು ಸಾಧ್ಯವಾಗುವಂತೆ ನಿರ್ಮಿತವಾಗಿದೆ. ಈ ಕಾಂಕ್ರಿಟನ್ನು ಅವರು ಸುಮಾರು ೨೦೦೧ ರಲ್ಲಿಯೇ ಸಿದ್ಧಪಡಿಸಿದ್ದರೂ ಇನ್ನೂ ಹತ್ತು ಹಲವು ಪರೀಕ್ಷೆಗಳ ಕಾರಣದಿಂದಾಗಿ ಮಾರುಕಟ್ಟೆಗೆ ತರುವಲ್ಲಿ ವಿಳಂಬವಾಗಿದೆ.  ಜರ್ಮನಿಯ ಲಿಟ್ರಾಕಾನ್ ಸಂಸ್ಥೆ ಈ ವರ್ಷ ಈ ವಸ್ತುವನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಅಷ್ಟಕ್ಕೂ ಪಾರದರ್ಶಕ ಕಾಂಕ್ರೀಟ್ ಆಗಿದ್ದರೆ ಪ್ರಯೋಜನವೇನು ಎಂದು ಎಲ್ಲರೂ ಕೇಳುವ ಮೊದಲ ಪ್ರಶ್ನೆ.  ಕಟ್ಟಡ ನಿರ್ಮಾಣದಲ್ಲಿ ಬೆಳಕಿಗೆ ಬಹುಮಹತ್ವ ನೀಡಲಾಗುತ್ತದೆ.  ಬೆಳಕು ಎಲ್ಲೆಡೆ ಸಮಾನವಾಗಿ ಲಭ್ಯವಾಗುವಂತೆ ಕಟ್ಟಡವಿನ್ಯಾಸಕಾರರು ಕಟ್ಟಡಗಳಲ್ಲಿ ಹೆಚ್ಚಿನ ಸ್ಥಳಾವಕಾಶ ನೀಡಬೇಕಾಗುತ್ತದೆ.  ಪರಿಣಾಮವಾಗಿ ಕಟ್ಟಡ ಹೆಚ್ಚಿನ ಸ್ಥಳದ ಕಾರಣ ತುಸು ದುಬಾರಿಯಾಗುತ್ತದೆ.  ದೊಡ್ಡ ದೊಡ್ಡ ಕಿಟಕಿಗಳನ್ನು ನೀಡಬೇಕಾಗುತ್ತದೆ.  ಬೆಳಕು ಲಭ್ಯವಿಲ್ಲದೆಡೆ ವಿದ್ಯುತ್ ದೀಪಗಳನ್ನು ಅಳವಡಿಸಿ ಹಗಲಿನಲ್ಲಿಯೂ ವಿದ್ಯುತ್ ಬಳಸಬೇಕಾಗುತ್ತದೆ. 

ಅರೆಪಾರದರ್ಶಕ ಕಾಂಕ್ರೀಟ್ ಬಳಸಿ ನಿರ್ಮಿಸಿದ ಕಟ್ಟಡಗಳಲ್ಲಿ ಸಾಕಷ್ಟು ಮಟ್ಟಿನ ಬೆಳಕು ಗೋಡೆಯಿಂದಲೇ ಲಭ್ಯವಾಗುವುದರಿಂದ ವಿದ್ಯುತ್ ದೀಪ ಉರಿಸುವ ಅಗತ್ಯವಿಲ್ಲ. ಪರಿಣಾಮ ಪೋಲಾಗುತ್ತಿದ್ದ ವಿದ್ಯುತ್ ಗೆ ಶಾಶ್ವತ ಕಡಿವಾಣ.  ದೊಡ್ಡ ದೊಡ್ಡ ಕಿಟಕಿ ರಚಿಸಬೇಕಾಗಿಲ್ಲ. ಬಿಸಿಲನ್ನು ಹೀರದ ಕಾಂಕ್ರೀಟು ಒಳಗಿನ ವಾತಾವರಣವನ್ನು ತಂಪಾಗಿಸಿರುವುದರಿಂದ ಹವಾನಿಯಂತ್ರಣ ಖರ್ಚಿನಲ್ಲೂ ಉಳಿತಾಯ. 

ಕಳೆದ ಸುಮಾರು ಎಂಟು ವರ್ಷಗಳಲ್ಲಿ ಹಲವು ಮಾರ್ಪಾಡುಗಳನ್ನು ಮೂಡಿಸಿಕೊಂಡು ವಿವಿಧ ಬಗೆಗಳಲ್ಲಿ ಲಿಟ್ರಾಕಾನ್ ಈಗ ಅಮೇರಿಕಾದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.  ಕಳೆದ ಜನವರಿ ನ್ಯೂಯಾರ್ಕಿನಲ್ಲಿ ನಡೆದ  ಯುವ ಸಂಶೋಧಕರಿಗೆ ನೀಡಲಾಗುವ Ernst & Young "Innovator" award, 2008 ಪ್ರಶಸ್ತಿಗೂ ಪಾತ್ರರಾಗಿದ್ದಾರೆ.


ಇವರ ಪಾರದರ್ಶಕ ಉತ್ಪನ್ನಗಳ ಪ್ರದರ್ಶನ ನ್ಯೂಯಾರ್ಕ್ ನಗರದ AIA Center for Architecture on exhibition ಸಭಾಂಗಣದಲ್ಲಿ ಜನವರಿ ೨೨ ರಿಂದ ಪ್ರಾರಂಭವಾಗಿದ್ದು ಏಪ್ರಿಲ್ ೨೫ ರ ವರೆಗೂ ನಡೆಯಲಿದೆ.  ಮೇಕ್ ಇಟ್ ವರ್ಕ್ ಎಂಬ ಈ ಅಭಿಯಾನದಲ್ಲಿ ವಿಶ್ವದ ಹಲವು ಇಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲಾತ್ತಿದ್ದು ಪಾರದರ್ಶಕ ಕಾಂಕ್ರೀಟ್ ಗಮನ ಸೆಳೆಯುತ್ತಿದೆ.