ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಜನವರಿ 7, 2010

ಎರೆಡು ರೂಪಾಯಿ ಡಾಕ್ಟ್ರು


ಅರ್ಶದ್ ಹುಸೇನ್ ಎಂ.ಹೆಚ್. ದುಬೈ.

ಪ್ರಥಮ ಭೇಟಿಗೆ ಈ ಡಾಕ್ಟ್ರು ವಿಧಿಸುವುದು ಎರೆಡು ರೂಪಾಯಿ, ಎರಡನೆಯ ಭೇಟಿಗೆ?…. ಒಂದು ರೂಪಾಯಿ


ಲಕ್ಷಗಟ್ಟಲೇ ಡೊನೇಶನ್ ನೀಡಿ ಎಂಬಿಬಿಎಸ್ ಮಾಡಿ ಲಕ್ಷಗಟ್ಟಲೇ ಕಮಾಯಿಸುವ ನಿಟ್ಟಿನಲ್ಲಿ ವೈದ್ಯರಾಗುವವರ ಇಂದಿನ ದಿನಗಳಲ್ಲಿ ಯಾರಾದರೂ ಬಡವರ ಸೇವೆ ಮಾಡುತ್ತೇನೆ, ಹಳ್ಳಿಗೆ ಹೋಗುತ್ತೇನೆ ಎಂದರೆ ನಗುವವರ ಸಂಖ್ಯೆಯೇ ಹೆಚ್ಚು.

ಆದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಪ್ರದೇಶವಾದ ಮೇಲ್ಘಾಟ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರವೀಂದ್ರ ಕೊಯ್ಲೆ ನಿಜಕ್ಕೂ ಅಭಿನಂದನಾರ್ಹರು.

ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪದವಿಗಳನ್ನು ಪಡೆದ ಡಾ. ರವೀಂದ್ರ ಮನಸ್ಸು ಮಾಡಿದ್ದರೆ ನಗರದಲ್ಲಿದ್ದು ಲಕ್ಷಗಟ್ಟಲೇ ದುಡಿಯಬಹುದಿತ್ತು. ಆದರೆ ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಅಪ್ಪಟ ಅಭಿಮಾನಿಯಾದ ಅವರು ವಿದ್ಯಾರ್ಥಿದೆಸೆಯಲ್ಲಿದ್ದಾಗ ಓದಿದ್ದ ರಸ್ಕಿನ್ ಬಾಂಡ್ ರವರ ವಾಕ್ಯಗಳು ಅವರ ಜೀವನದ ಮೇಲೆ ಗಾಢ ಪ್ರಭಾವ ಬೀರಿದ್ದವು. ’ನಿಮಗೆ ನಿಜವಾಗಿಯೂ ಜನಸೇವೆ ಮಾಡಬೇಕೆಂದಿದ್ದರೆ ಮೊದಲು ಅತ್ಯಂತ ಬಡವರಿಗೆ ಹಾಗೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದವವ ನಡುವೆ ಕಾರ್ಯನಿರ್ವಹಿಸಿ’ ಎಂದು ರಸ್ಕಿನ್ ಬಾಂಡ್ ಕರೆಯಿತ್ತಿದ್ದರು. ಆಗ ನಾಗಪುರ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಡಾ. ರವೀಂದ್ರ ಪದವಿ ಪಡೆದ ಬಳಿಕ ವೈದ್ಯಕೀಯ ಸೇವೆ ಅತ್ಯಂತ ದುರ್ಲಭವಾದೆಡೆ ತನ್ನ ಸೇವೆ ಮುಡಿಪು ಎಂದು ಸಂಕಲ್ಪಮಾಡಿಕೊಂಡಿಟ್ಟು ಬಿಟ್ಟಿದ್ದರು.

ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ಅವರು ಮಹಾರಾಷ್ಟ್ರ್‍ಅ, ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮಪ್ರದೇಶಗಳಿಗೆ ಭೇಟಿ ನೀಡಿ ಕಡೆಗೆ ಮಹಾರಾಷ್ಟ್ರದ ಗಾದ್ರಿಚೋಲಿ ಎಂಬ ಪ್ರದೇಶದಲ್ಲಿ ತಮ್ಮ ಸೇವೆ ಆರಂಭಿಸಿದರು. ಆದರೆ ಆ ಪ್ರದೇಶದಲ್ಲಿ ನಕ್ಸಲರ ಕಾಟ ಅತಿಯಾಗಿದ್ದು ತನ್ನ ಮಗನ ಕ್ಷೇಮದ ಕಾಳಜಿ ವಹಿಸಿದ ಅವರ ತಾಯಿ ಅಷ್ಟೇ ಹಿಂದುಳಿದ ಪ್ರದೇಶವಾದ ಆದರೆ ಸುರಕ್ಷಿತವಾದ ಮೇಲ್ಘಾಟ್ ಎಂಬಲ್ಲಿ ಅವರ ಸೇವೆ ನೀಡಲು ಆಗ್ರಹಿಸಿದ್ದರು. ತಮ್ಮ ತಾಯಿಯ ಹಿತವಚನಗಳನ್ನು ಶಿರಾವಹಿಸಿದ ಡಾ. ರವೀಂದ್ರ ಮೇಲ್ಘಾಟಿನಲ್ಲಿ ತಮ್ಮ ಸೇವೆ ಆರಂಭಿಸಿದರು.

ಸುಮಾರು ಒಂದೂವರೆ ವರ್ಷ ತನ್ನ ಸೇವೆಯನ್ನು ಅಲ್ಲಿನ ಜನತೆಗೆ ನೀಡಿದ ಡಾ. ರವೀಂದ್ರರಿಗೆ ಅಲ್ಲಿನ ಜನಗಳಿಗೆ ಕೇವಲ ಮಾತ್ರೆ, ಇಂಜೆಕ್ಷನ್ನುಗಳ ವೈದ್ಯಕೀಯ ಸೇವೆ ಮಾತ್ರವಲ್ಲದೇ ಸಾಮಾಜಿಕ ಕಾಳಜಿಯ ಸಾಂತ್ವಾನವೂ ಅವಶ್ಯಕವಿದೆ ಎಂದು ಮನಗಂಡಿತ್ತು. ನಂತರ ನಾಗಪುರಕ್ಕೆ ಹಿಂದಿರುಗಿ ’ರಕ್ಷಣಾತ್ಮಕ ಮತ್ತು ಸಾಮಾಜಿಕ ವೈದ್ಯಶಾಸ್ತ್ರ’ ಎಂಬ ವಿಷಯದಲ್ಲಿ (MD in preventive and social medicine) ಎಂ.ಡಿ. ಪದವಿಯನ್ನು ಪಡೆದು ಮೇಲ್ಘಾಟಿಗೆ ಹಿಂದಿರುಗಿದರು.

ಅಂದಿನಿಂದ ಸತತವಾಗಿ ಹಿಂದುಳಿದ ಜನರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ವೈದ್ಯಕೀಯ ಮತ್ತು ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಅವರು ಈ ಸೇವೆ ಪ್ರಾರಂಭಿಸಿ ಇಂದಿಗೆ ಇಪ್ಪತ್ತನಾಲ್ಕು ವರ್ಷ ಕಳೆದವು. ಇಂದಿಗೂ ಅವರು ತಮ್ಮ ರೋಗಿಗಳಿಂದ ವಸೂಲು ಮಾಡುವ ಮೊತ್ತ ಮೊದಲನೆಯ ಭೇಟಿಗೆ ಎರೆಡು ರೂ ! ಹಾಗೂ ಮುಂದಿನ ಭೇಟಿಗೆ ಒಂದು ರೂ ! ಆರಂಭಿಕ ದಿನಗಳಲ್ಲಿ ಧರ್ನಿಯಿಂದ ನಲವತ್ತು ಕಿ.ಮೀ. ದೂರವಿರುವ ಬೈರಗಡ ಎಂಬಲ್ಲಿ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದ ಅವರಿಗೆ ದಾರಿಯಲ್ಲಿ ತಿಂಗಳಿಗೆ ಕನಿಷ್ಟ ಒಂದಾದರೂ ಹುಲಿಯ ದರ್ಶನವಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಒಂದೂ ಹುಲಿಯನ್ನು ತಾನು ಕಂಡಿಲ್ಲ ಎಂದು ಡಾ. ರವೀಂದ್ರ ತಿಳಿಸುತ್ತಾರೆ.

ಆ ಪ್ರದೇಶದಲ್ಲಿ ವಾಸವಾಗಿರುವ ಕೋರ್ಕು ಎಂಬ ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವಿರುದ್ಧ ಒಮ್ಮೆ ಕೋರ್ಟು ಮೆಟ್ಟಿಲನ್ನೂ ಹತ್ತಿದ್ದರು.

ಡಾ. ರವೀಂದ್ರರಿಗೆ ಜೈ ಹೋ! ಎನ್ನೋಣವೇ

2 ಕಾಮೆಂಟ್‌ಗಳು: